ಗೆಳತಿ,
ಹೂವಾಗಿ, ಹಣ್ಣಾಗಿ
ಕನಸಾಗಿ, ಕಣ್ಣಾಗಿ
ಹಿತದ ಗೆಳತಿಯಾಗಿ
ನನಗೆಲ್ಲಾ ನೀನಾಗಿ
ದೇವತೆಯಾಗಿ
ನನ್ನ ಮನದಲ್ಲಿ ನೀನಿದ್ದೆ............
ಆ ಒಂದು ಕ್ಷಣ
ಬಿಟ್ಟೆ ಎಲ್ಲಾ ಚಿಂತೆ
ಬಾಳ ಗುರಿಯ ಕತೆ
ಭವಿಸಿದ ಎಲ್ಲಾ ವ್ಯಥೆ
ಕೊನೆಗೆ ನನ್ನನ್ನೇ ಮರೆತೆ
ಆದರೂ
ಕೆಡಿಸಿ ಬಿಟ್ಟೆಯಲ್ಲೆ ನೀ ನಿದ್ದೆ.............!
ಸ್ನೇಹಿತರೇ,
ಬ್ಲಾಗ್ ಲೋಕದಿಂದ ದೂರ ಉಳಿದು ತುಂಬಾ ದಿನಗಳಾದವು. ಎಂದೋ ಗೀಚಿದ್ದ ಈ ಸಾಲುಗಳು ಇಂದು ನೆನಪಾಗಿ ನಿಮ್ಮ ಮುಂದಿಟ್ಟಿದ್ದೇನೆ.
ಈ ಮಧ್ಯೆ ದೀಪಾವಳಿ ಬಂದು ಹೋಯಿತು, ಕನ್ನಡ ರಾಜ್ಯೋತ್ಸವ ಆಚರಣೆಯಾಯ್ತು, ಆದರೂ ನನ್ನ ಬ್ಲಾಗ್ ಮನೆಯ ಶೃಂಗಾರವಿಲ್ಲ, ತಳಿರು ತೋರಣಗಳಿಲ್ಲ. ಹಬ್ಬವಿಲ್ಲ, ನಿಮಗೆಲ್ಲ ಶುಭಾಷಯಗಳನ್ನೂ ಹೇಳಲಿಲ್ಲ. ಯಾರ ಮನೆಗೂ ಭೇಟಿಯಿಲ್ಲ, ನಿಮ್ಮ ಬರಹಗಳನ್ನೆಲ್ಲ ಓದಲೂ ಇಲ್ಲ.
ಹೌದು ನಾನು ತಪ್ಪು ಮಾಡಿದ್ದೇನೆ.
ಆದರೆ ಏನು ಮಾಡುವುದು ಹೇಳಿ, ಕೆಲಸದ ಒತ್ತಡ ಅದೆಷ್ಟಿದೆಯೆಂದರೆ ಊಟ ನಿದ್ದೆಗೂ ಸಮಯವಿಲ್ಲ. ಹೊತ್ತು ಗೊತ್ತೆಂಬುದಿಲ್ಲ. ಹೊಸದಾಗಿ ಆರಂಭಗೊಂಡ 3 ತಾರಾ ಹೋಟೆಲ್ಲಿನ ಸಂಪೂರ್ಣ ಜವಬ್ದಾರಿ ನನಗೆ ಸಿಕ್ಕಿದ್ದರ ಕೊಡುಗೆ ಇದು! ಕೋಟ್ಯಾಂತರ ಖರ್ಚು ಮಾಡಿ ಪ್ರಾರಂಭಿಸಿದ ಈ ಹೋಟೆಲ್ಲನ್ನು ಮಗುವಿನಂತೆ ಜೋಪಾನ ಮಾಡುವುದು ನಮ್ಮ ಕರ್ತವ್ಯ ಅಲ್ಲವಾ? ಮಗು ಬೆಳೆದು ದೊಡ್ಡದಾದ ಮೇಲೆ ಹೊಣೆಗಾರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆ ಇದೂ ಕೂಡ!
ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಇಣುಕಿ ಹೋಗುತ್ತಿದ್ದೇನೆ. ಆದಷ್ಟು ಬೇಗ ಸಮಯ ಮಾಡಿಕೊಂಡು ಎಲ್ಲರ ಮನೆಗೂ ಬಂದು ತರ್ಲೆ ಮಾಡುತ್ತಾ ಇರುತ್ತೇನೆ! ಉದಾಹರಣೆಗೆ
ತಡವಾಗಿ ಮತ್ತು ಮುಂದಿನ ವರ್ಷಕ್ಕೆ ಮುಂಗಡವಾಗಿ ದೀಪಾವಳಿಯ ಮತ್ತು ಕನ್ನಡ ರಾಜೋತ್ಸವದ ಶುಭಾಷಯಗಳು!
ಅಲ್ಲಿಯವರೆಗೂ ಪ್ರೀತಿ ಮಮತೆ ಇಂದಿನಂತೆಯೇ ಇರಲಿ!
ನಿಮ್ಮವ........
ಮನದಾಳದಿಂದ..... ಪ್ರವೀಣ್....