Tuesday, July 20, 2010

ರತಿದೇವಿಯ ತಂಗಿಯೇ

ಆರೋಗ್ಯ ಕೈಕೊಟ್ಟು  ಹತ್ತು ದಿನ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಬ್ಲಾಗ್ ಲೋಕದತ್ತ ಬರಲಾಗಿರಲಿಲ್ಲ. ಯಾರ ಬ್ಲಾಗಿಗೂ ಬೇಟಿ ಕೊಡಲಿಲ್ಲ. ದಯವಿಟ್ಟು ಕ್ಷಮಿಸ್ತೀರಲ್ಲ!ಈಗ ಮನೆಯಲ್ಲಿ ಬೆಡ್ ರೆಸ್ಟ್ ತೆಗೆದುಕೊಳ್ತಾ ಇದ್ದೇನೆ. ಜೊತೆಗೇ ನನ್ನ ಲ್ಯಾಪ್ ಕೂಡ ನನ್ನ ಕೈ ಸೇರಿದೆ! ಇನ್ನು ಎಲ್ಲಾ ಗೆಳೆಯರ ಬ್ಲಾಗಿಗೂ ಬರುತ್ತೇನೆ.

ಈ ಕವನ ಸುಮಾರು ಎಂಟು ವರ್ಷಗಳ ಹಿಂದೆ ಅವಳನ್ನು ನೋಡಿದಾಗ ಬರೆದದ್ದು. ಡೈರಿಯ ಯಾವುದೋ ಮೂಲೆಯಲ್ಲಿದ್ದ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ. ಹೇಗಿದೆ ಅಂತ ಹೇಳಿ. 
ಆಕೆಯಿಂದ ಬಂದ ಅಭಿಪ್ರಾಯ ಏನು ಗೊತ್ತಾ?
"ತುಂಬಾ ಕೆಟ್ಟದಾಗಿದೆ"
ನಿಜವಾಗಿಯೂ ಅಷ್ಟು ಕೆಟ್ಟದಾಗಿದೆಯಾ? ನೀವೇ ಹೇಳ್ಬೇಕು.................


ಆಕೆಯ  ಕುಡಿನೋಟಕೆ .....
ಬಳುಕುವ  ವಯ್ಯಾರಕೆ..........
ನಾ ಮರೆತು ಹೋದೆ ಜಗವಾ
ನಾ ಮರೆತು ಹೋದೆ ಜಗವಾ

ಮನ್ಮನ ರಾಣಿಯ ಹೋಲುವ ನೀನು
ರತಿದೇವಿಯ ತಂಗಿಯೇ
ಆಗಸದಿಂದ ಧರೆಗಿಳಿದ ರಂಭೆ
ಊರ್ವಶಿಯ ಪ್ರತಿರೂಪವೇ...........

ನವಿಲ ನಾಟ್ಯದಂತೆ ನಿನ್ನ ನಡಿಗೆ
ಲತೆಯು ಬಳುಕುವಂತೆ ನಿನ್ನ ನಡುಗೆ
ನವಿಲೇ ಸೋತು ನಾಟ್ಯವ ಮರೆತು
ನಿನಗಾರು ಸಾಟಿ ಚಲುವೆ ಎಂದಿತು............

ಮೋಹದ ಆಸೆಯ ಕಂಗಳ ಕಾಂತಿಗೆ 
ನಾ ಸೋತೆ ನಿನ್ನದರಕೆ
ಸೇಬಿನ ಬಣ್ಣದ ಕೆಂಪು ಕೆನ್ನೆಗೆ
ಬೆರಗಾದೆ ಸೌಂದರ್ಯಕೆ..............

ಹೃದಯವು ಹಾಡಿತು ಮೋಹದಿಂದಲಿ
ಪ್ರೀತಿ ತುಂಬಿದ ಬಯಕೆಯಿಂದಲಿ
ಸಹಿಸಲಾರೆ ನಾ ಈ ತವಕ 
ನೀ ಒಲಿದರೆ ಜನುಮ ಸಾರ್ಥಕ................

 ಚಲುವೆ ಮೋಹದೀ ನುಡಿಸು ನೀ 
ನನ್ನ ಹೃದಯದ ವೀಣೆಯಾ 
 ಹೊಸಹೊಸ ರಾಗವ ಹಾಡುತ ಗೆಳತಿ
ಈ ಜೀವ ಉಳಿಸುವೆಯಾ............

ಒಲಿದು ಬಾರೆ ರತಿಯ ತಂಗಿಯೇ
ಪ್ರೀತಿ ತಾರೆ ಈ ಬರಡು ಜೀವಕೆ
ದೀಪವಾಗಿ ಬಾಳ ಬೆಳಗಿಸು 
ಬೇಡವಾದರೆ ಈ ಉಸಿರ ನಿಲ್ಲಿಸು................

Tuesday, July 6, 2010

ಸವಿನೆನಪು





ನಾವೂ ಅಲ್ಪಸ್ವಲ್ಪ ಪುಣ್ಯವಂತರು ಅಂತ ಸಾಬೀತಾಯಿತು. ಬೆಂಕಿಯಂತೆ ಸುಡುತ್ತಿದ್ದ ದೆಹಲಿ ಈಗ ಧೋ ಎಂದು ಸುರಿವ ಮಳೆಗೆ ತಣ್ಣಗಾಗಿದೆ. ಮೋರಿಯಿಂದ ಹರಿದ ನೀರಿನಿಂದ ತುಂಬಿರುತ್ತಿದ್ದ ಯಮುನೆ ಮಳೆನೀರಿನಿಂದ ಶುದ್ಧವಾಗುತ್ತಿದೆ! ರಸ್ತೆಗಳೇ ನಡಿಯಾಗುತ್ತಿವೆ. ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲುವಂತಾಗಿದೆ.




ಇಂದು ಯಾಕೋ ಮನೆಯ ನೆನಪು ತುಂಬಾ ಕಾಡ್ತಾ ಇದೆ. ಮಲೆನಾಡಿನ ಮಳೆಗಾಲದ ಸುಂದರ ದೃಶ್ಯಗಳು ಅತಿಯಾಗಿ ನೆನಪಾಗುತ್ತಿವೆ. ಎಡೆಬಿಡದೆ ಧೋ ಎಂದು ಸುರಿವ ಬಿರುಮಳೆ, ಕುಳಿರ್ಗಾಳಿ ಮಿಂಚು ಗುಡುಗು ಸಿಡಿಲು, ತುಂಬಿಹರಿವ ಹಳ್ಳ ಕೊಳ್ಳ ಹೊಳೆ ನದಿಗಳು, ಕಂಬಳಿ ಕೊಪ್ಪೆ ಹೊದ್ದು ಹೊಲ ಉಳುವ ರೈತ, ನಾಟಿ ಮಾಡುವ ಹೆಂಗಸರು, ಅಡಿಕೆ ತೋಟದ ಔಷಧಿ ಹೊಡೆಯುವ ಕಾರ್ಯದಲ್ಲಿ ನಿರತ ಗಂಡಸರು, ಹೆಮ್ಮೆಯಿಂದ ಹಸಿರು ಹುಲ್ಲು ಮೇಯುವ ದನಕರುಗಳು..............ಒಂದಾ ಎರೆಡಾ?
ಹೀಗೆ ಮಲೆನಾಡಿನ ಸೌಂದರ್ಯಗಳನ್ನು ವರ್ಣಿಸುತ್ತಾ ಹೋದರೆ ಮುಗಿಯುವುದೇ ಇಲ್ಲ!



ಸದಾ ಬೆಳ್ಮುಗಿಲು ಮುಚ್ಚಿಕೊಂಡಿರುವ ಕುಂದಾದ್ರಿ ಬೆಟ್ಟ, ಬರೆ ಬೆಟ್ಟ, ಕೆಂಪಗೆ ಬಣ್ಣದೋಕುಳಿ ಹರಿದಂತೆ ಕಾಣುವ ಮಾಲತಿ ನದಿ, ತಾ ಸಾಗುವ ದಾರಿಯಲ್ಲಿ ನೂರಾರು ಜಲಪಾತಗಳನ್ನು ಸೃಷ್ಟಿಸಿಕೊಂಡು ಕಣ್ಮನ ತಣಿಸುವ ನಮ್ಮೂರ ಹೊಳೆ, ಬರೆ ಬೆಟ್ಟದ ಹೆಬ್ಬಂಡೆಯ ಮೇಲಿಂದ ನೀರಿಳಿಯುವಾಗ ಆಗಸದಿಂದ ಹಾಲಿನ ಹೊಳೆ ಹರಿದಂತೆ ಕಾಣುವ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆ ಪ್ರಾಕೃತಿಕ ಸೌಂದರ್ಯ ಕಾಂಕ್ರೀಟ್ ಕಾಡಿನಲ್ಲಿ ಎಲ್ಲಿಂದ ಬರಲು ಸಾಧ್ಯ!



ನಾವು ಚಿಕ್ಕವರಿದ್ದಾಗ ನಮ್ಮ ಆಟ ಪಾಠಗಳೇನು. ತಿನ್ನುವ ಯಂತ್ರಗಳು ನಾವು! ಈಗಿನ ಹಾಗೆ ತಿಂದಿದ್ದು ಸ್ವಲ್ಪ ಹೆಚ್ಚು ಕಡಿಮೆಯಾದರೆ  ಅಜೀರ್ಣ ಆಗ್ತಾ ಇರ್ಲಿಲ್ಲ. ತಣ್ಣಗೆ ಕೊರೆವ ಚಳಿಗೆ ಬೇಯಿಸಿದ ಬಿಸಿಬಿಸಿ ಗೆಣಸು ತಿನ್ನುವಾಗ ಎಷ್ಟು ಸುಖ! ಸಂಗ್ರಹಿಸಿಟ್ಟ ಹಲಸಿನ ಬೀಜಗಳನ್ನು ಸುಟ್ಟೋ, ಬೇಯಿಸಿಯೋ ತಿನ್ನುವಾಗ ಸ್ವರ್ಗ ಯಾಕೆ ಬೇಕು? ಜಾಯಮಾನವೆಲ್ಲ ಹೀಗೆ ಕಳೆಯುವ ಆಸೆ ಯಾರಿಗೆ ಆಗುವುದಿಲ್ಲ ಹೇಳಿ? ಏನಾದರೂ ತಿನ್ನುವ ಮನಸಾದಾಗ ಕುಚ್ಚಲಕ್ಕಿ ಹುರಿದು ಬೆಲ್ಲದೊಂದಿಗೆ ಕಲಸಿ ಬಿಸಿಬಿಸಿ ಉಂಡೆ ಮಾಡಿ ತಿಂದರೆ ಆಹಾ! ಓಹೋ! ಈಗಿನ ಡೈರಿ ಮಿಲ್ಕು, ಫೈ ಸ್ಟಾರೂ, ಕ್ರಂಚು, ಮಂಚುಗಳೆಲ್ಲ ನಮಗೆಲ್ಲಿತ್ತು ಸ್ವಾಮಿ, ಇವುಗಳೇ ನಮಗೆ ಸರ್ವಸ್ವ ಅಲ್ವಾ? ದೊಡ್ಡವರೆಲ್ಲ ಗದ್ದೆ ತೋಟಕ್ಕೆಂದು ಕೆಲಸಕ್ಕೆ ಹೋಗಿ ಸಂಜೆ ಬರುವುದರೊಳಗೆ ನಮ್ಮ ಲೂಟಿಗಳೇನು ಕಡಿಮೆ ಅಗ್ತಿತ್ತೆ? ಹರವೆ, ಬುಟ್ಟಿ ಸಂದು ಗೊಂದುಗಳಲ್ಲಿ ಮುಚ್ಚಿಟ್ಟ ಹಲಸಿನಕಾಯಿ ಹಪ್ಪಳ, ಅಕ್ಕಿ ಹಪ್ಪಳಗಳು ಕೆಮು ಕೆಂಡದಲ್ಲಿ ಬೆಚ್ಚಗಾಗಿ ನಮ್ಮ ಬಾಯಿ ಸೇರುತ್ತಿದ್ದವು.ಅಮ್ಮ ಹಬ್ಬದಲ್ಲಿ ಮಾಡಿ ತುಂಬಿಟ್ಟ ಅತ್ರಸ, ಕಜ್ಜಾಯ ಚಕ್ಕುಲಿಗಳು ಸದ್ದಿಲ್ಲದೇ ಹೊಟ್ಟೆ ಸೇರುತ್ತಿದ್ದವು. ಮಳೆಯ ತಣ್ಣಗಿನ ಚಳಿಗೆ ಇಂತಹ ತಿಂಡಿಗಳೇ ನಮ್ಮ ಬೆಚ್ಚಗಿನ ಜೊತೆಗಾರ! ತಿಂಗಳಿಗೊಮ್ಮೆ ಅಪ್ಪ ತರುತ್ತಿದ್ದ ಶುಂಟಿ ಪೆಪ್ಪರಮೆಂಟು ಮಾತ್ರ ಆಗಿನ ನಮ್ಮ ಕ್ರಂಚು ಮಂಚು ಎಲ್ಲಾ!

ಅಪ್ಪ ಬುದ್ಧಿವಂತರು! ಸುಮಾರು ಎಂಟತ್ತು ಮಕ್ಕಳು ತುಂಬಿದ್ದ ಅವಿಭಕ್ತ ಕುಟುಂಬ ನಮ್ಮದು(ಈಗ ಇಲ್ಲ ಬಿಡಿ). ಅದಕ್ಕೆಂದೇ ಅಪ್ಪ ಶುಂಟಿ ಪೆಪ್ಪರಮೆಂಟು ತರ್ತಾ ಇದ್ದಿದ್ದು. (ಆಗ ಒಂದು ರುಪಾಯಿಗೆ ೨೦ ಪೆಪ್ಪರಮೆಂಟುಗಳು ಬರ್ತಾ ಇದ್ದವು!)  ಎಲ್ಲರಿಗೂ ಒಂದೊಂದು ಕೊಡ್ತಾ ಇದ್ದರು!



ಮಳೆಗಾಲವೆಂದರೆ ನನಗಂತೂ ಬಹಳ ಅಚ್ಚುಮೆಚ್ಚು. ನೀರಿನಲ್ಲಿ ಕುಣಿದು ಕುಪ್ಪಳಿಸಿ ಆಡಿದ ದಿನಗಳೇನು, ಬಿರುಮಳೆಯಲ್ಲಿ ಗಾಳಿಗೆ ಛತ್ರಿ ಹಾರಿ ಹೋದರೆ ಅಪ್ಪನ ಬೆತ್ತದ ಪೆಟ್ಟು ಬೀಳುವುದೆಂಬ ಭಯದಿಂದ ಶಾಲೆಯಿಂದ ಮನೆಯವರೆಗೂ ಎಂಟು ಕಿ. ಮೀ. ನಡೆದು ಬರುವಾಗ ದಿನಾ ನೆನೆದೇ ಸಾಗುವ ಕ್ಷಣಗಳೇನು? ಯಾವ ಶೀತ ಜ್ವರಗಳೂ ನಮ್ಮ ಹತ್ತಿರ ಸುಳಿಯುತ್ತಿರಲಿಲ್ಲ. ದಿನಾ ಶಾಲೆಗೇ ಹೋಗುವಾಗ ಹಲವಾರು ಹಳ್ಳ ಹೊಳೆಗಳನ್ನು ದಾಟಿ ಹೋಗುವ ಸಂದರ್ಭ ಅದೇನು ಖುಶಿ! ಒಮ್ಮೊಮ್ಮೆ ಎದೆಯವರೆಗೂ ತುಂಬಿ ರಭಸದಿಂದ ಹರಿವ ನೀರಿನಲ್ಲಿ ದಾಟಿ ಬರುತ್ತಿರಲಿಲ್ಲವೇ? ಮರದ ದಿಮ್ಮಿಯ ಸಾರವೋ ಅಥವಾ ಎರಡು ಮೂರು ಅಡಿಕೆ ಮರದಿಂದ ಮಾಡಿದ ಸಾರ(ಸಂಕ)ವೋ ಸುಲಲಿತವಾಗಿ ದಾಟುತ್ತಿರಲಿಲ್ಲವೇ? ಯಾವ ಮಕ್ಕಲಾದರೂ  ಹಳ್ಳ ಹೊಳೆಯಲ್ಲಿ ತೇಲಿ ಹೋದ ಪ್ರಸಂಗಗಳಿವೆಯೇ? ಯಾರೋ ಕೊಚ್ಚಿಹೋದ ಕತೆ ಇದೆಯೇ? ಇಡೀ ನಮ್ಮೂರಿನ ಇತಿಹಾಸದಲ್ಲಿ ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ!



 ನಾವು ಆಗಾಗ ಕೇಳುತ್ತಿರುತ್ತೇವೆ. ಈಜಲು ಹೋದ ಬಾಲಕರು ನೀರುಪಾಲು, ಮಳೆಯ ರಭಸಕ್ಕೆ ಕೊಚ್ಚಿಹೋದ ಬಾಲಕ, ನದಿ ವಿಹಾರಕ್ಕೆ ಹೋದ ದಂಪತಿಗಳು ನೀರಿನಲ್ಲಿ ಕಾಲು ಜಾರಿ ಬಿದ್ದು ದುರ್ಮರಣ! ಇದೆಲ್ಲಾ ನಗರ ಪೇಟೆಗಳಲ್ಲಿ ಹುಟ್ಟಿ ಬೆಳೆದವರ ದುರಾದೃಷ್ಟ! ಅರ್ಧ ಜಾಯಮಾನವನ್ನು ನೀರಿನಲ್ಲೇ ಕಳೆಯುವ ಒಬ್ಬ ಮಲೆನಾಡಿಗ ನೀರಿನಲ್ಲಿ ಆಕಸ್ಮಿಕ ಅಂತ್ಯಕಂಡ ಉದಾಹರಣೆ ಒಂದಾದರು ಇವೆಯಾ?  ನಾನು ಇದುವರೆಗೆ ಕೇಳಿಲ್ಲ!

ಕಂಪ್ಯೂಟರ್, ಟ್ಯುಶನ್, ಸ್ಕೂಲು, ಹೋಂ ವರ್ಕು ಅಂತ ಸದಾ ನಿರತರಾಗುವ ಪೇಟೆಯ ಮಕ್ಕಳಿಗೆ ಮಲೆನಾಡಿನ ಹಳ್ಳಿಯ ಸುಖದ ಕಲ್ಪನೆ ಇದೆಯಾ? ಒಮ್ಮೆ ಆ ರುಚಿ ಹತ್ತಿದರೆ ಎಂದೆಂದೂ ಬಿಡಲಾರರು. ಏನಂತೀರಾ?

ಅದಕ್ಕೆ ಆದಷ್ಟು ಬೇಗ ಊರಿಗೆ ಹೊರಡಲು ಯೋಚಿಸುತ್ತಿದ್ದೇನೆ. ಅಮ್ಮ ಒಂದಿಷ್ಟು ಹಲಸಿನ ಬೀಜಗಳನ್ನು ಸಂಗ್ರಹಿಸಿ ಇಟ್ಟಿದ್ದಾಳೆ. ತಮ್ಮ ಮುರುಗನ ಹುಳಿಯನ್ನು ಒಟ್ಟು ಮಾಡಿದ್ದಾನೆ. ಹುಳಿ  ಸಿಪ್ಪೆ ಅವನಿಗೆ ಮಾರಲು, ಅದರ ಬೀಜ ಎಣ್ಣೆ ತೆಗೆಯಲು! ಮನೆ ಖರ್ಚಿಗೆ ಇದೇ ಎಣ್ಣೆ ನಾವು ಉಪಯೋಗಿಸುವುದು! ನನ್ನ ಮುದ್ದಿನ ಬಂಗಾರಿ (ನಾನು ಹಾಲುಂಡು ಬೆಳೆದ ಗೌರಿಯ ಮರಿಮಗಳು!) ಕರು ಹಾಕಿದೆ. ಅದರ ಜೊತೆಗೇ ಮಂಗಳಾ ಕೂಡಾ ಮುದ್ದಾದ ಹೆಣ್ಣು ಕರುವಿನ ತಾಯಿಯಾಗಿದ್ದಾಳಂತೆ! ಅಮ್ಮ ಈಗಿಂದಲೇ ನನಗಾಗಿ ತುಪ್ಪ ಸಂಗ್ರಹಿಸುತ್ತಿದ್ದಾರಂತೆ.

ನನ್ನದೊಂದು ಅಭ್ಯಾಸ ಇದೆ ಗೊತ್ತಾ?

ಅದೇನಪ್ಪಾ ಅಂದ್ರೆ................

ನಗಬಾರದು ಮತ್ತೆ............!

ನಾನು ಸಣ್ಣವನಿದ್ದಾಗ ನನ್ನ ಅಜ್ಜಿ ಕಲಿಸಿದ್ದು!



ಅಜ್ಜಿ ಹಾಲು ಕರೆಯುವಾಗ ನನ್ನನ್ನು ಕೊಟ್ಟಿಗೆಗೆ ಕರೆದು ಆಗಷ್ಟೇ ಕರೆದ  ಬಿಸಿ ಬಿಸಿ ನೊರೆ ಹಾಲನ್ನು ಕುಡಿಸುತ್ತಿದ್ದಳು! ಮಾವ ನೋಡಿದರೆ ಬಯ್ಯುವ ಭಯದಿಂದ!  ಆ ಬೆಚ್ಚಗಿನ ನೊರೆಹಾಲ ರುಚಿ ಕಂಡುಕೊಂಡ ನಾನು ಮುಂದೇ ನಾನೇ ಹಾಲು ಕರೆಯುವ ನೆಪವೊಡ್ಡಿ ನೇರವಾಗಿ ಗೌರಿಯ ಕೆಚ್ಚಲಿಗೆ ಬಾಯಿ ಹಾಕುತ್ತಿದ್ದೆ! ಎಷ್ಟಾದರೂ ಅವಳು ನನ್ನ ತಾಯಿ ಅಲ್ವಾ? ಆ ಅಭ್ಯಾಸ ಈಗಲೂ ಮುಂದುವರೆದಿದೆ. ಮನೆಗೆ ಹೋದರೆ ದನದ ಹಾಲು ಕರೆಯುವುದು ನಾನೇ, ನಾನು ಹಾಲು ಕರೆದರೆ ಅಮ್ಮ ಏನಂತಾರೆ ಗೊತ್ತಾ? "ಪವಿ, ಯಾಕೋ ನೀನು ಹಾಲು ಕರೆದರೆ ಕಡಿಮೆ ಹಾಲು ಕೊಡ್ತಾವೆ ದನಗಳು. ಪರಿಚಯ ಆಗದೆ ಹೀಗೆ ಮಾಡ್ತಾವಾ?" ಅಂತ!  ಮುಂದಿನದ್ದು ನಿಮಗೆ ಅರ್ಥ ಆಯ್ತಲ್ವಾ? ಪಾಪ ಅಮ್ಮನಿಗೆಲ್ಲಿ ಗೊತ್ತು ಮಗನ ಕಲ್ಯಾಣ ಗುಣ!
ಈ ಗುಟ್ಟನ್ನು ಎಲ್ಲಾದರು ಅಮ್ಮನಿಗೆ ಹೇಳೀರಾ  ಕೊನೆಗೆ, ಆಮೇಲೆ ಕೊಟ್ಟಿಗೆಗೆ ಪ್ರವೇಶ ನಿಷೇಧವಾಗುತ್ತದೆ!