Sunday, January 31, 2010

"ನಮನ"













   






    



ಗೆಳೆಯರೇ, ನಮಗೆಲ್ಲ ತಿಳಿದಿರುವಂತೆ ಯಕ್ಷಗಾನ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕಲೆಗಾಗಿ ದುಡಿದ ಕೆರೆಮನೆ ಕುಟುಂಬದ ಇನ್ನೊಂದು ಕೊಂಡಿ ಕಳಚಿ ಬಿದ್ದಿದೆ.


       ಯಕ್ಷಗಾನವೇ ತಮ್ಮ ಜೀವನ ಎಂದುಕೊಂಡು ಹೋರಾಡಿದ, ಯಕ್ಷಗಾನಕ್ಕೆ ಒಂದು ಹೊಸ ಹುಟ್ಟು ತಂದುಕೊಟ್ಟ ಕುಟುಂಬ ಕೆರೆಮನೆ ಕುಟುಂಬ. ಕೆರೆಮನೆ ಮಹಾಬಲ ಹೆಗಡೆಯವರ ಮರಣದೊಂದಿಗೆ ಈ ಕುಟುಂಬದ ಇನ್ನೊಂದು ಕಿರೀಟ ವೇಷ ಕಳಿಚಿದಂತಾಗಿದೆ. ಕೆಲವಾರು ಸಮಯಗಳ ಹಿಂದೆ ಶಂಬು ಹೆಗಡೆಯವರು ಇಹಲೋಕದ ಯಾತ್ರೆ ಮುಗಿಸಿದ್ದರು. ಈಗ ಮಹಾಬಲ ಹೆಗಡೆಯವರ ಮರಣದಿಂದಾಗಿ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
        
           ಯಕ್ಷಗಾನ ಎಂದರೆ ತೆಂಕುತಿಟ್ಟು ಎಂಬ ಪರಿಕಲ್ಪನೆ ಹೊಂದಿದ್ದ ಕಾಲವೊಂದಿತ್ತು. ಅಂತ ಸಮಯದಲ್ಲಿ ಬಡಗುತಿಟ್ಟಿಗೆ ಮರುಜನ್ಮ ಕೊಟ್ಟಿದ್ದು ಕೆರೆಮನೆ ಕುಟುಂಬ. ಇಂದು ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಇಡುಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ದಕ್ಷಿಣ ಕನ್ನಡದಲ್ಲಿ ಬಡಗುತಿಟ್ಟಿನ ಕಲಾವೈಭಾವವನ್ನೇ ಉಣಬಡಿಸಿತು. ಇದರ ಉಗಮಕ್ಕೆ ಕಾರಣರಾದವರು ಕೆರೆಮನೆ ಶಿವರಾಮ ಹೆಗಡೆ. ಬಡಗುತಿಟ್ಟಿನ ಯಕ್ಷಗಾನಕ್ಕೆ ಹೊಸ ರೂಪುರೆಶುಗಳನ್ನು ತಂದು, ಯಕ್ಷಗಾನಕ್ಕೊಂದು ಪುನರ್ಜನ್ಮ ಕೊಟ್ಟವರು.
           
ಇಂದಿನ ಯಕ್ಷಗಾನದ ಜನಪ್ರಿಯತೆಗೆ ಕೆರೆಮನೆ ಕುಟುಂಬದ ಸಾದನೆ ಹೇರಳವಾಗಿದೆ.ಸಿನಿಮಾ, ಟೀವಿ ಮುಂತಾದ ಅದುನಿಕ ಮನರಂಜನಾ ಮಾದ್ಯಮಗಳ ಪೈಪೋಟಿಯ ಸಮಯದಲ್ಲಿ, ರಾತ್ರಿ ಪೂರ್ತಿ ಯಕ್ಷಗಾನಕ್ಕೆ ಬರುವವರ ಸಂಖ್ಯೆ ಇಳಿಮುಖಗೊಂಡಿತ್ತು. ಅಂತಸಮಯದಲ್ಲಿ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಮಹಾಭಾಲ ಹೆಗಡೆಯವರಂತ ದಿಗ್ಗಜರು ತಮ್ಮ ಜೀವವನ್ನು ಕಲೆಗಾಗಿಯೇ ಮೀಸಲಿಟ್ಟು ಯಕ್ಷಗಾನವನ್ನು ಉಳಿಸಲು ಶ್ರಮಿಸಿದರು.
ಆಧುನಿಕ ಯುಗದಲ್ಲಿ ಯಕ್ಷಗಾನ ಕಲೆ ತನ್ನ ನೆಲೆ ಉಳಿಸಿಕೊಳ್ಳಲು ಮಹಾಬಲ ಹೆಗಡೆಯವರ ಸೇವೆ ಅತೀತವಾದದ್ದು. ಭಜನೆ, ಸಂಗೀತ, ನಾಟಕ, ಯಕ್ಷಗಾನ ಮುಂತಾದ ಎಲ್ಲ ಕಲೆಗಳಲ್ಲಿಯೂ ಮಿಂದವರು ಮಹಾಬಲ ಹೆಗಡೆಯವರು.ಯಕ್ಷಗಾನದಲ್ಲಿ ಅವರು ನಿರ್ವಹಿಸುತ್ತಿದ್ದ ಭೀಷ್ಮ, ಕರ್ಣ, ದುರ್ಯೋದನ, ಕಂಸ, ರಾವಣ, ಅರ್ಜುನ ಮುಂತಾದ ಪಾತ್ರಗಳು ನೋಡುಗರ ಮನದಲ್ಲಿ ಇಂದಿಗೂ ಅಚ್ಚಳಿಯದೆ ನಿಂತಿವೆ. ಪ್ರೇಕ್ಷಕನಿಗೆ ಅಲ್ಲಿ ಪಾತ್ರ ಮಾತ್ರ ಕಾಣುತಿದ್ದನೇ ಹೊರತು ಪಾತ್ರದಾರಿಯಲ್ಲ! ಆ ಮಟ್ಟದಲ್ಲಿ ಪ್ರೇಕ್ಷಕರನ್ನು  ತಲ್ಲೀನಗೊಳಿಸುತಿದ್ದರು.
ಯಾವುದೇ ಪಾತ್ರವಾದರೂ ಆ ಅದರಲ್ಲೇ ತನ್ಮಯರಾಗಿ  ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು.

          ಮೂಲ ವಕ್ತಿತ್ವವನ್ನು ಕಾಯ್ದುಕೊಂಡು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಪಾತ್ರ ಬೆಸೆಯುತ್ತಿದ್ದ ಅವರ ಶೈಲಿ, ಪಾತ್ರಕ್ಕೆ ತಕ್ಕಂತೆ ಬದಲುತ್ತಾ ಸಾಗುವ ಅವರ ಅವರ ಕಂಠ, ಪಾತ್ರಕ್ಕೆ ತಕ್ಕಂತ ಅವರ ವಾಕ್ಚಾತುರ್ಯ, ಭಾವ ತುಂಬಿದ ಅಭಿನಯ, ನೃತ್ಯ, ಅದೆಲ್ಲಕ್ಕಿಂತಲೂ ಮಿಗಿಲಾದ ಅವರ ಪಾತ್ರಪೂರ್ವ ಅಧ್ಯಯನ ಇವೆಲ್ಲಾ ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕರೆದೊಯ್ಯುತ್ತಿದ್ದವು.
        
          ನಿರಂತರ ಚಿಂತನ, ಅಧ್ಯಯನದಲ್ಲಿ ತಲ್ಲೀನರಾಗಿರುತ್ತಿದ್ದ ಹೆಗಡೆಯವರು ಓದಿದ್ದು ಕೇವಲ ನಾಲ್ಕನೇ ತರಗತಿವರೆಗೆ ಮಾತ್ರ! ಆದರೆ ಅವರಿಗಿದ್ದ ಪ್ರಪಚ ಜ್ಞಾನ, ಪೌರಾಣಿಕ ಜ್ಞಾನ ಅಗಾಧ!

        ಅವರ ಲಯಬದ್ದ ಕುಣಿತ, ಮಾತುಗಾರಿಕೆ, ಪ್ರೇಕ್ಷಕರನ್ನು ಸಮ್ಮೋಹನಗೊಳಿಸುತ್ತಿದ್ದ ಅಭಿನಯ ಸಾಮರ್ಥ್ಯ ಮೂಡಿಬಂದಿದ್ದು ಕೇವಲ ಯಕ್ಷಗಾನದಲ್ಲಿ ಬೆಳೆಯಬೇಕೆಂಬ ತುಡಿತದಿಂದ. ಸತ್ವಯುತವಾದ ಪಾತ್ರಪೋಷಣೆ, ಅರ್ಥಗಾರಿಕೆ ಹಾಗೂ ನಾಟ್ಯದೊಂದಿಗಿನ ಸಮನ್ವಯತೆಯೇ  ಹೆಗಡೆಯವರ ಪಾತ್ರಗಳಿಗೆ ವಿಶೇಷ ಜೀವ ತುಂಬಿದ್ದು. ಯಕ್ಷಗಾನ ಕಲಾವಿದನೆಂದರೆ ಹೇಗಿರಬೇಕು ಎಂಬುದನ್ನು ಅವರು ಹೇಳಿಕೊಟ್ಟವರು. ಕೇವಲ ನಾಲ್ಕು ಮಾತನಾಡುವ ಸಾಮರ್ಥ್ಯ, ಎರೆಡು ಹೆಜ್ಜೆ ಹಾಕುವುದರಿಂದ ಯಕ್ಷಗಾನವಾಗುವುದಿಲ್ಲ, ಅದಕ್ಕೆ ತನ್ನದೇ  ಆದ ರೀತಿ, ಪದ್ದತಿಗಳಿವೆ ಎಂಬುದನ್ನು ಮಹಾಬಲರು ತೋರಿಸಿಕೊಟ್ಟರು.
         
            ಕಲೆಯ ಎಲ್ಲಾ ವಿಭಾಗಗಳಲ್ಲಿಯೂ ಆಸಕ್ತಿ ಹೊಂದಿದ್ದ ಶ್ರೀಯುತರು, 
ಚಿತ್ರಾಪುರದ ಶ್ರೀಪಾದರಾಯರು, ದಾರವಾಡದ ಮುಜುಂದಾರರಿಂದ ಸಂಗೀತ ಅಭ್ಯಾಸ ನಡೆಸಿದರು. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. 
ಯಕ್ಷಗಾನ ಸಂಗೀತದ ಪರಂಪರೆಯನ್ನು ಉಳಿಸಿಕೊಂಡು, ಅದರಲ್ಲೇ 
ಹೊಸತನದ ಪ್ರಯೋಗಕ್ಕೆ ಸಾಕಷ್ಟು ಅಧ್ಯಯನ ನಡೆಸಿದ್ದರು. 

         1927ರಲ್ಲಿ ಜನಿಸಿದ ಇವರನ್ನು ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರೇ ಯಕ್ಷರಂಗಕ್ಕೆ ಎಳೆದು ತಂದವರು. ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು, ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ ಪ್ರಸಿದ್ಧಿ ಗಳಿಸಿದ್ದರು.

       ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗಳು ಅವರ ಕಲಾಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

          ಯಕ್ಷಗಾನ ರಾತ್ರಿಗಳ ವೈಭವದ ದಿನಗಳಲ್ಲಿ ಮೆರೆದ ಹೆಗಡೆಯವರು ಇಂದು ನಮಗೆ ಕೇವಲ ನೆನಪು ಮಾತ್ರ. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ ಅವರ ವಾಕ್ಚಾತುರ್ಯ, ಕಲಾಬಿಲಾಷೆ, ಕಲೆಯ ಬಗೆಗಿನ ಗೌರವ ಎಲ್ಲವೂ ಸ್ಮರಣಾರ್ಹ.ಈ ಕಲಾವಿದನ ರಂಗ ಪಯಣದ ಅನುಭವ ಇಂದಿನ ಯುಗದ ಯಕ್ಷಗಾನ ಕಲಾವಿದರ ಆದರ್ಶವಾಗಲಿ, ಅವರ ನಡೆ ನುಡಿ, ಸೇವಾ ಮನೋಬಾವನೆ, ಕಲೆಯ ಬಗ್ಗೆ ಗೌರವ ನಮಗೆಲ್ಲಾ ಆದರ್ಶವಾಗಲಿ. ಯಕ್ಷಗಾನ ಚಿರಾಯುವಾಗಲಿ.

ಬನ್ನಿ ಬ್ಲಾಗ್ ಲೋಕದ ಗೆಳೆಯರೇ,
ನಮ್ಮನ್ನೆಲ್ಲ ಅಗಲಿದ ಬಡಗುತಿಟ್ಟು ಯಕ್ಷಗಾನ ಲೋಕದ ದಿಗ್ಗಜ ಕೆರೆಮನೆ ಮಹಾಬಲ ಹೆಗಡೆ ಅವರಿಗೆ ಹೀಗೊಂದು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸೋಣ,























ಯಕ್ಷಗಾನಂ ಗೆಲ್ಗೆ.

Sunday, January 24, 2010

"ಹಾಗೆ"




















ಮುಂಜಾನೆ ಮಂಜಿನ ಹನಿಗಳೇ ಹಾಗೆ,


ಸೂರ್ಯನ ಕಾಂತಿಗೆ ಹೊಳೆವ ಮುತ್ತಿನ ಹಾಗೆ,

ಮುತ್ತೆಂದು ಮುಟ್ಟಲು ಹೋದರೆ

ಮಿಂಚಿ ಮಾಯವಾದ ಹಾಗೆ,

ಕಣ್ಣೆದುರಿದ್ದೂ ಕೈಗೆಟುಕದ


ಕನಸಲ್ಲಿ ಕಾಣುವ ಸಿರಿಯ ಹಾಗೆ,

ಈ ಜೀವನವೂ ಹೀಗೆ

ಮುಂಜಾನೆಯ ಮಂಜಿನ ಹನಿಗಳ ಹಾಗೆ!

Tuesday, January 19, 2010

"ನನ್ನ ಕುಂದಾದ್ರಿ ಬೆಟ್ಟದ ಪ್ರವಾಸ"

ರಾತ್ರಿ ಮಲಗುವಾಗ ಏನೋ ಚಡಪಡಿಕೆ!
ಯಾವಾಗ ಬೆಳಗಾಗುತ್ತದೆ? ಎಷ್ಟು ಹೊತ್ತಿಗೆ ಕುಂದಾದ್ರಿ ಗುಡ್ಡ ನೋಡುತ್ತೇನೆ ಅಂತ ಕಾತರ!
ಇನ್ನೊಂದೆಡೆ ಮಾವನ ಭಯ! ಅವನಿಗೆ ಗೊತ್ತಾದ್ರೆ ಬೆತ್ತ ಹುಡಿಯಾಗುತ್ತದೆ. ಮಲಗುವ ಮುನ್ನ ಅಜ್ಜಿಗೆ ಗುಟ್ಟಾಗಿ ಹೇಳಿದ್ದೆ. ಮೊದಲು ಬೇಡ ಅಂದ್ರೂ ನನ್ನ ಹಟಕ್ಕೆ ಕೊನೆಗೂ ಒಪ್ಪಿಕೊಂಡಳು. ಮಾವನಿಗೆ ಹೇಳಬೇಡ ಎಂದು ಹೇಳುವುದನ್ನು ಮರೆಯಲಿಲ್ಲ!
ಶಾಲೆ ಇನ್ನು ಕೆಲವೇ ದಿನಗಳಲ್ಲಿ ಮುಗಿಯುವುದರಿಂದ ಸ್ನೇಹಿತರೆಲ್ಲರೂ ಎಲ್ಲಾದರೂ ಪಿಕ್ನಿಕ್ ಹೋಗುವ ಯೋಚನೆ ಮಾಡಿದ್ದೆವು. ಕುಂದಾದ್ರಿಯೇ ಸರಿ ಎಂದು ತೀರ್ಮಾನಿಸಿ, ನಾಳೆಯೇ ಹೋಗುವುದು ಎಂದು ನಿರ್ದರಿಸಿದ್ದೆವು. ನಾನು, ಕಾಂತರಾಜ, ರಶ್ಮಿ, ದೀಪಿಕಾ, ಅನಿತಾ, ಸುಹಾಸ, ಗುರು ಪ್ರಸಾದ್, ಮತ್ತು ರಜನಿ ಹೀಗೆ ನಮ್ಮ ಗೆಳೆಯರ ಬಳಗ ತಯಾರಾಯಿತು.
ದಿನಾ ಗದ್ದೆಯಲ್ಲಿ ಹೋಗುವಾಗ ಕುಂದದ ಗುಡ್ಡವನ್ನು ನೋಡುತ್ತಾ ಹೋಗುತ್ತಿದ್ದೆ. ಆಗೆಲ್ಲಾ ಯಾವಾಗಲಾದರೂ ಅಲ್ಲಿಗೆ ಹೋಗಲೇಬೇಕು ಅಂತ ಅಂದುಕೊಂಡಿದ್ದೆ. ಆ ಅದೃಷ್ಟ ಇಂದು ಕೂಡಿ ಬಂದಿತ್ತು.
ಬೆಳಿಗ್ಗೆ ಹೊರಡುವಾಗ ಅಜ್ಜಿ ಕಡುಬು, ತುಪ್ಪ, ಬೆಲ್ಲ ಕಟ್ಟಿ ಕೊಟ್ಟಳು. ಅಜ್ಜಿಗೆ ಹೇಳಿ ಹೊರಟೆ.
ಮೊದಲೇ ನಿರ್ದರಿಸಿದಂತೆ ನಡಬೂರು ದೇವಸ್ಥಾನದ ಬಳಿ ಸೇರಿದೆವು. ಎಲ್ಲರೂ ಒಟ್ಟಿಗೆ ಪಾದಯಾತ್ರೆ ಹೊರಟೇ ಬಿಟ್ಟೆವು ನಮ್ಮ ಕನಸಿನ ಕುಂದಾದ್ರಿಗೆ! ಕಾನ್ತರಾಜನಿಗೆ ದಾರಿ ಗೊತ್ತಿತ್ತು.
ನಡಬೂರು, ಅರೇಹಳ್ಳಿ ಹಾಲ್ಗುಂದ ಮಾರ್ಗವಾಗಿ ಬೆಟ್ಟದ ಬುಡ ತಲುಪಿದೆವು. ಮಾರ್ಗ ಮದ್ಯದಲ್ಲಿ ಸಿಕ್ಕ ಮಾಲತಿ ನದಿಯಲ್ಲಿ ದಾಟಲು ಸೇತುವೆ ಇರಲಿಲ್ಲ. ಸರಿ, ಹೊಳೆ ದಾಟಿಯೇ ಹೊರಟೆವು. ಫೆಬ್ರವರಿ ತಿಂಗಳಾದ್ದರಿಂದ ಹೆಚ್ಚಿಗೆ ನೀರು ಇರಲಿಲ್ಲ.















ಮೇಲೆ ಹತ್ತಲು ಕಾಲು ದಾರಿ, ಕಾಂತ ಮುಂದೆ, ನಾವೆಲ್ಲಾ ಹಿಂದೆ. ಕಲ್ಲು-ಮುಳ್ಳಿನಿಂದ ಕೂಡಿದ ಕಡಿದಾದ ದಾರಿ. ಕೆಲೆವೆಡೆಯಂತೂ ತುಂಬಾ ಇಕ್ಕಟ್ಟಾದ, ಮತ್ತು ಕಠಿಣವಾದ ದಾರಿ. ನಮ್ಮೂರಿಗೆ ಅಷ್ಟೊಂದು ಮುದ್ದಾಗಿ ಕಾಣುವ ಗುಡ್ಡ, ಇಲ್ಲಿ ನೋಡಿದರೆ....? ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತು ಆಗ ನೆನಪಿಗೆ ಬಂದದ್ದು ಮಾತ್ರ ತಾತ್ಪರ್ಯವೇನಲ್ಲ!
ಮಾರ್ಗ ಮಧ್ಯದಲ್ಲಿ ಪಾಳು ಬಿದ್ದ ಜೈನ ಬಸದಿಯೊಂದಿತ್ತು. ಕಲ್ಲುಗಳೆಲ್ಲ ಬಿದ್ದಿದ್ದವು, ಮಂಟಪದ ಕಂಬಗಳು ಮಾತ್ರ ನಿಂತಿದ್ದವು. ಅಷ್ಟರಲ್ಲೇ ಕಾಂತ ಕೂಗಿದ,
"ಇಲ್ಲಿ ನೋಡಿ, ಭೀಮನ ಹೆಜ್ಜೆ ಗುರುತು!"
ದೊಡ್ಡ ಕಲ್ಲು ಬಂಡೆಯ ಮೇಲೆ ಒಂದು ಜೊತೆ ಹೆಜ್ಜೆ ಗುರುತು ಮೂಡಿತ್ತು. ಪಾಂಡವರ ವನವಾಸ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ಭೀಮನ ಹೆಜ್ಜೆಯ ಗುರುತು ಇಲ್ಲಿ ಬಿದ್ದಿತ್ತು ಎಂಬ ಮಾತಿದೆ.
ಸರಿ, ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ವಿಶ್ರಮಿಸಿಕೊಂಡೆವು. ದಟ್ಟವಾದ ಕಾಡು, ಹಕ್ಕಿಗಳ ಚಿಲಿಪಿಲಿ, ತಣ್ಣಗೆ ಬೀಸುವ ತಂಗಾಳಿ ನಮ್ಮ ಮನಸೂರೆಗೊಂಡಿತ್ತು. ಎಂದೂ ಇಂತ ಸ್ಥಳಗಳಿಗೆ ಬರದಿದ್ದ ದೀಪಿಕಾ ಮಾತ್ರ ಖುಷಿಯಲ್ಲಿ ಕುಣಿದಾಡಿದಳು!
ಅಲ್ಲಿಂದ ಮುಂದೆ ದಾರಿ ಇನ್ನೂ ಕಠಿಣ! ಕಡಿದಾದ ಬಂಡೆಯ ಮೇಲೆ ಹತ್ತಬೇಕು. ಜೀವವನ್ನು ಎಡಗೈನಲ್ಲಿ ಹಿಡಿದುಕೊಂಡು ಇದ್ದಬದ್ದ ದೈರ್ಯವನ್ನೆಲ್ಲ ಒಟ್ಟುಗೂಡಿಸಿ ಹತ್ತತೊಡಗಿದೆವು!


ಅಂತೂ ಇಂತೂ ಗುಡ್ಡದ ತುದಿ ತಲುಪಿದೆವು. ಅರ್ದ ಘಂಟೆ ಕುಳಿತಲ್ಲಿಂದ ಏಳಲೇ ಇಲ್ಲ! ಹಳ್ಳಿಯ ರೈತಕುಟುಂಬದಲ್ಲಿ ಹುಟ್ಟಿ ಬೆಳೆದ ನಮಗೆ ಏನೂ ಅನ್ನಿಸಲಿಲ್ಲ. ಆದರೆ, ಪೇಟೆಯಲ್ಲಿಯೇ ಹುಟ್ಟಿ, ನಡೆಯುವುದು ಅಂದ್ರೆ ಏನೆಂದೇ ಅರಿಯದ ದೀಪಿಕಾ, ಗುರು ಪ್ರಸಾದ್ ಬೆವತು ಹೋಗಿದ್ದರು! ಅವರಿಬ್ಬರ ಪರಿಸ್ಥಿತಿ ಹೇಳಲು ಸಾಧ್ಯವೇ ಇಲ್ಲ!


ಅಲ್ಲಿಂದ ಕಾಣುವ ಮನಮೋಹಕ ದೃಶ್ಯವನ್ನು ಹೇಳಲು ಮಾತುಗಳೇ ಸಾಲದು! ಸುತ್ತಲೂ ಹಸಿರು ಹೊದ್ದ ಭೂಮಾತೆ, ಬಳುಕುತ್ತಾ ಸಾಗಿರುವ ಮಾಲತಿ ನದಿ, ನಾಲೂರು ಹೊಳೆ, ದೂರದಲ್ಲಿ ಸಮುದ್ರದಂತೆ ಕಾಣುವ ವಾರಾಹಿ ಡ್ಯಾಮ್, ಹಸಿರಿನ ಮಧ್ಯೆ ಕಾಣುವ ಗದ್ದೆ ಬಯಲುಗಳು, ಅಲ್ಲಿ ಇರುವೆಗಳಂತೆ ಕಾಣುತ್ತಿರುವ ದನಗಳು, ದೊಡ್ಡದಾದ ಹೆಬ್ಬಾವು ಮಲಗಿದಂತೆ ಕಾಣಿಸುವ ಆಗುಂಬೆ-ತೀರ್ಥಹಳ್ಳಿ ರಸ್ತೆ, ಹೊಸಗದ್ದೆ-ಗುಡ್ಡೆಕೇರಿ ರಸ್ತೆ, ನಲುರು ಸಾಹುಕಾರರ ಮನೆಯ ಅಡಿಕೆ ಚಪ್ಪರ! ಇದೆಲ್ಲವನ್ನು ನೋಡಿ ಹುಚ್ಚೆದ್ದು ಕುಣಿದೆವು!


ಬೆಟ್ಟದ ಮೇಲೆ ಸುಮಾರು ಹದಿನೇಳನೆ ಶತಮಾನದಲ್ಲಿ ಜೈನ ಮುನಿ ಕುಂದಕುಂದಾಚಾರ್ಯರು ನೆಲೆಸಿದ್ದರು. ಅವರು ಪದ್ಮಾವತಿ ದೇವಿ, ಪಾರ್ಶ್ವನಾಥ ಗುಡಿಯನ್ನು ನಿರ್ಮಿಸಿ, ಅಲ್ಲೇ ತಪಸ್ಸು ಮಾಡುತಿದ್ದರು.



















ಇಲ್ಲಿ ಒಂದು ದೊಡ್ಡದಾದ, ಒಂದು ಚಿಕ್ಕದಾದ ಕಮಲದ ಕೊಳಗಳಿದ್ದು, ವರ್ಷ ಪೂರ್ತಿ ನೀರು ಅದರಲ್ಲಿ ನೀರು ಇರುವುದನ್ನು ನೋಡಬಹುದು.













ದೇವಾಲಯದ ಬಲಬಾಗದಲ್ಲಿ ಅತ್ಯಂತ ಕಡಿದಾದ ಬಂಡೆಯಿದೆ.
ಇಲ್ಲಿನ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯ ತುಂಬಾ ಮನಮನೋಹಕವಾಗಿರುತ್ತದೆ.









ಮುಂಬಾಗದಲ್ಲಿ ಬಯಲು ಪ್ರದೇಶವಿದೆ. ಸುಮಾರು ವರ್ಷಗಳ ಹಿಂದೆ ಈ ದೇವಾಲಯದ ಪೂಜಾರಿ ಬೆಟ್ಟದ ಮೇಲೆ ವಾಸಿಸುತ್ತಿದ್ದರು! ಅವರು ಇದೆ ಬಯಲಿನಲ್ಲಿ ಮೆಣಸು, ಟೊಮೇಟೊ, ಬೆಂಡೆ, ಮುಂತಾದ ತರಕಾರಿಗಳನ್ನು ಬೆಳೆಯುತಿದ್ದರು! ನಮ್ಮ ಮನೆಯಲ್ಲಿ ಅತ್ಯಂತ ದೊಡ್ಡದಾದ ಟೊಮೇಟೊ ಬೆಳೆದರೆ "ಕುಂದದ ಗುಡ್ಡದ ಬಟ್ರು ಹಿತ್ಲಲ್ಲಿ ಬೆಳೆದಷ್ಟು ದೊಡ್ಡ ಇದೆ" ಎಂದು ಅಜ್ಜಿ ಆಗಾಗ ಹೇಳುತ್ತಿದ್ದಳು. ಅಷೊಂದು ದೊಡ್ಡ ಗಾತ್ರದ ತರಕಾರಿಗಳನ್ನು ಯಾರೂ ನೋಡಿರಲಿಲ್ಲವಂತೆ!
ಈಗ ಅಲ್ಲಿ ಯಾರು ವಾಸಿಸುವುದಿಲ್ಲ. ಕೆಳಗೆ ಕುಂದಾದ್ರಿಯಿಂದ ದಿನಾ ಪೂಜಾರಿಗಳು ಬಂದು ಪೂಜೆ ಮಾಡಿ ಹೋಗುತ್ತಾರೆ. ಪ್ರತೀ ವರ್ಷ ಮಕರ ಸಂಕ್ರಾಂತಿಯ ದಿನದಂದು ವಿಶೇಷ ಪೂಜೆ, ಜಾತ್ರೆ ಇರುತ್ತದೆ. ಸುತ್ತಮುತ್ತಲಿನ ಊರುಗಳಿಂದ ಎಲ್ಲಾ ಜಾತಿಯ ಜನರೂ ಬಂದು ಪೂಜೆ ಸಲ್ಲಿಸುತ್ತಾರೆ!
ಗುಡ್ಡದ ಮೇಲೆ ಉಳಿದುಕೊಳ್ಳಲು ಕರ್ನಾಟಕ ಟೂರಿಸಂ ವ್ಯವಸ್ಥೆ ಮಾಡಿತ್ತು. ಆದರೆ ವಸತಿಗೃಹದ ಕಿಟಕಿ ಬಾಗಿಲುಗಳು ಕಾಣದಂತೆ ಕಳ್ಳಕಾಕರ ಪಾಲಾದದ್ದು ಮಾತ್ರ ನಾಚಿಕೆಗೇಡಿನ ಸಂಗತಿ!
ಈಗಂತೂ ಗುಡ್ಡದ ಮೇಲಿನವರೆಗೂ ರಸ್ತೆಯ ವ್ಯವಸ್ತೆಯಾಗಿದೆ. ವಾಹನಗಳು ನೇರವಾಗಿ ತುದಿ ತಲುಪಬಹುದು.
ಗುಡ್ಡಕ್ಕೆ ಹೋಗುವಾಗ ಗುಂಪಾಗಿ ಹೋಗುವುದು ಒಳ್ಳೆಯದು. ಒಬ್ಬರು-ಇಬ್ಬರು ಹೋಗಲು ಸ್ವಲ್ಪ ಭಯವಾಗುತ್ತದೆ.
ತೀರ್ಥಹಳ್ಳಿಯಿಂದ 30 km ದೂರ ಇರುವ ಇಲ್ಲಿಗೆ ಬರಲು ಹಲವಾರು ರಸ್ತೆಗಳಿವೆ. ತೀರ್ಥಹಳ್ಳಿಯಿಂದ ಆಗುಂಬೆ ಮಾರ್ಗದಲ್ಲಿ ಬಂದು, ಗುಡ್ದೆಕೆರಿಯಿಂದ ಹೊಸಗದ್ದೆ ಮಾರ್ಗವಾಗಿ ಹೋದರೆ ಕುಂದಾದ್ರಿ ಸರ್ಕಲ್ ಸಿಗುತ್ತದೆ.
ಶೃಂಗೇರಿಯಿಂದ ಬಂದರೆ ಆಗುಂಬೆ ರಸ್ತೆಯಲ್ಲಿ ಬಂದು, ಹೊಸ್ಗದ್ದೆಯಿಂದ ಗುಡ್ದೆಕೆರಿ ಮಾರ್ಗವಾಗಿ ಕುಂದಾದ್ರಿ ಸರ್ಕಲ್ ಸೇರುವುದು
ಆಗುಂಬೆಯಿಂದ ಬಂದರೆ ಶೃಂಗೇರಿ ಮಾರ್ಗದಲ್ಲಿ ಬಂದು ಹೊಸ್ಗದ್ದೆಯಿಂದ ಕುಂದಾದ್ರಿ ಸೇರುವುದು.
 ಅಲ್ಲಿಂದ ಗುಡ್ಡಕ್ಕೆ ಹೋಗಲು ಮೂರು ಆಯ್ಕೆಗಳಿವೆ.
ಮೊದಲನೆಯದು ವಾಹನಗಳ ಮೂಲಕ ಬೆಟ್ಟ ತಲುಪುವುದು,
ಎರಡನೆಯದು ರಸ್ತೆಯಲ್ಲಿ ನಡೆದು ಹೋಗುವುದು,
ಮೂರನೆಯದು ಕಾಡುದಾರಿಯ ಮೂಲಕ ಹೋಗುವುದು.















ಚಾರಣಿಗರಿಗೆ ಮೂರನೇ ಆಯ್ಕೆ ಒಳ್ಳೆಯದು. ನೀವು ಹೋದ ಸಮಯದಲ್ಲಿ ಪೂಜಾರಿಗಳು ಮನೆಯಲ್ಲೇ ಇದ್ದಾರೆ ನೀವು ಹೇಳಿದ ಮಾರ್ಗದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ!
ಪ್ರಕೃತಿ ಸೌಂದರ್ಯದ ಸವಿಯನ್ನು ಸವಿಯುತ್ತ, ಮನೆಯಿಂದ ತಂಡ ಕಡುಬು ತುಪ್ಪ ತಿಂದು ಮನೆಯತ್ತ ಹೊರಟೆವು. ಸೂರ್ಯಾಸ್ತದ ಸೊಬಗನ್ನು ನೋಡಲು ಆಗಲೇ ಇಲ್ಲ!



ನೀವು ಹೋಗಿ ಬನ್ನಿ ಒಮ್ಮೆ ಕುಂದಾದ್ರಿ ಬೆಟ್ಟಕ್ಕೆ. ಅನುಭವಿಸಿ ಪ್ರಕೃತಿಯ ಸೊಬಗ.
ತಿನ್ನಲು, ಕುಡಿಯಲು ತೆಗೆದುಕೊಂಡು ಹೋಗಿ.
ನಿಮ್ಮಲ್ಲೊಂದು ಬೇಡಿಕೆ ಏನಂದ್ರೆ ಪ್ಲಾಸ್ಟಿಕ್ ಅಲ್ಲೇ ಎಸೆದು ಬರಬೇಡಿ, ಬೆಂಕಿ ಹಚ್ಚಿ ಕಾಡಿನ ಸಂಪತ್ತನ್ನು ನಾಶ ಮಾಡಬೇಡಿ.


ನಿಮ್ಮವ ಪ್ರವಿ

Monday, January 18, 2010

ಬೇಡಿಕೆ






















ಬಾ ನನ್ನ ಮುದ್ದು
ಮಳೆಯೇ.....


ಯಾಕಿಷ್ಟು ತಡ ಮಾಡುವೆ....?


ತಣ್ಣನೆಯ ನಾಲ್ಕು ಹನಿಗಳ
ಉದುರಿಸು.......


ನಿನಗಾಗಿ ಕಾದಿರುವೆ......


ನನ್ನ ಚಿನ್ನ, ರನ್ನ....
ಲಲ್ಲೆಗರೆವೆ ನಿನ್ನ.....


ಯಾಕಿಷ್ಟು ಹಠ ಮಾಡುವೆ......?


ನಿನಗೊಂದುಮುತ್ತು ಕೊಡುವೆ........


ಇನ್ನು ಯಾಕೆ ಕೋಪವೇ.....?

ಹೋಲಿಕೆ

























ರಾತ್ರಿಯ ಆಕಾಶದ
ಸೊಬಗಿಗೆ ಸಾಟಿಯೇ ಇಲ್ಲ

ಗೆಳತಿ,

ನಿನ್ನ ಕಣ್ಣ ನೋಟಕೆ
ಸೋಲದವರಿಲ್ಲ!

ಮಳೆಯ ಸೊಬಗನು
ಅನುಭವಿಸಿದವನೇ ಬಲ್ಲ

ಆದರೆ,

ನಿನ್ನ ಪ್ರೀತಿಯ ರೀತಿ
ನನಗೆ ಮಾತ್ರ ಗೊತ್ತಲ್ಲ!

Sunday, January 17, 2010

"ಅಮ್ಮ, ಅಳಬೇಡಮ್ಮಾ"


ಇದು ನನ್ನ ಮೊದಲ ಕಥೆ.
ಕಥೆ ಹುಟ್ಟಿಕೊಂಡ ರೀತಿ ಬಲು ವಿಚಿತ್ರ! ರಾತ್ರಿ ನಿದ್ರೆಯಿಂದ ಒಮ್ಮೆಲೇ ಎಚ್ಚರವಾಯಿತು. ಕಣ್ಣಮುಂದೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡುವವರ ಚಿತ್ರಣ ಹಾದು ಹೋಯ್ತು. ತಕ್ಷಣ ಪೆನ್ನು, ಪೇಪರಿಗೆ ಕೆಲಸ ಕೊಟ್ಟೇಬಿಟ್ಟೆ!
ಅದನ್ನು ನಿಮ್ಮ ಮುಂದೆ ಇಡುತಿದ್ದೇನೆ




"ಅಮ್ಮ, ಅಳಬೇಡಮ್ಮಾ"


ಆಹಾಹಾ! ತುಂಭಾ ಚಳಿ! ದೆಹಲಿಯ ಚಳಿಗಾಲ ಅಂದ್ರೆ ದೇಹ ಮರಗಟ್ಟಿ ಹೋಗುತ್ತದೆ. ಹೀಗೆ ಯೋಚಿಸುತ್ತಾ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯತ್ತ ತೆರಳಿದೆ. ನನ್ನನ್ನು ನೋಡಿದ ಅಂಗಡಿಯಾತ ಬಿಸಿಬಿಸಿ ಟೀ, ಒಂದು ಸಿಗರೇಟನ್ನು ತೆಗೆದು ಕೊಟ್ಟ.ದಿನಾ ಬೆಳಿಗ್ಗೆ ಆಫೀಸ್ಸಿಗೆ ಹೋಗುವಾಗ ದಾರಿಯಲ್ಲಿ ಸಿಗುವ ಈ ಅಂಗಡಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಸಿಗರೇಟು, ಟೀ ಕುಡಿದು ಹೋಗುತ್ತೇನೆ. ಹೊಟ್ಟೆಯೊಳಗೆ ಬಿಸಿ ಸೇರಿದಂತೆ ಒಂದು ರೀತಿಯ ಉಲ್ಲಾಸ!

ಟೀ ಕುಡಿಯುತ್ತಾ ರಸ್ತೆಯ ಆ ಬದಿ ನೋಡುತ್ತಿದ್ದೇನೆ, ಅರೆ! ಅದೇನದು? ಮತ್ತದೇ ದೃಶ್ಯ! ದಿನಂಪ್ರತಿ ನಡೆಯುವಂತೆ ಇಂದು ಕೂಡ ನಡೆಯುತ್ತಿದೆ. ಒಬ್ಬ ಗಂಡಸು, ಬಟ್ಟೆಯಲ್ಲಾ ಕೊಳಕಾಗಿದೆ. ಸ್ನಾನ ಮಾಡದೇ ಅದೆಷ್ಟು ದಿನಗಳಾಗಿವೆಯೋ? ಆತ ಒಂದು ಮಧ್ಯ ವಯಸ್ಕ ಹೆಗಸಿಗೆ ಹೊಡೆಯುತ್ತಿದ್ದಾನೆ. ಬಹುಶಃ ಆಕೆ ಆತನ ಹೆಂಡತಿ ಇರಬೇಕು. ಪಶುವಿಗೆ ಹೊಡೆದಂತೆ ಬಡಿಯುತ್ತಿದ್ದಾನೆ. ಪಾಪ! ಚಿಕ್ಕ ಮಗುವೊಂದು ಆ ದೃಶ್ಯವನ್ನು ನೋಡಲಾರದೆ ಜೋರಾಗಿ ಅಳುತ್ತಿದೆ.ಆಗ ಸ್ವಲ್ಪ ದೊಡ್ಡದಾದ ಹುಡುಗನೊಬ್ಬ ಆ ಮಗುವನ್ನು ಎತ್ತಿಕೊಂಡು ಸಂತಯ್ಸತೊಡಗಿದ. ಆ ಮಗುವಿನ ಅಣ್ಣನಿರಬೇಕು, ಆತನಿಗೆ 9-10 ವರ್ಷವಿರಬಹುದು. "ಅಪ್ಪ ಬಿಡಪ್ಪ, ಅಮ್ಮನಿಗೆ ಹೊಡೆಯಬೇಡ, ಸಂಜೆ ದುಡ್ಡು ತಂದು ಕೊಡುತ್ತೇನೆ." ಎಂದು ಹೇಳಿ ಅವನಪ್ಪನನ್ನು ಎಳೆದಾಡತೊಡಗಿದ.

ಆತ ಆ ಹುಡುಗನನ್ನು ಕೆಂಗಣ್ಣಿನಿಂದ ದುರುಗುಟ್ಟಿ ನೋಡುತ್ತಾ, ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ. "ಇನ್ನೊಂದು ಘಂಟೆಯಲ್ಲಿ ದುಡ್ಡು ತಂದು ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲ, ಕೊಂದೇ ಹಾಕುತ್ತೇನೆ" ಎಂದು ಜೋರಾಗಿ ಕೂಗುತ್ತಾ ಎತ್ತಲೋ ಹೊರಟು ಹೋದ.

ಆ ಹೆಂಗಸು ತನ್ನಿಬ್ಬರು ಮಕ್ಕಳನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾಳೆ. ಯಾರು ಆಕೆಯನ್ನು ಸಮದಾನಗೊಳಿಸುವವರು? ಎಲ್ಲರಿಗೂ ಅದೊಂದು ಮನರಂಜನೆ ಮಾತ್ರ. ಆಕೆಯ ಬದುಕಿನ ಹೋರಾಟ ಯಾರಿಗೂ ಅರ್ಥವಾಗುವುದಿಲ್ಲ. ನಮಗೇಕೆ ಇಲ್ಲದ ಉಸಾಬರಿ. ಇದು ಈ ಬಿಕ್ಷುಕರ ದಿನನಿತ್ಯದ ಗೋಳು ಎಂಬ ತಾತ್ಸಾರ ಭಾವ ಎಲ್ಲರಲ್ಲೂ ತುಂಬಿದೆ.

ಸಾದಾರಣವಾಗಿ ದೆಹಲಿಯಂತ ನಗರಗಳಲ್ಲಿ ಈ ದೃಶ್ಯ ಸಾಮಾನ್ಯ. ಇವರು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕರು. ಇವರಿಗೆ ವಾಸಕ್ಕೆ ಮನೆಯಿಲ್ಲ. ಹಾಕಲು ಬಟ್ಟೆಬರಿಗಲಿಲ್ಲ, ವಿಧ್ಯೆ-ಬುದ್ಧಿಗಳನ್ನಂತೂ ಕೇಳುವುದೇ ಬೇಡ. ಭಿಕ್ಷೆ ಬೇಡಿ ಬಂದ ಹಣವೆಲ್ಲ ಗಂಡಸರ ಕುಡಿತದಂತ ಚಟಗಳಿಗೆ ಸರಿಯಾಗುತ್ತದೆ. ಯಾರಾದರೂ ಏನಾದರೂ ತಿನ್ನಲು ಕೊಟ್ಟರೆ ಇವರ ಹೊಟ್ಟೆ ತುಂಬುತ್ತದೆ. ಇಲ್ಲದಿದ್ದರೆ ಇಲ್ಲ!

ಕುಡಿದು ಬಂದ ಗಂಡಸರು ಹೆಂಡತಿ-ಮಕ್ಕಳಿಗೆ ಹೊಡೆಯುವ ದೃಶ್ಯ ಇಲ್ಲಿ ಸಾಮಾನ್ಯ. ಯಾಕೋ ಇಂದು ನನ್ನ ಕಣ್ಣ ಮುಂದೆ ಆ ಭಿಕ್ಷುಕಿ ಬಿಕ್ಕಳಿಸುತ್ತಿರುವ ದೃಶ್ಯವೇ ಕಾಣಿಸುತ್ತಿತ್ತು. ಮನಸ್ಸೇಕೋ ಕಸಿವಿಸಿಗೊಂಡಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮುಗಿಸಿ ಮನೆಯತ್ತ ಹೊರಟೆ.

ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ಜಾಗದಲ್ಲಿ ಜನರ ಗುಂಪು ಸೇರಿದೆ. ಬೈಕ್ ನಿಲ್ಲಿಸಿ ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಿ ಅಲ್ಲಿನ ದೃಶ್ಯವನ್ನು ನೋಡಿ ಮೂಕವಿಸ್ಮಿತನಾದೆ!

ಆ ಹೆಂಗಸು ಇಬ್ಬರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕುತ್ತಿದ್ದಾಳೆ. ಹುಡುಗನ ಮೈ ರಕ್ತಸಿಕ್ತವಾಗಿದೆ. ಸ್ವಲ್ಪ ದೂರದಲ್ಲಿ ರಕ್ತದಿಂದ ತೋಯ್ದು ಹೋದ ದೇಹವೊಂದು ಬಿದ್ದಿದೆ. ಅದು ಆ ಕುಡುಕ ಬಿಕ್ಸುಕನದ್ದೆ ಎಂದು ತಿಳಿಯಲು ತಡವಾಗಲಿಲ್ಲ. ಆ ಜಾಗದಲ್ಲಿ ನಿಲ್ಲಲಾರದೆ ಗೂಡಂಗಡಿಗೆ ಹೋಗಿ ಸಿಗರೇಟ್ ಹತ್ತಿಸಿಕೊಂಡು ಅಂಗಡಿಯಾತನತ್ತ ಪ್ರಶ್ನಾರ್ತಕವಾಗಿ ನೋಡಿದೆ. ಅಂಗಡಿಯಾತ ಹೇಳಿದ ಕತೆಯನ್ನು ಕೇಳಿ ನನ್ನಿಂದ ಮಾತುಗಳೇ ಹೊರಡಲಿಲ್ಲ!

ಸ್ವಲ್ಪ ಸಮಯದ ಮೊದಲು ಆತ ಮತ್ತೆ ಅಲ್ಲಿಗೆ ಬಂದಿದ್ದ. ಬಂದವನೇ ಜೋರಾಗಿ ಕೂಗತೊಡಗಿದ. ಎಲ್ಲಿ ದುಡ್ಡು ಕೊಡು ಎಂದು ಹೆಂಡತಿಗೆ ಹೊಡೆಯುತಿದ್ದ.ಅಲ್ಲೇ ಇದ್ದ ಆ ಹುಡುಗ ಇದನ್ನು ನೋಡಿ ಸಹಿಸಿಕೊಳ್ಳಲು ಆಗದೆ ರೋಷದಿಂದ ತಂದೆಯತ್ತ ನುಗ್ಗಿದ. ಪಕ್ಕದಲ್ಲೇ ಇದ್ದ ಚಾಕುವಿನಿಂದ ತನ್ನ ತಂದೆಗೆ ಇರಿದೇ ಬಿಟ್ಟ!
ಅವೆಶಗೊಂದವನಂತೆ ಎಲ್ಲೆಂದರಲ್ಲಿ ಇರಿಯತೊಡಗಿದ.ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಷ್ಟೆಲ್ಲಾ ನಡೆದು ಹೋಗಿತ್ತು! ತನ್ನ ತಾಯಿಗೆ ಆಗುತ್ತಿರುವ ಹಿಂಸೆಯನ್ನು ನೋಡಲಾರದೆ, ತಾಯಿಯ ಮೇಲಿನ ಪ್ರೀತಿಯಿಂದ ತಂದೆಯನ್ನೇ ಕೊಂದು ಮುಗಿಸಿದ್ದ ಆ ಮಗ!

ಆ ಕ್ಷಣದಲ್ಲಿ ಹುಡುಗನ ಮನಸ್ಸು ಏನು ಯೋಚಿಸಿತ್ತು? ಈಗಲೂ ಆತನ ಮುಖದಲ್ಲಿ ಯಾವುದೇ ಚಿಂತೆ ಕಾಣಿಸುತ್ತಿಲ್ಲ. ಭಾರವಾದ ನಿಟ್ಟುಸಿರು ಚೆಲ್ಲುತ್ತಾ ಮನೆಯ ದಾರಿ ಹಿಡಿದೆ. ನನ್ನ ಕಿವಿಯಲ್ಲಿ ಆ ಹುಡುಗನ ಧ್ವನಿ ಪದೇ ಪದೇ ಕೇಳಿಸುತಿತ್ತು.
"ಅಮ್ಮಾ, ಅಳಬೇಡಮ್ಮಾ!"

ಮೊದಲಾಗಿ ವಂದಿಸುವೆ ಗಣನಾಥನ











ವಿಘ್ನ ವಿನಾಶಕ
ಶ್ರೀ ಗಣನಾಯಕ
ಕರುಣದಿ ಕಾಯೋ
ವಿನಾಯಕ
ಮೂಷಿಕವಾಹನ
ಪಾರ್ವತೀ ತನಯ
ಏಕದಂತನೆ
ನಮೋ ನಮೋ