Sunday, May 30, 2010

"ಹೀಗೊಬ್ಬಳು ಮದುಮಗಳು"


ಹುಡು ಹುಡುಕಿ ದಣಿದ ಮೇಲೆ 
ಸಿಕ್ಕಳಾಕೆ ಕಡು ಕಷ್ಟದಲ್ಲಿ......!
ಜೊತೆ ಹಿಡಿದೇ ನಡೆದೆ
ಬಿಡಲಾರದ ಪ್ರೀತಿಯಿಂದಲಿ......!

ಆಕೆಯೋ ಮದುಮಗಳು 
ವರಕವಿಯ ಪ್ರೀತಿಯ ಮಗಳು.......!
ಅವಳೆಂದರೆ ನನಗೆ ಬಹಳ ಪ್ರೀತಿ 
ಬಿಡಿಸಲಾಗದ ನಂಟು ಯಾಕೋ ಆ ರೀತಿ.......!

ಕುಂತಲ್ಲಿ ನಿಂತಲ್ಲಿ ಅವಳದೇ ಧ್ಯಾನ
ಮಲಗಿದರೂ ನಾ ಬಿಡಲಾರೆ ಅವಳನ್ನ....!
ಕೆಲಸದಲ್ಲೂ ಕಾಡುವಳು ನೆನಪಾಗಿ 
ಮಲಗಿದರೂ ಕಚಗುಳಿಯಿಡುವಳು ತುಂಟಿಯಾಗಿ......!

ಮದುಮಗಳ ಸ್ನೇಹ ನಾ ಬಿಡಲಾರೆ
ಉಸಿರಿರುವವರೆಗೂ ನಾ ಮರೆಯಲಾರೆ......
ಅವಳೇ ರಾಷ್ಟ್ರಕವಿಯ ನಲ್ಮೆಯ ಮಗಳು
ಜ್ಞಾನಪೀಠ ತಂದಿತ್ತ  "ಮಲೆಗಳಲ್ಲಿ ಮದುಮಗಳು!"

Wednesday, May 26, 2010

ಶಿಕಾರಿ (ಭಾಗ 3)

ಇತ್ತ ಇದ್ಯಾವುದನ್ನೂ ಅರಿಯದ ನಾವು ಉತ್ಸಾಹ ಕಳೆದುಕೊಂಡು ಕಾಡಿನಲ್ಲಿ ಸೋಯುತ್ತಾ ಹೋಗುತ್ತಿದ್ದೆವು. ಎರಡು ಈಡು ಹೊಡೆದರೂ ಹಂದಿ ಸಿಗಲಿಲ್ಲ ಎಂಬ ಬೇಸರ ಮನದಲ್ಲಿ ಮನೆಮಾಡಿತ್ತು. ಪೂರ್ತಿ ಕಾಡೇ ನಡುಗಿಸುವಂತೆ ಕೂಗುತ್ತಿದ್ದವರ ಧನಿ ಉಡುಗಿ ಹೊಗಿತ್ತು!

ಮಳೆಗಾಲದಲ್ಲಿ ಗುಡ್ಡದ ಮೆಲಿಂದ ನೀರು ಹರಿದು ಬರುವ ಸಣ್ಣ ಹಳ್ಳದಂತ ಕಾಲುವೆಯಲ್ಲಿ ನಾನೂ ರಮೆಶಣ್ಣನ ಜೊತೆ ಸಾಗುತ್ತಿದ್ದೆ. ಹಳ್ಳ ಕಡಿದಾಗಿತ್ತು. ಬಳ್ಳಿಯ ಸಹಾಯದಿಂದ ಮಾತ್ರ ಮೇಲೆ ಹತ್ತಬಹುದಾಗಿತ್ತು. ಎಲೆ ಅಡಿಕೆ ಜಗಿಯುತ್ತಾ ಯಾವುದೋ ಮಾತಿನಲ್ಲಿ ಮೈಮರೆತಿದ್ದ ನಮ್ಮಿಬ್ಬರಿಗೂ ಅದು ಹಳ್ಳ ಎಂಬುದು ತಿಳಿಯಲೇ ಇಲ್ಲ!

ರಮೆಶಣ್ಣನ ನಗೆಚಟಾಕಿಗೆ ಹೊಟ್ಟೆ ಹಿಡಿದು ನಗುತ್ತಾ ಸಾಗುತ್ತಿದ್ದಂತೆಯೇ ಹಿಂದಿನಿಂದ ದಡದಡ ಎಂಬ ಶಬ್ಧ! ಹಂದಿಯೋ ಕಡವೋ ಕಾಡುಕೋಣವೋ ಮೇಲೆ ಓಡಿರಬೇಕು. ರಮೇಶಣ್ಣ ಹಿಡ್ಡೀಡ್ಡೀ ಎಂದು ಕೂಗಿದಂತೆ ಶಬ್ಧ ಇನ್ನೂ ಹತ್ತಿರವಾಯಿತು. ಕಣ್ಮುಚ್ಚಿ ಬಿಡುವುದರೊಳಗೆ ಇಳಿಜಾರಿನ ಹಳ್ಳದಲ್ಲಿ ಆನೆಗಾತ್ರದ ಹಂದಿಯೊಂದು ನಮ್ಮತ್ತಲೇ ನುಗ್ಗಿ ಬರುತ್ತಿತ್ತು!

 ಹಂದಿ ಓಡಿ ಬರುತ್ತಿರುವ ಶಬ್ಧ ಕೇಳಿದ್ದೇ ತಡ ರಮೇಶಣ್ಣ ಕೂಗಿದ,
 
"ಪೈ ಓಡು, ಮರ ಹತ್ತು"
 

ಅವನು ಅದ್ಯಾವ ಮಾಯದಲ್ಲಿ ಓಡಿ ಹಳ್ಳದೊಳಗೇ ಬೆಳೆದಿದ್ದ ಸಣ್ಣ ಮರವೊಂದನ್ನು ಹತ್ತಿದನೋ ತಿಳಿಯಲಿಲ್ಲ! ಮೇಲಿನಿಂದ ನೋಡುತ್ತಾನೆ ನಾನಿನ್ನೂ ಅಲ್ಲೇ ನಿಂತಿದ್ದೇನೆ.
"ಸಾಯ್ತಿಯಲ್ಲೋ............ ಒಡ್ಬಾರೋ ಬೇಗ" 

ರಮೇಶಣ್ಣ ಕೂಗುತ್ತಿದ್ದಾನೆ!

ನನಗೋ ಜಂಗಾಬಲವೇ ಉಡುಗಿಹೋದ ಅನುಭವ! ಓಡಲು ಕಾಲುಗಳೇ ಬರಲೊಲ್ಲವು. ದೆಹವಿಡೀ ತರಗುಟ್ಟುತ್ತಿದೆ.  ಬೆವರಿನಿಂದ ತೋಯ್ದು, ಗಂಟಲ ಪಸೆ ಆರಿ ಹೊಗಿತ್ತು. ಕೂಗಲು ಬಾಯಿಯಿಂದ ಸ್ವರವು ಮುಷ್ಕರ  ಹೂಡಿತ್ತು. ರಮೇಶಣ್ಣನ ಕೂಗು ನನ್ನ ಕಿವಿಗೆ ಬೀಳುತ್ತಲೇ ಇರಲಿಲ್ಲ!

ಹಂದಿ ನನ್ನ ಹತ್ತಿರ ಬಂದಾಗಿತ್ತು. ನನಗೆ ಒಮ್ಮೆಲೇ ಎಲ್ಲಾ ನೆನಪಾಗತೊಡಗಿತು. ಮನೆ ಅಮ್ಮ, ಅಪ್ಪ, ಮಾವ, ಸ್ಕೂಲು, ಟೀಚರ್ರು, ಅಜ್ಜ, ಹಂದಿ...................
ಒಂಬ್ಬೊಬ್ಬರಾಗಿ ಕಣ್ಮುಂದೆ ಮಿಂಚಿ ಮರೆಯಾದರು.  ನಾನೇನು ಮಾಡಲಿ? ನನ್ನ ಕತೆ ಮುಗಿಯಿತು. ಬೆಂಗಳೂರಿನ ಲಾಲ್ ಬಾಗ್ ನೋಡಬೆಕೆಂಬ ನನ್ನ ಗುರಿ ಈಡೆರುವ ಮೊದಲೇ ನಾನು ಸಾಯುತ್ತೇನೆಂಬ ಯೋಚನೆ ಅಂತಹ ಸಮಯದಲ್ಲಿಯೂ ಶುರುವಾಯಿತು!

ಅಯ್ಯೋ ದೆವರೇ, ಎನ್ನುತ್ತಾ ಕಾಣದ ದೇವರಿಗಾಗಿ ಆಗಸದತ್ತ ನೊಡಿದೆ. ಅಷ್ಟೇ! ಪಳ್ಳನೆ ಮಿಂಚೊಂದು ಮಿಂಚಿತು. ಗಾಡಂಧಕಾರದ ಕಗ್ಗತ್ತಲಲ್ಲಿ ಸೂರ್ಯನೇ ಉದಯಿಸಿದಂತೆ ಬೆಳಕೊಂದು ಮೂಡಿತು. ಮುಳುಗುತ್ತಿರುವ ನನಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಿತ್ತು!

ನಾನು ನಿಂತ ಸ್ಥಳದಲ್ಲಿ ಸರಿಯಾಗಿ ನನ್ನ ನೆತ್ತಿಯ ಮೇಲೆ ಮರವೊಂದು ಅಡ್ಡಡ್ಡ ಬಿದ್ದಿತ್ತು. ಕೈಗೆಟುವ ಎತ್ತರದಲ್ಲಿ ಬಿದ್ದಿದ್ದ ಮರ ಎರೆಡೂ ದಡಗಳನ್ನು ಸೇರಿಸಿತ್ತು. ತಡಮಾಡಲಿಲ್ಲ! ಒಂದೇ ನೆಗೆತಕ್ಕೆ ಹಾರಿ ಎರಡೂ ಕೈಗಳಿಂದ ಮರವನ್ನು ಹಿಡಿದು ಜೋತುಬಿದ್ದೆ! ಅದೇ ಕ್ಷಣದಲ್ಲಿ ಹಂದಿ ನನ್ನ ಕೆಳಗಿನಿಂದಲೇ ಗುರುಗುಟ್ಟುತ್ತಾ ದಾಟಿಹೊಯಿತು. ಅದರ ಓಡಿದ ಶಬ್ಧ ಮರೆಯಾಗುವವರೆಗೂ ಕೈಬಿಡಲೇ ಇಲ್ಲ!

ಇಡೀ ಕಾಡೇ ನಿಶ್ಯಬ್ಧ! ಹಂದಿ ತುಂಬಾ ದೂರ ಹೋಗಿರಬೇಕು. ಎಂದು ಯೋಚಿಸುತ್ತಾ ಕೆಳಗಿಳಿಯುವ ನಿರ್ದಾರ ಮಾಡಿ ಕೈ ಬಿಟ್ಟೆ!
 
ಅಷ್ಟೇ!
 
ಅಯ್ಯೋ......... ಅಮ್ಮಾ.................ಸತ್ತೇ..................!
ನನ್ನ ಬಾಯಿಂದ ಚೀತ್ಕಾರ ಹೊರಟಿತ್ತು!

ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹಿಂದೆ ಮುಂದೆ ಯೋಚಿಸದೇ  ಹಳ್ಳದ ಮೇಲೆ ಅಡ್ಡಲಾಗಿ ಬಿದ್ದ ಮರವನ್ನು ನೆಗೆದು ಹಿಡಿದುಕೊಂಡು ಹಂದಿಯಿಂದ ಪ್ರಾಣವನ್ನೇನೋ ಉಳಿಸಿಕೊಂಡಿದ್ದೆ. ಆದರೆ ಆ ಭಯದಲ್ಲಿ ನಾನು ಹಿದಿದುಕೊಂಡಿದ್ದು ಕಾಡುಸಂಪಿಗೆ ಮರವಾಗಿತ್ತು. ಅದರಲ್ಲೇನು ವಿಶೇಷ ಅಂತೀರಾ? ಮಲೆನಾಡಿನಲ್ಲಿ ಅತೀ ಹೆಚ್ಚು ಮುಳ್ಳುಗಳು  ಮತ್ತು  ನಂಜಿನ ಮುಳ್ಳುಗಳಿರುವ ಮರ ಕಾಡುಸಂಪಿಗೆ ಮರ! ಅದನ್ನೇ ನಾನು ಹಿಡಿದು ನೇತಾಡಿದ್ದು!

ದಬ್ಬಣದಂತ ಮುಳ್ಳುಗಳು ನನ್ನ ಕೈಯನ್ನು ಚುಚ್ಚಿಕೊಂಡಿದ್ದವು. ಎಷ್ಟೇ ಒದ್ದಾಡಿ ಬೊಬ್ಬೆ ಹೊಡೆದರೂ ಕೈ ಬಿಡಿಸಿಕೊಳ್ಳಲು ಆಗದೇ ಇನ್ನಷ್ಟು ನೋವಾಗುತ್ತಿತ್ತು. ಕೊನೆಗೆ ರಮೇಶಣ್ಣ ನನ್ನ ಬೊಬ್ಬೆ ಕೆಳಿ ಓಡಿ ಬಂದು ಕೈ ಬಿಡಿಸಿದ್ದ. ನನ್ನನ್ನು ಕೆಳಗಿಳಿಸಿದ ನಂತರ ಕೈಯ್ಯಲ್ಲಿ ಮುರಿದು ಉಳಿದುಕೊಂಡಿದ್ದ ಮುಳ್ಳುಗಳನ್ನು ಕೀಳಲು ಪ್ರಯತ್ನಿಸಿ ಇನ್ನಷ್ಟು ನೋವು ಹೆಚ್ಚಿಸುತ್ತಿದ್ದ.

ರಕ್ತ ಕೋಡಿಯಾಗಿ ಹರಿಯುತ್ತಿತ್ತು. ಬೆರಳುಗಳೂ ಸೀಳಿಕೊಂಡು ಅಸಾಧ್ಯ ನೊವಾಗುತ್ತಿತ್ತು. ಹಂದಿ ಓಡಿಬಂದು ನನ್ನ ಕೈ ಜಗಿಯುತ್ತಿರುವ ಅನುಭವ! ಸುತ್ತಲೂ ಕತ್ತಲು ಕವಿದಂತಾಯಿತು. ಕಣ್ಣು ಬಿಡಲೂ ತ್ರಾಣವಿಲ್ಲ. ಯಾರೊ ನೀರು ಕುಡಿಸಿದರು. ನನಗೆ ತಲೆ ಸುತ್ತಿ ಪ್ರಜ್ನೆ ತಪ್ಪಿತು. ಕಾಡಿನ ಔಶಧಿ ಮಾಡಿ ಕೂಡಲೇ ಆಸ್ಪತ್ರೆಗೆ ಹೊತ್ತು ಓಡಿದರು.

ನನ್ನ ಕೈ ನೊಡಿದ ಡಾಕ್ಟ್ರು ಬೆರಗಾಗಿ ಇಕ್ಕಳದಿಂದ ಮುರಿದು ಉಳಿದಿದ್ದ ಮುಳ್ಳುಗಳನ್ನೆಲ್ಲಾ ಎಳೆದು ತೆಗೆದಿದ್ದೂ, ಹರಿದ ಗಾಯಗಳಿಗೆ ಹೊಲಿಗೆ ಹಾಕಿದ್ದೂ ನನಗೆ ಗೊತ್ತಾಗಿದ್ದು ಪ್ರಜ್ನೆ ಬಂದಾದ ಮೆಲೆ ರಮೆಶಣ್ಣ ಹೇಳಿದಾಗಲೇ! ನನಗೆ ಈ ಗತಿಯಾಗಲು ಕಾರಣವಾದ ಹಂದಿಯನ್ನು ನನ್ನಜ್ಜನೇ ಹೊಡೆದದ್ದಂತೂ ಗಾಯದ ನೋವನ್ನೆಲ್ಲಾ ಮರೆಸಿತ್ತು!

ಹಂದಿ ನೋಡುವ ಆಸೆ ಹೆಚ್ಚಾಯಿತು. ಡಾಕ್ಟರನ್ನು ಕಾಡಿ ಬೇಡಿ ರಮೇಶಣ್ಣನೊಂದಿಗೆ ಮನೆಗೆ ಹೊರಟೇಬಿಟ್ಟೆ. ಕೈ ಗಾಯಗಳು, ನೋವು, ರಕ್ತ ಯಾವುದರ ಪರಿವೆಯೂ ಇಲ್ಲ. ಮನಸಿನ ತುಂಬಾ ಹಂದಿ ಹಂದಿ! ಹಂದಿ ಹೊಡೆದ ಖುಶಿ ಅಷ್ಟೇ!

ನನ್ನ ಜೀವಮಾನದಲ್ಲಿ ಎಂದೆಂದೂ ಮರೆಯದ ಶಿಕಾರಿಯೊಂದು ಹೀಗೆ ನಡೆದಿತ್ತು. ಅಂದು ನಾನು ಪ್ರಾಣಭಯದಿಂದ ಮುಳ್ಳೆನ್ನುವುದನ್ನು ಮರೆತು ಮರವನ್ನು ಹಿಡಿದು ಜೋತುಬಿದ್ದಿದ್ದೆ. ಆ ಕ್ಷಣ ಮುಳ್ಳು ಚುಚ್ಚಿದ ನೋವೇ ಆಗಲಿಲ್ಲ. ಯಾಕೆಂದರೆ ಹಂದಿಯಿಂದ ಪ್ರಾಣ ಉಳಿಸಿಕೊಳ್ಳಬೆಕಿತ್ತು. ಆ ಭಯವೇ ಹೆಚ್ಚಾಗಿತ್ತು. ಆದರೆ ಹಂದಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ ನನ್ನಂತೆಯೇ ಇತ್ತು ಎಂದು ಈಗಲೂ ಒಮ್ಮೊಮ್ಮೆ ಮನದಲ್ಲೇ ಯೋಚಿಸಿ ಕೊರಗುತ್ತೇನೆ! ಈಗಂತೂ ನಮ್ಮ ಮನೆಯಲ್ಲಿ ಶಿಕಾರಿ ನಿರ್ಭಂದಿಸಿದ್ದೆನೆ. ಎರಡೂ ಕೋವಿಗಳೂ ಕೇವಲ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಲು ಮಾತ್ರ ಎಂಬಂತೆ ನಮ್ಮ ಮನೆ ಜಗುಲಿಯ ತೊಲೆಯಲ್ಲಿ ರಾರಾಜಿಸುತ್ತಿವೆ! ದೀಪಾವಳಿಯ ದಿನ ಪೂಜೆಗೆ ಕುಳಿತುಕೊಳ್ಳುತ್ತವೆ, ಚುನಾವಣೆಯ ಸಮಯದಲ್ಲಿ ಪೋಲಿಸ್ ತಾಣೆಯೆಂಬ ನೆಂಟರ ಮನೆಗೆ ಹೋಗಿ ಬರುತ್ತವೆ ಅಷ್ಟೆ.


(..........ಮುಗಿಯಿತು...........)  

Friday, May 21, 2010

ಶಿಕಾರಿ (ಭಾಗ-2)

 ಎಲ್ಲರೂ ನಗ್ತಿದ್ದಾರೆ,
ನಾನೂ ನಗತೊಡಗಿದೆ. ಎಲ್ಲರೂ ನಗುವಾಗ ನಾನ್ಯಾಕೆ ಸುಮ್ನಿರಲಿ?  ನಮ್ಮ ಗಂಟೇನು ಹೋಗಲ್ವಲ್ಲ ನಕ್ಕರೆ!
ಕಾರಣ ಹೇಗಿದ್ರೂ ಆಮೇಲೆ ಗೊತ್ತಾಗುತ್ತೆ!

ಎಲ್ಲರ ದೃಷ್ಟಿ ನನ್ನತ್ತಲೇ ನೆಟ್ಟಿದೆ. ನನ್ನನ್ನೇ ನೋಡಿ ನಗುತ್ತಿದ್ದಾರೆ!

" ಏ ಪೈ,  ಮುಂಡೆಗಂಡ ಕುರ್ದೆ...!  ನಿನ್ನ ಚಡ್ಡಿ ಬಿದ್ದು ಹೋಗ್ಯದಲ್ಲೋ.......! ನಿನ್ನ ಮ್ಯಾಣೆ ತಿರ್ಪಾ.... ಹೆಂಗೆ ದುಂಡಗೆ ನಿತ್ತಾನೆ ನೋಡು" 

 ಎಲ್ಲರ ನಗುವಿಗೆ ಕಾರಣ ನನ್ನ ಚಡ್ಡಿ ಬಿದ್ದು ಹೋಗಿ ಉಚಿತ ದರ್ಶನ ಆಗಿದ್ದು ಎಂದು ತಿಳಿಯುವ ಹೊತ್ತಿಗೆ ನನ್ನ ಅರ್ಧ ಮಾನ -ಮರ್ಯಾದೆ ಹೋಗಿಯಾಗಿತ್ತು! ಸ್ವಲ್ಪವಾದರೂ ಉಳಿಯಲಿ ಅಂತ ಬೇಗ ಬೇಗ ಚಡ್ಡಿ ಏರಿಸಿಕೊಂಡೆ!

ಗುಂಡಿ ಕಿತ್ತುಹೊಗಿದ್ದ ಚಡ್ಡಿ ಕೆಳಗೆ ಜಾರಿತ್ತು. ಹಾಳಾದ ಉಡಿದಾರ ಬೇರೆ ಅವತ್ತೇ ಕಿತ್ತು ಹೋಗಬೇಕಿತ್ತಾ? ಈಗ ಏನು ಮಾಡೋದು? ಒಂದು ಕೈಯ್ಯಲ್ಲಿ ಚಡ್ಡಿ ಹಿಡ್ಕೊಂಡು ಹೋಗಲು ಸಾಧ್ಯವಿಲ್ಲ. ದೈನ್ಯದಿಂದ ರಮೆಶಣ್ಣನ ಕಡೆ ನೋಡಿದೆ.

ನನ್ನ ಕಳೆಗುಂದಿದ ಮುಖಾರವಿಂದವ ನೋಡಿ ರಮೇಶಣ್ಣನಿಗೆ  ಅರ್ಥವಾಯಿತೇನೋ? ಅಲ್ಲಿ ಇಲ್ಲಿ  ಹುಡುಕಿ ಒಂದು ಬಳ್ಳಿ ಕಿತ್ತು ತಂದು ನನ್ನ ಸೊಂಟಕ್ಕೆ ಕಟ್ಟಿದ. ಇನ್ನು ನಾನು ತೆಗೆಯುವವರೆಗೆ ಚಡ್ಡಿ ಬಿದ್ದು ಹೋಗುವುದಿಲ್ಲ ಎಂಬ ದೃಡವಾದ ನಂಬಿಕೆಯೊಂದಿಗೆ ಎಲ್ಲರ ಹಿಂದೆ ಹೊರಟೆ!  ನನ್ನ ಚಡ್ಡಿ ಪ್ರಸಂಗ ಎಲ್ಲರ ಬಾಯಲ್ಲೂ ಎಲೆ ಅಡಿಕೆ ರಸದಂತೆ ಕೆಂಪಾಗಿ ಹೋಗಿತ್ತು. ಥೂ ಹಾಳಾದ ಚಡ್ಡಿ! ನನ್ನ ಮರ್ಯಾದೆ ಎಲ್ಲಾ ತೆಗೆಸಿತು. ನಾಳೆಯಿಂದ ಈ ಚಡ್ಡಿ ಮುಟ್ಟೋದೇ ಇಲ್ಲ! ಹೀಗೊಂದು ಶಪಥ ನನ್ನ ಮನದಲ್ಲಿ ಮೂಡಿ ಮರೆಯಾಯಿತು!

 ಅಂತೂ ಇಂತೂ ಹಳು ಸೋಯುವ ಕಾರ್ಯ ಶುರುವಾಯಿತು. ನಾನು ರಮೆಶಣ್ಣನ ಬೆನ್ನು ಬಿಡಲೇ ಇಲ್ಲ. ಎಷ್ಟಾದರೂ ನನ್ನ ಮರ್ಯಾದೆ ಕಾಪಾದಿದವನಲ್ವಾ?  ಎಲೆ ಅಡಿಕೆಯ ಆಸೆ ಬೇರೆ! ಅದು ಬೇರೆ ಮಕ್ಕಳು ದೊಡ್ಡವರ ಜೊತೆಗೇ ಇರಬೇಕೆಂಬ ನಿಯಮ ಇದೆಯಲ್ಲ! ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅದು ಕ್ಷೇಮವಾಗಿತ್ತು.

ಹೀಡ್ಕಾ.....  ಹೀಡ್ಕಾ...........
 ಕ್ರೂ.......... ಕ್ರೂ..............
ಹಿಡ್ಡಿಡ್ದೋ.............

ಕೂಗಾಟ ಚೀರಾಟ ಕಾಡಿನ ಪ್ರಶಾಂತತೆಯ ಸಾಗರವನ್ನು ಕಲಕಿತು. ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳೆಲ್ಲ ಭಯಗೊಂಡು ಓಡಿದವು. ಮರದ ಮೇಲಿದ್ದ ನಮ್ಮ ಪೂರ್ವಜರಿಗೆ ಮಾತ್ರ ಯಾವುದೇ ಭಯ ಆದಂತೆ ಕಾಣಲಿಲ್ಲ! ಆಗಾಗ ಹಳ್ಳಿಗೂ ಬರುತ್ತಿದ್ದ ಮಂಗಗಳಿಗೆ ನಮ್ಮ ಕೂಗಾಟ ಹಾರಾಟ ಸಾಮಾನ್ಯ ಸಂಗತಿಯೇನೋ ಎಂಬಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ದವು!
ಕಾಡಿನ ತುಂಬಾ ಕೂಗಾಟ ಮುಗಿಲು ಮುಟ್ಟಿತು. ಕೋಲಿನಿಂದ ಬಡಿಯುತ್ತಾ ಕಲ್ಲು ಹೊಡೆಯುತ್ತಾ ಮುನ್ನುಗ್ಗತೊದಗಿದೆವು.

ಸೂರ್ಯ ನೆತ್ತಿಗೆ ಬಂದಾಗಿತ್ತು. ಇಷ್ಟು ದೂರ ಬಂದರೂ ಒಂದೂ ಪ್ರಾಣಿಯಾ ಸದ್ದೇ ಇಲ್ಲ! ದಿನಾ ರಾತ್ರಿ ಬಾಳೆತೋಟಕ್ಕೋ ಕಬ್ಬಿಣ ಗದ್ದೆಗೋ ಬಂದು ಲೂಟಿ ಮಾಡುವ ಹಂದಿಗಳು ಎಲ್ಲಿ ಹೋದವು? ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಕಡಗಳೆಲ್ಲಿ ಹೋದವು? ಕೊನೆಗೊಂದು ಕುರಿಯೂ ಸಿಗಲಿಲ್ವಲ್ಲ ಛೆ!



 
ಹಂದಿ ಮುಂದೇ.....................! ಹಂದಿ ಮುಂದೇ.................!

 ಯಾರೋ ಕೂಗಿದ್ದು ಕೇಳಿ ತಟ್ಟನೆ ಯೋಚನೆಗೆ ಲಗಾಮು ಹಾಕಿ ಒಕ್ಕೊರಲಿಂದ ಎಲ್ಲರೂ ಮತ್ತೆ ಕೂಗತೋಡಗಿದೆವು! ಆದರೆ ನಾವ್ಯಾರೂ ಹಂದಿ ನೋಡಲಿಲ್ಲ, ಅದು ಓಡಿದ ಸದ್ದೂ ಕೇಳಲಿಲ್ಲ! ಆದರೆ ಮೊದಲು ಕೂಗಿದವನ ಮೇಲೆ ಅಚಲ ನಂಬಿಕೆ! ಪತಿ-ಪತ್ನಿಯರ ನಡುವೆ ಇಷ್ಟು ನಂಬಿಕೆ ಇರುವುದಾಗಿದ್ದರೆ ಹಲವಾರು ಸಂಸಾರಗಳು ಒಡೆಯದೆ ಉಳಿಯುತ್ತಿದ್ದವು ಅನ್ನುವುದು ಬೇರೆ ಮಾತು!

ನಾವು ಕೂಗಿದ ಕೆಲವೇ ಕ್ಷಣದಲ್ಲಿ ಕಾಡನ್ನೇ ನಡುಗಿಸುವಂತೆ ಕೇಳಿಸಿತು ಕೋವಿ ಈಡಿನ ಶಬ್ದ!
ಗುಡುಂ!

ಇಡೀ ಕಾಡೇ ನಿಶ್ಯಬ್ಧ! ಹಂದಿ ಹೊಡೆದರು, ಆ ಜಾಗಕ್ಕೆ ಓಡಬೇಕು, ಆದರೆ ಅತ್ತಲಿಂದ ಯಾವದೇ ಸಂದೇಶ ಇಲ್ಲ! ಬರೀ ಕಾದಿದ್ದೇ ಬಂತು. ಅಷ್ಟರಲ್ಲೇ ಮತ್ತೊಂದು ಈಡು! ಹ್ಹೋ! ಹಂದಿ ಈಗ ಬಿತ್ತು ಎಂಬ ಆಸೆ ಮೂಡಿತು.
ಆದರೆ ಹೊಡೆದವರು ಯಾಕೆ ಕೂಗು ಹಾಕಲಿಲ್ಲ. ಬಹುಶಃ ಹಂದಿ ತಪ್ಪಿಸಿಕೊಂಡಿರಬೇಕು. ಇವತ್ತು ಯಾಕೋ ಸಮಯಾನೆ ಸರಿಯಿಲ್ಲ. ಒಂದೂ ಒಳ್ಳೆದಾಗ್ತಾ ಇಲ್ಲ! ಹಾಳಾದವರು ಎರೆಡು ಈಡು ಹೊಡೆದರೂ ಒಂದು ಹಂದಿ ಬೀಳಲಿಲ್ಲ.

"ಸತ್ರು ಮುಂಡೆಗಂಡ್ರು! ಎಲ್ಲಿ ಈಡು ಹೊಡ್ಡ್ರೋ? ಹಂದಿನ ಅಚೇ ಕಾಡಿಗೆ ದಾಟ್ಸೆ ಬಿಟ್ರು!"
ಎಲೆ ಅಡಿಕೆ ರಸ ಉಗಿಯುತ್ತ ಬಿಲ್ಲಿನವರಿಗೆ ಮಂಗಳಾರತಿ ಮಾಡಿದ ರಮೇಶಣ್ಣ! ನನಗೆ ಬೇಸರವಾಯಿತು. 
ಇದು ಸಿದ್ಧನ ಈಡು ಅಂತ ಕೆಲವರು, ಅಲ್ಲ ಅದು ಅಯ್ಯಣ್ಣಜ್ಜನ ಈಡು ಅಂತ ಮತ್ತೊಬ್ಬರು ಚರ್ಚಿಸತೊಡಗಿದರು. ಎರಡನೆಯ ಈಡಿನ ಶಬ್ದ ಅಜ್ಜನ ಕೊವಿದೆ ಇರ್ಬೇಕು. ಆದರೆ ಅಜ್ಜನ ಈಡು ತಪ್ಪಿತ? ಹಾಗಾದ್ರೆ ಹಂದಿ ಬಲವಾದ್ದೆ ಅನುಮಾನವೇ ಇಲ್ಲ.

ಇಷ್ಟೊತ್ತು ಇಲ್ಲದ ಬಳಲಿಕೆ ಈಗ ಶುರುವಾಯಿತು. ನಿರಾಶೆ ಎಲ್ಲರ ಮುಖದಲ್ಲೂ ಮಿಂಚಿ ಮರೆಯಾಯಿತು. ಸರಿ, ಒಂದು ತಪ್ಪಿದರೇನು. ಇನ್ನೂ ಸಮಯ ಬೇಕಾದಷ್ಟಿದೆ. ಮುಂದುವರೆಯುವ ನಿರ್ಧಾರ ಮಾಡಿ ಮುನ್ನುಗ್ಗತೊಡಗಿದೆವು.

ಆದರೆ ಈಡು  ಹೊಡೆದ ಸ್ಥಳದಲ್ಲಿ ನಡೆದದ್ದೇ ಬೇರೆ. ಹಂದಿ ಮುಂದೇ ಎಂಬ ಕೂಗು ಕೇಳಿ ಬಿಲ್ಲಿಗೆ ಕೂತಿದ್ದ ಸಿದ್ಧನ ಕಿವಿ ನೆಟ್ಟಗಾಗಿತ್ತು! ಇಳಿಜಾರಿನಲ್ಲಿ ಹಂದಿ ದಡದಡದಡ ಓಡಿ ಬರುವ ಸದ್ದು ಹತ್ತಿರವಾಗುತ್ತಿದ್ದಂತೆ ಕೋವಿಯ ಚಾಪು ಎಳೆದು ಸದ್ದು ಬಂದ ಕಡೆಗೆ ನೋಡತೊಡಗಿದ. ಹಂದಿ ಹತ್ತಿರ ಹತ್ತಿರ ಬರುತ್ತಿದೆ, ಸ್ವಲ್ಪ ಬಯಲಿದ್ದಲ್ಲಿ ಹಂದಿ ಅವನಿಗೆ ಕಾಣಿಸಿತು. ಅದನ್ನು ನೋಡುತ್ತಲೇ ಒಂದು ಕ್ಷಣ ಸಿದ್ಧನ ಎದೆ ಜಲ್ಲೆಂದಿತು! ಅವನ ಜೀವಮಾನದಲ್ಲೇ ಅಷ್ಟು ದೊಡ್ಡ ಹಂದಿ ನೋಡಿರಲಿಲ್ಲ! ಆದರೂ ಧೈರ್ಯ ಮಾಡಿ ಗುಂಡು ಹೊಡೆದೇ ಬಿಟ್ಟ! ಗುಂಡು ಹಾರಿದ್ದೆ ತಡ, ಸಿದ್ಧಣ್ಣ ಕೊವಿಯನ್ನೂ ಬಿಟ್ಟು ಕ್ಷಣಾರ್ಧದಲ್ಲಿ ಮರವೇರಿದ್ದ!

ಹಂದಿಗೆ ಈಡೇನೋ ಬಿದ್ದಿತ್ತು. ಆದರೆ ಅದು ಸಾಯಲು ಆ ಈಡು  ಸಾಕಾಗಲಿಲ್ಲ. ನೋವಿನಿಂದ ಕೋಪಗೊಂಡು ಚೀರುತ್ತಾ ಸಿದ್ಧನನ್ನು ತಿವಿಯಲು ಹೋಗಿ ಅವನು ಸಿಗದಿದ್ದಾಗ ಆ ಮರವನ್ನೇ ಜೋರಾಗಿ ತಿವಿದಿತ್ತು. ಆ ತಿವಿತ ಅದೆಷ್ಟು ಬಲವಾಗಿತ್ತೆಂದರೆ ಮರದ ಮೇಲಿದ್ದ ಸಿದ್ಧ ಕೂಡ ಒಮ್ಮೆ ಹೌಹಾರಿದ! ಅದರ ಆರ್ಭಟ ನೋಡಿ ಗಂಟಲು ಒಣಗಿ ಯಾರನ್ನಾದರೂ ಕರೆಯಬೇಕೆಂಬುದನ್ನೂ ಮರೆತ!

ಸ್ವಲ್ಪ ದೂರದಲ್ಲಿದ್ದ ನನ್ನಜ್ಜನಿಗೆ ಏನೋ ಯಡವಟ್ಟು ಆಗಿದೆ ಎಂದು ಮನವರಿಕೆ ಆಯಿತು. ಕೋವಿ ಹಿಡಿದು ಸಿದ್ಧನ ಹತ್ತಿರ ಓಡಿದ. ನೋಡುತ್ತಾನೆ ಕೆಂಗಣ್ಣು ಬಿಡುತ್ತ ಹಂದಿ ಸಿದ್ಧ ಹತ್ತಿದ ಮರದ ಬುಡದಲ್ಲಿ ನಿಂತು ಅಜ್ಜನನ್ನು ದುರಗುಟ್ಟಿ ನೋಡುತ್ತಿದೆ. ಅದರ ಕೋರೆ ಹಲ್ಲು, ಕೆಂಗಣ್ಣು, ಆಕಾರ ನೋಡಿದ ಎಂತವರಿಗಾದರೂ ಒಮ್ಮೆ ಭಯವಾಗದೆ ಇರಲಾರದು. ಆದರೆ ಅಜ್ಜ ಭಯಪಡಲಿಲ್ಲ. ತನ್ನ ಜೀವಮಾನದಲ್ಲಿ ಅಂತಹ ಅದೆಷ್ಟು ಹಂದಿಗಳನ್ನು ಹೊಡೆದಿದ್ದನೋ ಲೆಕ್ಕ ಇಟ್ಟವರಾರು? ತನ್ನೆಡೆಗೆ ನುಗ್ಗಿ ಬರುವ ಹವಣಿಕೆಯಲ್ಲಿದ್ದ ಹಂದಿಯ ತಲೆಯನ್ನು ಬಗೆದು ಹಾಕಿತ್ತು ಅಜ್ಜನ ಕೋವಿಯ ಈಡಿನ ಗುಂಡು! ಒಂದು ನೆಗೆತ ಮುಂದೇ ಹಾರಿ ವಿಲವಿಲ ಒದ್ದಾಡಿ ಹಂದಿ ತನ್ನ ಪ್ರಾಣ ಬಿಟ್ಟಿತು. ಹಂದಿ ಸತ್ತಿಲ್ಲವೆಂಬ ಅನುಮಾನದಿಂದ ಇನ್ನೊಂದು ಈಡು ಹಾಕಿ ಅಜ್ಜ ಕಾಯತೊಡಗಿದ.

ಆದರೆ ಸಿದ್ಧನ ಸುಳಿವೇ ಇಲ್ಲ! ಕೋವಿ ಅಲ್ಲೇ ಕೆಳಗೆ ಬಿದ್ದಿತ್ತು. ಅಜ್ಜನ ಮನ ಅಳುಕಿತು. ಆ ಹುಡುಗನೆಲ್ಲಿ ಹೋದ? 

"ಸಿದ್ಧ...... ಓ ಸಿದ್ಧ............."

"ಅಯ್ಯಾ, ನಾನಿಲ್ಲಿದ್ದೀನಿ"

ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಅಜ್ಜ ಹುಡುಕಾಡಿದ.

"ಎಲ್ಲಿ ಸತ್ತ್ಯೋ ಮುಂಡೆಗಂಡ?"

ನಡುಗುತ್ತಾ ಮರದ ಮೇಲಿಂದ ಇಳಿಯುತ್ತಿದ್ದ ಸಿದ್ಧನನ್ನು ನೋಡಿ ಅಜ್ಜನಿಗೆ ನಗು ತಡೆಯಲಾಗಲಿಲ್ಲ! 

"ನಿನ್ನ ಸಾಯದೆ ಹೋಗಾ....., ಕೋವಿ ಎಸ್ದು ಮರ ಹತ್ತಿಯಲ್ಲಾ.......... ಬಂಡ, ಗಂಡ್ಸನ ನೀನು.....?"

ಎಲೆ ಅಡಿಕೆಯ ಕರೆಗಟ್ಟಿದ ಹಲ್ಲಿನ ಬಾಯಿ ಕಿರಿಯುತ್ತಾ ಕೈ ಕಟ್ಟಿ ನಿಂತಿದ್ದ ಸಿದ್ಧ ಅವಮಾನಗೊಂಡು! ಏನು ಮಾಡಿಯಾನು ಪಾಪ, ಜೀವ ಭಯ ಯಾರಪ್ಪಂದು? ಹಂದಿ ಹೋದ್ರೆ ಹೋಯ್ತು. ಇನ್ನೊದು ಸಿಗುತ್ತೆ. ಜೀವ ಹೋದ್ರೆ ಮತ್ತೆ ಸಿಗಲ್ವಲ್ಲ?

"ನೀವ್ ಸುಮ್ನಿರಿ ಅಯ್ಯಾ............ ಜೀವ ಉಂದಿದ್ರೆ ಬ್ಯಲ್ಲ ಬೇಡ್ಕು ತಿನ್ಬೋದು, ಅದ್ರ ಕ್ವಾರೆ ಹಲ್ಲು ನೋಡಿದ್ರ? ಉಂದೆ ಗುದ್ದಿಗೆ ಹೊಟ್ಟೆ ಬಗ್ದ್ ಹಾಕ್ತಿತ್ತು......"

ತಾನು ಕೋವಿ ಬಿಟ್ಟು ಮರ ಹತ್ತಿದ್ದನ್ನು ಸಮರ್ಥಿಸಿಕೊಂಡ ಸಿದ್ಧನೆಂಬ ಬೂಪ! ಅಜ್ಜ ನಕ್ಕು ಸುಮ್ಮನಾದ. ಸಿದ್ಧನಿನ್ನೂ ಹಂದಿ ಸತ್ತಿರುವ ನಂಬಿಕೆ ಬಾರದೆ ಅಜ್ಜನನ್ನೂ, ಅಜ್ಜನ ಕೊವಿಯನ್ನೂ ಮೆಚ್ಚುಗೆಯಿಂದ ನೋಡಿದ!

"ಅಯ್ಯಾ.... 
ಕೂಗಿ ಎಲ್ಲರ್ನೂ ಕರೀಲಾ?"

"ಬ್ಯಾಡ ಸುಮ್ನಿರು. ಸೋವಿನವರು ಇನ್ನೂ ಅರ್ಧ ಕಾಡಿನಲ್ಲೇ ಇದ್ದಾರೆ. ಸುಮ್ಮನೆ ಯಾಕೆ ಬರಬೇಕು? ಕಾಡು ಸೋಯುತ್ತಾ ಬರಲಿ"

ಅಜ್ಜನ ತರ್ಕವನ್ನು ಸಿದ್ಧ ಒಪ್ಪಿಕೊಂಡು ಸುಮ್ಮನಾದ!







                                                                                                       (......................ಮುಂದುವರೆಯುವುದು)

Thursday, May 13, 2010

ಶಿಕಾರಿ....! ಹಂದಿ ಹೊಡೆದದ್ದು!................
























 ....................................................................
"ಏ ಪವಿ.....,  ಇವತ್ತು ದೊಡ್ಡ ಬೇಟೆ ಇದೆ"


ಬೆಳಿಗ್ಗೆ ಎದ್ದು ಉಪ್ಪು ಮಸಿ ಕೆಂಡದಿಂದ ಸರ್ವ ಶಕ್ತಿಯನ್ನು ಉಪಯೋಗಿಸಿ
ಹಲ್ಲುಜ್ಜುತ್ತಿದ್ದಾಗ ಅಜ್ಜ ಬಂದು ಪಿಸುಗುಟ್ಟಿದರು ಯಾವುದೋ ಗುಟ್ಟು ಹೇಳುವಂತೆ! ಶಿಕಾರಿಯ ಹೆಸರು ಕೇಳುತ್ತಲೇ ದೇಹದ ಕೂದಲ ಎಳೆ ಎಳೆಯೂ ನಾ ಮುಂದು ತಾ ಮುಂದು ಎಂದುಕೊಳ್ಳುತ್ತಾ ಸೆಟೆದು ನಿಂತವು!


ಶಾಲೆಗೆ ಚಕ್ಕರ್ ಹೊಡೆದು ಬೇಟೆಗೆ ಹೋಗುವ ಮಜಾ ಅನುಭವಿಸಿದವನಿಗೆ ಗೊತ್ತು.ಶಾಲೆಗೆ ಹೋಗಿ ಆ ಮಾಸ್ಟರ ಬೆತ್ತದ ಪೆಟ್ಟು ತಿನ್ನುವುದು ತಪ್ಪಿದ ಖುಷಿ ಒಂದು ಕಡೆ, ಶಿಕಾರಿಯ ಮಜಾ ಇನ್ನೊಂದೆಡೆ! ಯಾರಿಗೆ ಬೇಕು ಶಾಲೆ ಓದು ಎಲ್ಲಾ? ಶಿಕಾರಿ ಮಾಡಿ ನಾಲ್ಕು ಹಂದೀನೋ ಕಡನೋ ಹೊಡೆದರೆ ಸಾಕು. ಜೀವನ ಪರ್ಯಂತ ಹೆಸರು ಉಳಿಯುತ್ತದೆ!

 
ಆಹಾ! ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!

ನಿತ್ಯಕರ್ಮಗಳನ್ನೆಲ್ಲಾ ಮುಗಿಸಿ, ತುಳುಸಿ ಕಟ್ಟೆಗೆ ನೀರು ಹಾಕಿ ಕೈ ಮುಗಿದು ತಿಂಡಿಗೆ ಓಡಿದೆ. ಭಕ್ತಿಯ ಗಂಧ ಗಾಳಿಯೇ ಅರಿಯದ ನನಗೆ ಅದೊಂದು ದಿನನಿತ್ಯದ ಕರ್ಮ ಅಷ್ಟೇ! ಅಜ್ಜಿ ಬೈಗುಳವನ್ನು ಸೇರಿಸಿ ಹಾಕಿಕೊಟ್ಟ ಅಕ್ಕಿ ರೊಟ್ಟಿ ಬೆಣ್ಣೆ ಬೆಲ್ಲವನ್ನು ಕಿವಿ ಮುಚ್ಚಿಕೊಂಡು ಮೆಲ್ಲತೊಡಗಿದೆ.


ಮೈ ಹುಷಾರಿಲ್ಲ ಎಂದು ರಜಾ ಅರ್ಜಿ ಬರೆದು ನಮ್ಮ ಕ್ಲಾಸಿಗೆ ತಲುಪಿಸುವಂತೆ ಮಾವನ ಮಗಳ ಹತ್ತಿರ ಕೊಟ್ಟೆ. ಸರ್ವರ ಸಹಿಯಲ್ಲೂ ಪಾರಂಗತನಾದ ನಾನು ಹಾಕಿದ್ದು ನನ್ನ ಮಾವನ ಸಹಿ ಅಂತ ಪಾಪ! ನಮ್ಮ ಟೀಚರಿಗೆ ಹೇಗೆ ಗೊತ್ತಾಗಬೇಕು? ಮಾರ್ಕ್ಸ್ ಕಾರ್ಡ್, ಲೀವ್ ಲೆಟರ್ ಕೊನೆಗೆ ಸ್ಕಾಲರ್ ಶಿಪ್ ಫಾರಂ ಮೇಲೂ ನಾನೇ ಸಹಿ ಮಾಡಿದ್ದು ಅಂತ ಯಾವ ದೊಡ್ಡ IAS ಅಧಿಕಾರಿಗಳೂ ಇನ್ನೂ ಕಂಡು ಹಿಡಿದಿಲ್ಲ! ಯಾವ ಯಾವ ಸ್ಥಳದಲ್ಲಿ ಯಾರ್ಯಾರ ಸಹಿ ಬೇಕು ಅಂತ ಗೊತ್ತುಂಟಲ್ಲ! ಹೀಗೆ ಒಮ್ಮೆ ವಿಜ್ಞಾನದಲ್ಲಿ ಫೇಲಾದ ಕಾರಣ ಮಾರ್ಕ್ಸ್ ಕಾರ್ಡಿಗೆ ಪೋರ್ಜರಿ ಸಹಿ ಮಾಡಿದ್ದೆ. ಅದು ಹೇಗೋ ಮಾವನಿಗೆ ಗೊತ್ತಾಗಿ ಬಾರುಕೋಲಿನಿಂದ ತಿಂದ ಪೆಟ್ಟು ಮರೆಯಲು ಬಾರುಕೊಲನ್ನೇ ಮರೆಯಬೇಕಾಯ್ತು! ಒಮ್ಮೊಮ್ಮೆ ಬಾರುಕೋಲನ್ನು ನೋಡಿ ಮೈ ಜುಮ್ ಅನ್ನೋದುಸುಳ್ಳಲ್ಲ!


ಮಾವ ಕೊಟ್ಟಿಗೆಗೆ ಸೊಪ್ಪಿನ ಹೊರೆ ಹೊತ್ತು ಬರುತ್ತಿದ್ದ. ಕೆಲಸ ಕೆಟ್ಟಿತು! ಗೊತ್ತಾದರೆ ಬಲಿ ಬಿಡಿಸುತ್ತಾನೆ. ಸಂಜೆ ಮನೆಗೆ ಬಂದ ಮೇಲೆ ತೊಂದರೆ ಇಲ್ಲ! ಎರಡು ಪೆಟ್ಟು ಬಿದ್ದರೂ ಸಹಿಸಿಕೊಳ್ಳಬಹುದು. ಶಿಕಾರಿ ಆಗಿರುತ್ತದಲ್ಲ. ಆ ಉತ್ಸಾಹದಲ್ಲಿ ಅಷ್ಟೇನೂ ನೋವು ಆಗುವುದಿಲ್ಲ. ಆದರೆ ಈಗ ಬೇಡ ಎಂದು ಬೈದರೆ! ಅಪಶಕುನ! ಮತ್ತೆ ಶಿಕಾರಿಗೆ ಹೋಗುವ ಹಾಗಿಲ್ಲ!


ಇಲ್ಲ! ಹಾಗಾಗಬಾರದು. ಹಿಂದಿನ ಬಾಗಿಲಿನಿಂದ ಓಡುವುದೊಂದೇ ದಾರಿ! ಸೊಂಟಕ್ಕೆ ಕಟ್ಟಿಕೊಂಡ ಟವಲ್ ಬಿಚ್ಚಿ ಚಡ್ಡಿ ಹಾಕಿಕೊಳ್ಳುವಷ್ಟು ಸಮಯ ಇಲ್ಲ. ಹಾಗೆಯೇ ಓಡಿದೆ ಕೈಗೆ ಸಿಕ್ಕ ಚಡ್ಡಿ ಹಿಡಿದುಕೊಂಡು!


ನಾಗರಬನ ದಾಟಿ ಮೈದಾನಕ್ಕೆ ಹೋಗುವಾಗ ದಾರಿ ಬದಿಯಲ್ಲೇ ಚಡ್ಡಿ ಹಾಕಿಕೊಂಡೆ. ಚಡ್ಡಿಯ ಎರಡೂ ಗುಂಡಿಗಳೂ ಕಿತ್ತು ಹೋಗಿವೆ ತಿಳಿದಿದ್ದು ಆಗಲೇ ತಿಳಿದಿದ್ದು! ಛೆ! ಓಡಿ ಬರುವ ಗಡಿಬಿಡಿಯಲ್ಲಿ ಚಡ್ಡಿಯ ಗುಂಡಿಯನ್ನು ಗಮನಿಸಲೇ ಇಲ್ಲ! ವಾಪಸ್ಸಂತೂ ಹೋಗುವ ಹಾಗಿಲ್ಲ! ಕಂಸ ಮಾವ ಆಗಲೇ ಕೂಗುವುದು ಕೇಳಿಸಿತ್ತು. ಇನ್ನೇನು ಮಾಡಲು ಸಾಧ್ಯ? ಒಂದು ಕೈಯ್ಯಲ್ಲಿ ಚಡ್ಡಿ ಹಿಡಿದು ಎಲ್ಲರೂ ಸೇರುವ ಬ್ಯಾಣದ ಹೆಬ್ಬಲಸಿನ ಮರದತ್ತ ಸಾಗಿ ಜನರ ಹಿಂಡಿನಲ್ಲಿ ಒಂದಾಗಿ ಕುಳಿತೆ.  ನಾಗಪ್ಪಣ್ಣನ ಹೊಸ ಕೋವಿ ನೋಡುವ ಕುತೂಹಲದಲ್ಲಿ ನನ್ನ ಚಡ್ಡಿಯನ್ನು ಯಾರು ಗಮನಿಸಲೇ ಇಲ್ಲ! ಸಧ್ಯ ಸಮಾದಾನವಾಯಿತು. 


ನಾಗಪ್ಪಣ್ಣನ ಹೊಸ ಕೋವಿ ಪಳಪಳನೆ ಹೊಳೆಯೋತ್ತಿತ್ತು. ಬೀಟೆಯ ಹತ್ತೆಯ ಕೋವಿ. ಎಣ್ಣೆ ಹಚ್ಚಿ ಹೊಳೆಯುವಂತೆ ಮಾಡಿದ್ದ. ನಾನೊಮ್ಮೆ ಮುಟ್ಟುವ ಬಯಕೆಯನ್ನು ತೋಡಿಕೊಂಡಾಗ ನಾಗಪ್ಪಣ್ಣ ಕೆಂಗಣ್ಣು ಬಿಟ್ಟು ಗತ್ತಿನಿಂದ ಹೆದರಿಸಿದ್ದ.
" ನೆಟ್ಟಗೆ ಒಂದು ದೊಣ್ಣೆ ಹಿಡ್ಕುಣಾಕೆ ಬರಲ್ಲ. ಮೊದ್ಲು ಅದನ್ನ ಕಲ್ತ್ಗಾ,  ಆಮೇಲೆ ಕೋವಿ ನೋಡ್ಬೈದಿ, ಹ್ಹ ಹ್ಹ ಹ್ಹಾ, ಕೋವಿ ನೋಡ್ತಾನಂತೆ"
ಎಂದು ವ್ಯಂಗ್ಯವಾಡಿದ. 


ಹೊಸ ಕೋವಿ ಎತ್ತಿ ನೋಡುವ ಮುಟ್ಟುವ ಆಸೆ ಆಸೆಯಾಗಿಯೇ ಉಳಿಯಿತು. ಮನಸ್ಸಿನಲ್ಲಿ ನಾಗಪ್ಪಣ್ಣನ ಮೇಲೆ ಕೋಪ ಬಂದು ಶಪತ ಮಾಡಿದ್ದೆ!
  
" ಮಾಡಿಸ್ತೀನಿ ನಿಂಗೆ ಇರು. ನಾನು ದೊಡ್ಡವನಾದ ಮೇಲೆ ನಿನ್ನ ಕೊವಿಗಿಂತಲೂ ಚೆಂದದ ಎರೆಡು ಕೋವಿ ಇಟ್ಟುಕೊಳ್ಳುತ್ತೇನೆ. ಆಮೇಲೆ ನಿನಗೆ ಮುಟ್ಟಲೂ ಬಿಡುವುದಿಲ್ಲ"


ರಮೇಶಣ್ಣ, ನನ್ನಜ್ಜ ಬರುತ್ತಿರುವುದು ನನಗೆ ಖುಶಿ ತಂತು. ಅಜ್ಜ ನನಗೆ ಒಂದು ದೊಣ್ಣೆ, ಒಂದು ಕತ್ತಿಯನ್ನು ಕೊಟ್ಟರು. ಅದೆ ನಮಗೆ ರಕ್ಷಾ ಆಯುಧ! ಅಜ್ಜನ ಕೋವಿ ಹೆಗಲ ಮೇಲೆ ಹೊತ್ತು ಬರುವ ಗತ್ತನ್ನು ನೋಡಿ ನನ್ನ ಮೈ ಮನವೆಲ್ಲಾ ರೋಮಾಂಚನಗೋಳ್ಳುತ್ತಿತ್ತು. ಆ ಗತ್ತೇ ಅಲ್ಲವೇ ನನ್ನನ್ನು ಶಿಕಾರಿಗಾಗಿ ತುಡಿಯುವಂತೆ ಮಾಡಿದ್ದು? ಆ ಕೊವಿಯೇ ಅಲ್ಲವೇ ಈ ಚಪಲತೆಗೆ ಕಾರಣ? 


ಎಲೆ ಅಡಿಕೆ ಹಾಕಿಕೊಂಡು, ಬೀಡಿ ಸೇದುವವರು ಬೀಡಿ ಸೇದತೊದಗಿದರು. ನನ್ನ ಕವಳಕಂತೂ ರಮೇಶಣ್ಣ ಇದ್ದನಲ್ಲಾ. ಅವನಿಂದ ಎಲೆ ಅಡಿಕೆ ತೆಗೆದು ಹಾಕಿಕೊಂಡೆ. ಮಲೆನಾಡಿನಲ್ಲಿ  ಮಕ್ಕಳು ಎಲೆ ಅಡಿಕೆ ಹಾಕುವುದು ಅಂತ ದೊಡ್ಡ ವಿಷಯವೇನಲ್ಲ!


" ಪೈ, ನಿನ್ಮಾವ ನೋಡದ್ರೆ ನನ್ನ ಕೊಂದೇ ಹಾಕ್ತಾನೆ" 


ಪ್ರವೀಣನೆಂಬ ಕ್ಲಿಷ್ಟ ಪದ ರಮೆಶಣ್ಣನ ಬಾಯಲ್ಲಿ ಪೈ ಆಗಿತ್ತು. ರಮೇಶಣ್ಣ  ನನ್ನ ಅಚ್ಚು ಮೆಚ್ಚು ಆಗಲು ಕಾರಣ ಎಲೆ ಅಡಿಕೆ ಸಂಬಂಧವೇ ಇರ್ಬೇಕು!


ಯಾವ ಕಾಡಿನಿಂದ ಹಳು ನುಗ್ಗಲು ಶುರುಮಾಡುವುದು? ಯಾರ್ರ್ಯಾರು ಎಲ್ಲೆಲ್ಲಿ ಬಿಲ್ಲಿಗೆ ಕೂರುವುದು ಎಂದು ನಿರ್ಧಾರವಾಗಲು ದೊಡ್ಡ ತರ್ಕ, ವಿವಾದ, ವೈಮನಸ್ಸುಗಳೇ ನಡೆದವು. ಯಾವ ರಾಜಕೀಯ ನಾಯಕರಿಗೂ ಕಡಿಮೆ ಇಲ್ಲದಂತೆ ಚರ್ಚೆಗಳು ನಡೆದವು. ಕೊನೆಗೆ ನನ್ನಜ್ಜನ ತೀರ್ಮಾನವೇ ಅಂತಿಮ. ಹಿರಿಯರೆಂಬ ಗೌರವದಿಂದ ಅಜ್ಜನ ಮಾತನ್ನು ಒಪ್ಪಿಕೊಂಡು ಎಲ್ಲರೂ ಎದ್ದು ನಿಂತರು. ನಾನೂ ದೊಣ್ಣೆಯನ್ನೇ ಕೊವಿಯಂತೆ ಹೆಗಲ ಮೇಲೆ ಇಟ್ಟುಕೊಂಡು ಗತ್ತಿನಿಂದ ಎದ್ದು ನಿಂತೆ. 


ಅಷ್ಟೇ!


ಜೋರಾಗಿ ನಗು! ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ! 


ಯಾಕೆ ಎಲ್ಲಾ ನಗ್ತಿದ್ದಾರೆ? 


ಅರೆ.......!


                                                                   (ಮುಂದುವರೆಯುವುದು..................)






ಮಲೆನಾಡಿನಲ್ಲಿ ಶಿಕಾರಿ ರೈತರ ಮನರಂಜನಾ ಕಾರ್ಯಗಳಲ್ಲಿ ಒಂದು. ಜೊತೆಗೆ ಕಾಡುಕೋಣ, ಹಂದಿಯಂತ ಪ್ರಾಣಿಗಳಿಂದ ಬೆಳೆಯನ್ನು ಕಾಪಾಡಿಕೊಳ್ಳಲು ಶಿಕಾರಿ ಅನಿವಾರ್ಯ. ಅಂತಹ ಶಿಕಾರಿಯ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 


ಮಲೆನಾಡಿನ ಪ್ರತಿಯೊಬ್ಬ ಮಗುವೂ ಕೂಡ ಬೇಟೆಯ ಆಸಕ್ತಿ ಹೊಂದಿರುತ್ತದೆ. ಸಾದಾರಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೋವಿ ಇದ್ದೆ ಇರುತ್ತದೆ. ಹಿರಿಯರೊಂದಿಗೆ ರಾತ್ರಿ ಹೊತ್ತಿನಲ್ಲಿ ಶಿಕಾರಿಗೆ ಮಕ್ಕಳೂ ಹೋಗುತ್ತಾರೆ. ದೊಡ್ಡ ಶಿಕಾರಿಯಷ್ಟು ಅಪಾಯ ರಾತ್ರಿ ಇರುವುದಿಲ್ಲವಾದದ್ದರಿಂದ, ರಾತ್ರಿ ಸಣ್ಣ ಸಣ್ಣ ಪ್ರಾಣಿಗಳು ಮಾತ್ರ ಸಿಗುವುದರಿಂದ ಮಕ್ಕಳನ್ನು ಕರೆದೊಯ್ಯುತ್ತಾರೆ. ಎಷ್ಟೋ ಸಾರಿ ಮಧ್ಯೆ ಕಾಡಿನಲ್ಲಿ ಪ್ರಾಣಿ ಕಂಡು ಕಣ್ತಪ್ಪಿಸಿ ಓಡಿದಾಗ ಅದನ್ನು ಬೆನ್ನಟ್ಟಿ ಹೋಗಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಒಬ್ಬರನ್ನೇ ಕಾಡಿನಲ್ಲಿ ಬಿಟ್ಟು, ಪ್ರಾಣಿಯ ಬೆನ್ನಟ್ಟಿ ಹೋಗುತ್ತಾರೆ. ಎಷ್ಟೋ ಬಾರಿ ಕತ್ತಲೆಯಲ್ಲಿ ದಿಕ್ಕು ತಪ್ಪಿ ಬೆಳಗಿನೊರೆಗೂ ಮಕ್ಕಳು ಕಾಡಿನಲ್ಲೇ ನಿಂತಿದ್ದು ಉಂಟು! ಇದು ನನ್ನ ಸ್ವಂತ ಅನುಭವ ಕೂಡ! ಆ ಕತೆಯನ್ನು ಇನ್ನೊಮ್ಮೆ ಹಂಚಿಕೊಳ್ಳುತ್ತೇನೆ. 

ಅಂತಹ ಶಿಕಾರಿಯ ಬಗ್ಗೆ, ಅದರ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅಭಿಲಾಷೆಯಿಂದ ನಿಮ್ಮ ಮುಂದೆ ಇಟ್ಟಿದ್ದೇನೆ. ಇಲ್ಲಿ ಕೆಲವು ವಾಕ್ಯಗಳನ್ನು ಮಲೆನಾಡಿನ ಗ್ರಾಮ್ಯ ಬಾಷೆಯಲ್ಲಿ ಬರೆದಿದ್ದೇನೆ. ಅರ್ಥ ಆಗದೆ ಇದ್ದಲ್ಲಿ ದಯವಿಟ್ಟು ಕೇಳಿ. ಅರ್ಥ ನೀಡುವ ಪ್ರಯತ್ನ ಮಾಡುತ್ತೇನೆ..

Monday, May 10, 2010

ಕೋಪವೇಕೆ ಮೀನಾಕ್ಷಿ?






 ಹುಸಿ ಕೋಪ ನಿನಗೇಕೆ

ತುಸು ಸನಿಹ ಬರಬಾರದೆ

ನನ್ನ ಚೆಲುವೆ ನೀನೊಮ್ಮೆ

ಮನಬಿಚ್ಚಿ  ನಗಬಾರದೇ.............




ನೀ ನಕ್ಕರೆ ಮನತುಂಬಿ


 ಸಿಹಿ ಮುತ್ತ ಕೊಡುವೆ


ಮುತ್ತು ರತ್ನ ವಜ್ರ


ಕೊಡಲೇ ಬಂಗಾರದೊಡವೆ...........


ಹುಸಿಕೋಪ ತೊರೆದು


ತುಸು ದಯೆಯ ತೋರಿ 


ಹೊಸ ಪ್ರೇಮ ತೋರು


ಅರಳಿಸು ಮನಸೆಲ್ಲಾ................






ಮೊದಲ ದಿನ  ಕಂಡಾಗ


ನೀ ತೊದಲಿ ನುಡಿದಂತೆ


ಹೃದಯದ ವೀಣೆಯ ನುಡಿಸು


ಅಂದದ ಬಯಕೆ ತುಂಬಿತಲ್ಲಾ.............


ನಸು ನಾಚಿಕೆಯ ಕಿರುನಗು


ತುಸು ತಡೆದರೂ ಬಂದೀತು


ಪಿಸುಮಾತನಾಡಿ ಮನಗೆಲ್ಲೋ 


ಆಸೆ ಎದೆಯಲ್ಲೇ ಉಳಿದೀತು...............




ಕೊನೆಗೂ ಬಾರದೆ ಕರುಣೆ


ಮುಗುಳ್ನಗೆಯೂ ಮೂಡದೇ


ಇತ್ತ ಬಾರೊಮ್ಮೆ ಮೀನಾಕ್ಷಿ


ಕೋಪದ ಕೆಂಗಣ್ಣು ಬಿಡದೆ.........!