Sunday, June 13, 2010

ಮಲ್ಲಣ್ಣನ ಮಹಾ ಮಾನವೀಯತೆ!....

ನಮ್ಮ ಮಲ್ಲಣ್ಣ ಒಂತರಾ ವಿಚಿತ್ರ ಮನುಷ್ಯ. ಅವನಿಗೆ ಯಾವಾಗ ಏನೇನು ವಿಚಾರಗಳು ಹೊಳೆಯುತ್ತವೆಯೋ 
ಅವನಿಗೂ ಗೊತ್ತಿಲ್ಲ. ಸದಾ ಒಂದಲ್ಲ ಒಂದು ಪಜೀತಿಯಲ್ಲಿ ಸಿಕ್ಕಿಹಾಕಿಕೊಳ್ತಾ ಇರ್ತಾನೆ....

ಇಂತಿರಲೊಂದು ದಿನ  ಮೂರ್ಖ ಪೆಟ್ಟಿಗೆಯಲ್ಲಿ ಯಾವುದೋ ಕಣ್ಣೀರು ತುಂಬಿದ ದಾರವಾಹಿ ನೋಡಿ ನಗುತ್ತಾ 
ಕುಳಿತಿದ್ದ(?) ನಮ್ಮ ಮಲ್ಲರ ಮಲ್ಲ!
ಇದ್ದಕ್ಕಿದ್ದಂತೆ ಜಾಹಿರಾತು ಶುರು! ಎಷ್ಟಾದರೂ ದಾರಾವಾಹಿಗಳು ಜಾಹಿರಾತಿನ ಒಂದು ಭಾಗ ತಾನೇ? ಅದ್ಯಾವುದೋ
ಧ್ವಿಚಕ್ರ ವಾಹನದ ಪ್ರಚಾರ! ಟ್ರಾಫಿಕ್ ಸಿಗ್ನಲ್ ನಲ್ಲಿ ಒಂದು ಹುಡುಗ ಹುಡುಗಿ ನಳನಳಿಸುವ ಚಂದದ ದ್ವಿಚಕ್ರ ವಾಹನದಲ್ಲಿ
ಕುಳಿತಿದ್ದಾರೆ. ಅವರ ಪಕ್ಕದಲ್ಲಿದ್ದ ಕಾರಿನಿಂದ ನೀರು ಕುಡಿದು ಖಾಲಿ ಬಾಟಲಿ ಹೊರಗೆಸೆದು ಕಾರು ಮುಂದೆ ಹೋಗುತ್ತದೆ. 
ಖಾಲಿ ಬಾಟಲಿ ಎತ್ತಿಕೊಂಡು ಅವರಿಬ್ಬರೂ ಕಾರನ್ನು ಹಿಂಬಾಲಿಸುತ್ತಾರೆ. ಹೊಂಡ  ಗುಂಡಿ ಮೆಟ್ಟಿಲು ಚರಂಡಿ ಎಲ್ಲೆಲ್ಲೂ 
ಸಲೀಸಾಗಿ ಓಡುವ  ಬಂಡಿ! ಅಂತೂ ಕೊನೆಗೆ ಇನ್ನೊಂದು ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರು ನಿಂತಿರುತ್ತದೆ. ಆ ಹುಡುಗಿ ಖಾಲಿ
ಬಾಟಲಿಯನ್ನು ಅದೆ ಕಾರಿನೊಳಗೆ ಹಾಕಿ ಟಾಟ ಮಾಡಿ ಹೋಗುತ್ತಾರೆ!

ಇದಿಷ್ಟು ಆ ಜಾಹಿರಾತು! ಈ ಜಾಹಿರಾತಿನಿಂದ ಮಲ್ಲಣ್ಣ ಬಹಳ ಪ್ರೇರಿತನಾಗುತ್ತಾನೆ. ಏನಾದರೂ ಸಮಾಜ ಕಲ್ಯಾಣ
ಕಾರ್ಯ ಮಾಡಬೇಕೆಂಬ ಮಹದಾಸೆ ಮಲ್ಲಣ್ಣನ ಮನದಲ್ಲಿ ಮೂಡುತ್ತದೆ.

ಎಂದಿನಂತೆ ಮಲ್ಲಣ್ಣ ಆಫೀಸಿಗೆ ಬೈಕಿನಲ್ಲಿ ಹೋಗ್ತಾ ಇದ್ದ. ಸಿಗ್ನಲ್ಲಿನಲ್ಲಿ ನಿಂತಿದ್ದ ಅವನ ಪಕ್ಕ ಒಂದು ಕಾರು ಬಂದು ನಿಂತಿತು.
ಅದರಲ್ಲಿ ಮೂರ್ನಾಲ್ಕು ಹುಡುಗರು ಜೋರಾಗಿ ಮ್ಯುಸಿಕ್ ಹಾಕಿಕೊಂಡು ತಾವೂ ಹಾಡುತ್ತಾ ಕೇಕೆ ಹಾಕುತ್ತಿದ್ದರು. ಕುಡಿದ ನೀರಿನ
 ಖಾಲಿ ಬಾಟಲಿಯೊಂದನ್ನು ಹೊರಗೆಸೆದ ಹುಡುಗರು ಕಾರನ್ನು ರೊಯ್ಯನೆ ಮುಂದಕ್ಕೆ ಓಡಿಸಿದರು.

ಈ ದೃಶ್ಯವನ್ನು ಕಂಡ ನಮ್ಮ ಮಲ್ಲಣ್ಣನ ಮಾನವೀಯತೆ ಜಾಗೃತಗೊಳ್ಳುತ್ತದೆ. ಜಾಹಿರಾತು ಸ್ಮೃತಿ ಪಟಲದ ಮೇಲೆ ಮೂಡಿ
ಮರೆಯಾಗುತ್ತದೆ. ಬಾಟಲಿ ಎತ್ತಿಕೊಂಡು ಕಾರಿನ ಹಿಂದೆ ಓಡುವ ಮನಸ್ಸು ಮಾಡುತ್ತಾನೆ. ಆದರೆ ಆ ಬಾಟಲಿಯೇ ಬಿದ್ದ ಸ್ಥಳದಲ್ಲಿ
ಇರಲಿಲ್ಲ! ಎಲ್ಲಾ ವಾಹನಗಳ ಚಕ್ರದಡಿ ಸಿಕ್ಕಿ ರಸ್ತೆಯ ಯಾವ ಮೂಲೆ ಸೇರಿತ್ತೋ ಬಲ್ಲವರಾರು?

ಆ ಬಾಟಲಿ ಇಲ್ಲದಿದ್ದರೇನಂತೆ? ಖಾಲಿ ಬಾಟಲಿಗಳಿಗೆ ಬರವೇ......! ರಸ್ತೆಬದಿಯಲ್ಲಿ ಬಿದ್ದಿದ್ದ ಹಳೆ ಬಾಟಲಿಯನ್ನೇ ಎತ್ತಿಕೊಂಡು
ಹೊರಟ ಮಲ್ಲಣ್ಣ.

ಬೈಕ್ ವೇಗವಾಗಿ ಓಡಿಸುತ್ತಾ ಕಾರನ್ನು ಹಿಂಬಾಲಿಸಿದ. ಹೊಂಡ ಗುಂಡಿ ಮೆಟ್ಟಿಲುಗಳ ಮೇಲೆ ಬೈಕ್ ಓಡಿಸುವ ಸಾಹಸ ಮಾತ್ರ 
ಮಾಡಲಿಲ್ಲ!
ಅಂತೂ ಕೊನೆಗೆ ಆ ಕಾರನ್ನು ಹಿಡಿದೇ ಬಿಟ್ಟ. ನಿಂತ ಕಾರಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾರಿನ ಗಾಜು ತಟ್ಟಿದ ಥೇಟ್ ಜಾಹಿರಾತಿನ 
ಶೈಲಿಯಲ್ಲಿ! ಕಿಟಕಿ ಗಾಜು ಕೆಳಗಿಳಿಯುತ್ತಿದ್ದಂತೆ ಬಾಟಲಿಯನ್ನು ಕಾರೊಳಗೆ ಎಸೆದು ಟಾಟಾ ಮಾಡಿ  ಬೈಕ್ ಮುಂದಕ್ಕೆ ಓಡಿಸಿದ 
ಮಲ್ಲಣ್ಣ!

ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಪಜೀತಿ ಶುರು ಆಗಿದ್ದೇ ಆಗ!

ಕಾರಿನೊಳಗೆ ಇದ್ದ ಹುಡುಗರ ಪಿತ್ತ ನೆತ್ತಿಗೇರಿತು. ಜೊತೆಗೇ ಬೀರಿನ ಕುಮ್ಮಕ್ಕು ಇತ್ತೆನ್ನಿ! ಮಲ್ಲಣ್ಣನ ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿದ
ಹುಡುಗರು ಕಾರಿನಿಂದ ಕೆಳಗಿಳಿದರು. ಬಲವಾದ ಹಸ್ತವೊಂದು ಮುಖಕ್ಕೆ ಅಪ್ಪಳಿಸಿದ್ದಷ್ಟೇ ಗೊತ್ತು. ಮುಂದೇ ಮಲ್ಲಣ್ಣ ಆಸ್ಪತ್ರೆಯ
ಹಾಸಿಗೆಯಲ್ಲೇ ಕಣ್ ತೆರೆದಿದ್ದು! ಆಸ್ಪತ್ರೆಯಿಂದ ಮೂರು ದಿನದ ನಂತರ ಮನೆಗೆ ಬಂದ ಮಲ್ಲಣ್ಣ ಮತ್ತೆ ಆ ಜಾಹಿರಾತನ್ನು ನೋಡಲೇ ಇಲ್ಲ! 

ಒಂದು ವಿಷಯ ಅವನಿಗೆ ಅರ್ಥವಾಗದೆ ಉಳಿದಿತ್ತು. ಅದೇನೆಂದರೆ ಜಾಹಿರಾತಿನಲ್ಲಿ ಈ ಭಾಗವನ್ನು ಯಾಕೆ ತೋರಿಸಲಿಲ್ಲ?
ನಿಮಗೇನಾದರೂ ಕಾರಣ ಗೊತ್ತಿದ್ದರೆ ಪಾಪ ನಮ್ಮ ಮಲ್ಲಣ್ಣನಿಗೆ ಸ್ವಲ್ಪ ತಿಳಿಸ್ತೀರಾ? ಬಾರೀ ತಲೆ ಕೆಡಿಸಿಕೊಂಡು ಯೋಚಿಸ್ತಿದ್ದಾನೆ!

Sunday, June 6, 2010

ಪರಿಣಾಮ.........?





 ನನ್ನೆದೆಯ ಮೇಲೆ 
ಒರಗಿದ್ದ ನನ್ನಾಕೆ
ಮುಂಗುರುಳ ತೀಡಿ 
ಸಿಹಿಮುತ್ತನಿತ್ತಳು...........!

ಪರಿಣಾಮ...........?
 ಅತಿ ಮಧುರ 
ಸುಖದಲ್ಲಿ
ಮೈಮರೆತಿದ್ದಾಗ
ತಣ್ಣೀರ ತಂದು 
ತಲೆಮೇಲೆ ಸುರಿದಿದ್ದಳು........!

ಸುಂದರ ಸವಿಗನಸು
ಕಂಡು ಕಣ್ ಬಿಟ್ಟರಲ್ಲಿ
ಕೆಂಗಣ್ಣ ಮೀನಾಕ್ಷಿಯ
 ದುರುಗುಟ್ಟುತ್ತಿದ್ದಳು..........!
 ಖಾಲಿ ಬಿಂದಿಗೆ 
ಹಿಡಿದ ನನ್ನಾಕೆ
ಕನಸಿಗೂ ವಾಸ್ತವಕೂ
ಹೋಲಿಕೆಯೇ ಇಲ್ಲದಂತೆ...........!