Tuesday, February 15, 2011

ವರ್ಷವೊಂದು ಉರುಳಿತು


ವರ್ಷವೊಂದು ಉರುಳಿತು 
ಬ್ಲಾಗೆಂಬ ಸ್ವರ್ಗದಲಿ
ಸಮಯವ ಅರಿಯದೆ ಹೋದೆ
ನಿಮ್ಮ ಪ್ರೀತಿಯ ಮಡಿಲಲಿ.......... 

ಗೆಳೆಯರೆ, 

ನನ್ನ ಬ್ಲಾಗಿಗೆ ಒಂದು ವರ್ಷ ಆಯ್ತು!
ಹೌದು, ಆಶ್ಚರ್ಯವೇ ಸರಿ............
ಕೆಲಸದ ಒತ್ತಡದಲ್ಲಿ ಬ್ಲಾಗಿನ ಹುಟ್ಟಿದ ದಿನ ಗೊತ್ತೇ ಆಗಲಿಲ್ಲ!
ಬ್ಲಾಗೆಂದರೆ ಏನೆಂದು ಅರಿಯದ ನಾನು ಇಂದು ನಿಮ್ಮೊಂದಿಗಿದ್ದೇನೆ ಎಂದರೆ ಆಶ್ಚರ್ಯವಾಗದೆ ಇನ್ನೇನು ಹೇಳಿ. ಕನ್ನಡದ ಕಂಪಿಗಾಗಿ ಹಪಹಪಿಸುತ್ತಿದ್ದ ನನಗೆ ಬ್ಲಾಗೆಂಬ ಮಾಮರದ ಪರಿಚಯ ಮಾಡಿಕೊಟ್ಟ ವಿಜೇತ ನಾಯಕ್ ಗೆ ನಾನು ಚಿರಋಣಿ. ಕನ್ನಡ ಪುಸ್ತಕಗಳೂ ಸಿಗದ ಈ ದೆಹಲಿಯಲ್ಲಿ ಕನ್ನಡ ಓದಲು ಅನುವು ಮಾಡಿಕೊಟ್ಟಿದ್ದು ಬ್ಲಾಗ್ ಎಂಬ ಸ್ವರ್ಗಲೋಕ. ಮೊಟ್ಟಮೊದಲಾಗಿ ಓದಿದ್ದು ಪ್ರಕಾಶಣ್ಣನ "ಇಟ್ಟಿಗೆ ಸಿಮೆಂಟು..........ಸೆಂಟಿಮೆಂಟು" ಬ್ಲಾಗು. ಆ ಇಟ್ಟಿಗೆ ಸಿಮೆಂಟು  ನನ್ನ ಮತ್ತು ನಿಮ್ಮೆಲ್ಲರ ನಡುವೆ ಭದ್ರ ಬುನಾದಿ ಹಾಕಿ ಈ ಸೆಂಟಿಮೆಂಟು ಬೆಸೆಯಲು ಕಾರಣ ಎಂದರೆ ಅತಿಶಯೋಕ್ತಿಯೇನಲ್ಲ! ನಿಮ್ಮಂತಹ ಗೆಳೆಯರ ಬಳಗವನ್ನು ದೊರಕಿಸಿಕೊಟ್ಟ ಈ ಬ್ಲಾಗ್ ಲೋಕಕ್ಕೆ ನನ್ನ ವಂದನೆಗಳು.
ನನ್ನ ಮನಸ್ಸಿಗೆ ತೋಚಿದ್ದನ್ನು ಗೀಚಿ ನಿಮ್ಮ ಮುಂದಿಟ್ಟರೂ ನೀವೆಲ್ಲರೂ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ತಿದ್ದಿ ತೀಡಿ ಪ್ರೀತಿಯಿಂದ ಗುದ್ದಿ ಬುದ್ಧಿ ಹೇಳಿ ಈ ಹಂತಕ್ಕೆ ತಂದು ನಿಲ್ಲಿಸಿದ್ದೀರಾ. ಯಾರೆಂದು ಅರಿಯದ ಯಾವುದೇ ಸಂಬಧವೂ ಇಲ್ಲದ ನನ್ನನ್ನು ಪ್ರೀತಿಯಿಂದ ಮಮತೆಯಿಂದ ಸ್ನೇಹದಿಂದ ನಿಮ್ಮೊಳಗೊಬ್ಬನನ್ನಾಗಿ ಮಾಡಿಕೊಂಡಿದ್ದೀರಾ. ನನ್ನ ಕಾಟವನ್ನು ಸಹಿಸಿಕೊಂಡಿದ್ದೀರಾ. ನಿಮ್ಮೆಲ್ಲರ ಈ ಪ್ರೀತಿ, ಆದರ, ಸ್ನೇಹ, ವಿಶ್ವಾಸ ಸದಾ ಹೀಗೇ ಇರಲಿ........
ಆಗಾಗ ಬಂದು ಕಷ್ಟ ಕೊಡುವ ನನ್ನನ್ನು ಸಹಿಸಿಕೊಳ್ಳಿ!
ನಾನು ಈ ಬ್ಲಾಗಿಗಾಗಿ ಮೊಟ್ಟಮೊದಲು ಬರೆದ ಕತೆಯನ್ನು ಮತ್ತೆ ಹಾಕಿದ್ದೇನೆ. ಓದಿ................




          "ಅಮ್ಮ, ಅಳಬೇಡಮ್ಮಾ"

ಆಹಾಹಾ! ತುಂಭಾ ಚಳಿ! ದೆಹಲಿಯ ಚಳಿಗಾಲ ಅಂದ್ರೆ ದೇಹ ಮರಗಟ್ಟಿ ಹೋಗುತ್ತದೆ. ಹೀಗೆ ಯೋಚಿಸುತ್ತಾ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯತ್ತ ತೆರಳಿದೆ. ನನ್ನನ್ನು ನೋಡಿದ ಅಂಗಡಿಯಾತ ಬಿಸಿಬಿಸಿ ಟೀ, ಒಂದು ಸಿಗರೇಟನ್ನು ತೆಗೆದು ಕೊಟ್ಟ.ದಿನಾ ಬೆಳಿಗ್ಗೆ ಆಫೀಸ್ಸಿಗೆ ಹೋಗುವಾಗ ದಾರಿಯಲ್ಲಿ ಸಿಗುವ ಈ ಅಂಗಡಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಸಿಗರೇಟು, ಟೀ ಕುಡಿದು ಹೋಗುತ್ತೇನೆ. ಹೊಟ್ಟೆಯೊಳಗೆ ಬಿಸಿ ಸೇರಿದಂತೆ ಒಂದು ರೀತಿಯ ಉಲ್ಲಾಸ!

ಟೀ ಕುಡಿಯುತ್ತಾ ರಸ್ತೆಯ ಆ ಬದಿ ನೋಡುತ್ತಿದ್ದೇನೆ, ಅರೆ! ಅದೇನದು? ಮತ್ತದೇ ದೃಶ್ಯ! ದಿನಂಪ್ರತಿ ನಡೆಯುವಂತೆ ಇಂದು ಕೂಡ ನಡೆಯುತ್ತಿದೆ. ಒಬ್ಬ ಗಂಡಸು, ಬಟ್ಟೆಯಲ್ಲಾ ಕೊಳಕಾಗಿದೆ. ಸ್ನಾನ ಮಾಡದೇ ಅದೆಷ್ಟು ದಿನಗಳಾಗಿವೆಯೋ? ಆತ ಒಂದು ಮಧ್ಯ ವಯಸ್ಕ ಹೆಗಸಿಗೆ ಹೊಡೆಯುತ್ತಿದ್ದಾನೆ. ಬಹುಶಃ ಆಕೆ ಆತನ ಹೆಂಡತಿ ಇರಬೇಕು. ಪಶುವಿಗೆ ಹೊಡೆದಂತೆ ಬಡಿಯುತ್ತಿದ್ದಾನೆ. ಪಾಪ! ಚಿಕ್ಕ ಮಗುವೊಂದು ಆ ದೃಶ್ಯವನ್ನು ನೋಡಲಾರದೆ ಜೋರಾಗಿ ಅಳುತ್ತಿದೆ.ಆಗ ಸ್ವಲ್ಪ ದೊಡ್ಡದಾದ ಹುಡುಗನೊಬ್ಬ ಆ ಮಗುವನ್ನು ಎತ್ತಿಕೊಂಡು ಸಂತಯ್ಸತೊಡಗಿದ. ಆ ಮಗುವಿನ ಅಣ್ಣನಿರಬೇಕು, ಆತನಿಗೆ 9-10 ವರ್ಷವಿರಬಹುದು.

"ಅಪ್ಪ ಬಿಡಪ್ಪ, ಅಮ್ಮನಿಗೆ ಹೊಡೆಯಬೇಡ, ಸಂಜೆ ದುಡ್ಡು ತಂದು ಕೊಡುತ್ತೇನೆ." ಎಂದು ಹೇಳಿ ಅವನಪ್ಪನನ್ನು ಎಳೆದಾಡತೊಡಗಿದ.

ಆತ ಆ ಹುಡುಗನನ್ನು ಕೆಂಗಣ್ಣಿನಿಂದ ದುರುಗುಟ್ಟಿ ನೋಡುತ್ತಾ, ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ. "ಇನ್ನೊಂದು ಘಂಟೆಯಲ್ಲಿ ದುಡ್ಡು ತಂದು ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲ, ಕೊಂದೇ ಹಾಕುತ್ತೇನೆ" ಎಂದು ಜೋರಾಗಿ ಕೂಗುತ್ತಾ ಎತ್ತಲೋ ಹೊರಟು ಹೋದ.

ಆ ಹೆಂಗಸು ತನ್ನಿಬ್ಬರು ಮಕ್ಕಳನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾಳೆ. ಯಾರು ಆಕೆಯನ್ನು ಸಮದಾನಗೊಳಿಸುವವರು? ಎಲ್ಲರಿಗೂ ಅದೊಂದು ಮನರಂಜನೆ ಮಾತ್ರ. ಆಕೆಯ ಬದುಕಿನ ಹೋರಾಟ ಯಾರಿಗೂ ಅರ್ಥವಾಗುವುದಿಲ್ಲ. ನಮಗೇಕೆ ಇಲ್ಲದ ಉಸಾಬರಿ. ಇದು ಈ ಬಿಕ್ಷುಕರ ದಿನನಿತ್ಯದ ಗೋಳು ಎಂಬ ತಾತ್ಸಾರ ಭಾವ ಎಲ್ಲರಲ್ಲೂ ತುಂಬಿದೆ.

ಸಾದಾರಣವಾಗಿ ದೆಹಲಿಯಂತ ನಗರಗಳಲ್ಲಿ ಈ ದೃಶ್ಯ ಸಾಮಾನ್ಯ. ಇವರು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕರು. ಇವರಿಗೆ ವಾಸಕ್ಕೆ ಮನೆಯಿಲ್ಲ. ಹಾಕಲು ಬಟ್ಟೆಬರಿಗಲಿಲ್ಲ, ವಿಧ್ಯೆ-ಬುದ್ಧಿಗಳನ್ನಂತೂ ಕೇಳುವುದೇ ಬೇಡ. ಭಿಕ್ಷೆ ಬೇಡಿ ಬಂದ ಹಣವೆಲ್ಲ ಗಂಡಸರ ಕುಡಿತದಂತ ಚಟಗಳಿಗೆ ಸರಿಯಾಗುತ್ತದೆ. ಯಾರಾದರೂ ಏನಾದರೂ ತಿನ್ನಲು ಕೊಟ್ಟರೆ ಇವರ ಹೊಟ್ಟೆ ತುಂಬುತ್ತದೆ. ಇಲ್ಲದಿದ್ದರೆ ಇಲ್ಲ!

ಕುಡಿದು ಬಂದ ಗಂಡಸರು ಹೆಂಡತಿ-ಮಕ್ಕಳಿಗೆ ಹೊಡೆಯುವ ದೃಶ್ಯ ಇಲ್ಲಿ ಸಾಮಾನ್ಯ. ಯಾಕೋ ಇಂದು ನನ್ನ ಕಣ್ಣ ಮುಂದೆ ಆ ಭಿಕ್ಷುಕಿ ಬಿಕ್ಕಳಿಸುತ್ತಿರುವ ದೃಶ್ಯವೇ ಕಾಣಿಸುತ್ತಿತ್ತು. ಮನಸ್ಸೇಕೋ ಕಸಿವಿಸಿಗೊಂಡಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮುಗಿಸಿ ಮನೆಯತ್ತ ಹೊರಟೆ.

ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ಜಾಗದಲ್ಲಿ ಜನರ ಗುಂಪು ಸೇರಿದೆ. ಬೈಕ್ ನಿಲ್ಲಿಸಿ ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಿ ಅಲ್ಲಿನ ದೃಶ್ಯವನ್ನು ನೋಡಿ ಮೂಕವಿಸ್ಮಿತನಾದೆ!

ಆ ಹೆಂಗಸು ಇಬ್ಬರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕುತ್ತಿದ್ದಾಳೆ. ಹುಡುಗನ ಮೈ ರಕ್ತಸಿಕ್ತವಾಗಿದೆ. ಸ್ವಲ್ಪ ದೂರದಲ್ಲಿ ರಕ್ತದಿಂದ ತೋಯ್ದು ಹೋದ ದೇಹವೊಂದು ಬಿದ್ದಿದೆ. ಅದು ಆ ಕುಡುಕ ಬಿಕ್ಷುಕನದ್ದೆ ಎಂದು ತಿಳಿಯಲು ತಡವಾಗಲಿಲ್ಲ. ಆ ಜಾಗದಲ್ಲಿ ನಿಲ್ಲಲಾರದೆ ಗೂಡಂಗಡಿಗೆ ಹೋಗಿ ಸಿಗರೇಟ್ ಹತ್ತಿಸಿಕೊಂಡು ಅಂಗಡಿಯಾತನತ್ತ ಪ್ರಶ್ನಾರ್ತಕವಾಗಿ ನೋಡಿದೆ. ಅಂಗಡಿಯಾತ ಹೇಳಿದ ಕತೆಯನ್ನು ಕೇಳಿ ನನ್ನಿಂದ ಮಾತುಗಳೇ ಹೊರಡಲಿಲ್ಲ!

ಸ್ವಲ್ಪ ಸಮಯದ ಮೊದಲು ಆತ ಮತ್ತೆ ಅಲ್ಲಿಗೆ ಬಂದಿದ್ದ. ಬಂದವನೇ ಜೋರಾಗಿ ಕೂಗತೊಡಗಿದ. ಎಲ್ಲಿ ದುಡ್ಡು ಕೊಡು ಎಂದು ಹೆಂಡತಿಗೆ ಹೊಡೆಯುತಿದ್ದ.ಅಲ್ಲೇ ಇದ್ದ ಆ ಹುಡುಗ ಇದನ್ನು ನೋಡಿ ಸಹಿಸಿಕೊಳ್ಳಲು ಆಗದೆ ರೋಷದಿಂದ ತಂದೆಯತ್ತ ನುಗ್ಗಿದ. ಪಕ್ಕದಲ್ಲೇ ಇದ್ದ ಚಾಕುವಿನಿಂದ ತನ್ನ ತಂದೆಗೆ ಇರಿದೇ ಬಿಟ್ಟ!
ಆವೇಶಗೊಂಡವನಂತೆ ಎಲ್ಲೆಂದರಲ್ಲಿ ಇರಿಯತೊಡಗಿದ.ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಷ್ಟೆಲ್ಲಾ ನಡೆದು ಹೋಗಿತ್ತು! ತನ್ನ ತಾಯಿಗೆ ಆಗುತ್ತಿರುವ ಹಿಂಸೆಯನ್ನು ನೋಡಲಾರದೆ, ತಾಯಿಯ ಮೇಲಿನ ಪ್ರೀತಿಯಿಂದ ತಂದೆಯನ್ನೇ ಕೊಂದು ಮುಗಿಸಿದ್ದ ಆ ಮಗ!

ಆ ಕ್ಷಣದಲ್ಲಿ ಹುಡುಗನ ಮನಸ್ಸು ಏನು ಯೋಚಿಸಿತ್ತು? ಈಗಲೂ ಆತನ ಮುಖದಲ್ಲಿ ಯಾವುದೇ ಚಿಂತೆ ಕಾಣಿಸುತ್ತಿಲ್ಲ. ಭಾರವಾದ ನಿಟ್ಟುಸಿರು ಚೆಲ್ಲುತ್ತಾ ಮನೆಯ ದಾರಿ ಹಿಡಿದೆ. ನನ್ನ ಕಿವಿಯಲ್ಲಿ ಆ ಹುಡುಗನ ಧ್ವನಿ ಪದೇ ಪದೇ ಕೇಳಿಸುತಿತ್ತು.
"ಅಮ್ಮಾ, ಅಳಬೇಡಮ್ಮಾ!"

33 comments:

  1. ಅಬ್ಬಾ.. ಭಯಾನಕವಾಗಿದೆ ಘಟನೆ.. ವ್ಯಸನಗಳಿಗೆ, ಕೋಪ-ಆವೇಶಕ್ಕೆ ಭಲಿಯಾದ್ರೆ ಏನೆಲ್ಲಾ ಅನಾಹುತಗಳು ಘಟಿಸಬಹುದು ಅನ್ನೋದಕ್ಕೆ ನಿದರ್ಶನ..
    ಮತ್ತೆ ಬ್ಲಾಗ್ ದುನಿಯಾದಲ್ಲಿ ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು..

    ReplyDelete
  2. ಪ್ರೀತಿಯ ಪ್ರವೀಣ

    ವರಷ ತುಂಬಿದ ಹರುಷದ ಸಂಭ್ರಮಕ್ಕೆ ಅಭಿನಂದನೆಗಳು..

    ನಮ್ಮನ್ನೆಲ್ಲ ಸ್ನೇಹದಿಂದ ಬೆಸೆದ ಈ ಬ್ಲಾಗ್ ಲೋಕಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು..

    ಮೊದಲ ಕಥೆಯ ಪ್ರಯತ್ನ ಚೆನ್ನಾಗಿದೆ..
    ಇನ್ನಷ್ಟು ಕಥೆಗಳು ಬರಲಿ..

    ಜೈ ಹೋ...

    ReplyDelete
  3. ಬ್ಲಾಗಿನ ಮೊದಲಿನ ಹುಟ್ಟುಹಬ್ಬದ ಶುಭಾಶಯಗಳು.ನಿಮ್ಮಿಂದ ಇನ್ನಷ್ಟು ಸುಂದರ ಬರಹಗಳು ಬರಲಿ ಎನ್ನುವ ಹಾರೈಕೆ.

    ReplyDelete
  4. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
    ಕಥೆ ನಿರೂಪಣೆ ಕೂಡಾ ಇಷ್ಟವಾಯ್ತು.

    ReplyDelete
  5. ಶುಭಾಶಯಗಳು ಪ್ರವೀಣ್ .

    ReplyDelete
  6. ಪ್ರವೀಣ್ ಸರ್,
    ನಮಗೂ ಸಹ ಈ ಬ್ಲಾಗ್ ತುಂಬಾ ಖುಷಿ ಕೊಟ್ಟಿದೆ.
    ನಿಮ್ಮಂತಹ ಗೌಡ್ರು ಸಿಕ್ಕಿದ್ದಾರೆ :)
    ಪ್ರೀತಿ ಬೆಳೆಯಲಿ..
    ಅಭಿನಂದನೆಗಳು.

    ReplyDelete
  7. ಅಮ್ಮನ ನೋವು ಕಂಡ ಮಕ್ಕಳು ಹೀಗೆ ಆ ಸಮಯ ಅವರ ಪರಿಸ್ಥಿತಿ ಹೇಗಿರುತ್ತೋ ಗೊತ್ತಿರೋಲ್ಲ........ ಚೆನ್ನಾಗಿದೆ ಲೇಖನ... ಶುಭಾಶಯಗಳು ಪ್ರವೀಣ್ ಒಂದು ವರ್ಷ ಹಲವಾರು ವರ್ಷವಾಗಿ ಮುಂದುವರಿಯಲಿ ನಿನ್ನ ಬರವಣಿಗೆಯ ಪಯಣ.

    ReplyDelete
  8. ಪ್ರವೀಣ್ ಸರ್ ನಿಮ್ಮ "ಮನದಾಳದಿಂದ" ಬ್ಲಾಗ್ ಗೆ ಒಂದು ವರ್ಷ ತುಂಬಿದ್ದು ಖುಷಿಯಾಗಿದೆ. ನಿಮಗೆ ಶುಭಾಶಯಗಳು .ನಿಮ್ಮ ಮೊದಲ ಕಥೆ ಮನ ಹಿಂಡುವ ಘಟನೆಯನ್ನು ಬಣ್ಣಿಸಿದೆ.ನಿಮಗೆ ಜೈ ಹೋ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  9. Nimma blog na huttu habbada shubhashayagalu.. kathe.gatane bhayanakavagide.. tayi melina preeti .. dina noduva krourya.. inta huchcu aveshavannu huttu hakutte.. avanu madiddu tappa? uttaravilla.. badukidavaradaroo nemmadiyinda (?) irabahudu...

    Pravi

    ReplyDelete
  10. ಪ್ರವೀಣ,
    ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಬ್ಲಾಗಿಗೆ ಉತ್ತರೋತ್ತರ ಅಭಿವೃದ್ಧಿಯಾಗಲಿ.
    ಈ ಕತೆಯನ್ನು ಮೊದಲ ಸಲ ಓದಿದಾಗ ಅನುಭವಿಸಿದ ವಿಷಾದ ಭಾವನೆಯನ್ನು ಮತ್ತೊಮ್ಮೆ ಅನುಭವಿಸಿದೆ. ನೇರ ನಿರೂಪಣೆಯ ಉತ್ತಮ ರಚನೆ.

    ReplyDelete
  11. praveen,

    nimma blag eradane varshakke kaalitta sambramakke abhinandanegaLu.nimminda innu hechchu hechch barahagaLu baruttirali.

    ReplyDelete
  12. ಮನದಾಳದಿಂದ ಬ್ಲಾಗ್ ಗೆ ವರ್ಷ ತುಂಬಿದ ಶುಭಾಶಯಗಳು :-)


    ~$ಮರೀಚಿಕೆ$~
    ~$ಮಂಜು$~

    ReplyDelete
  13. ವರ್ಷ ತುಂಬಿದ ಶುಭಾಶಯಗಳು.

    ReplyDelete
  14. ಪ್ರವೀಣಾ...ತುಂಬಾ ಖುಶಿ ಆಗುತ್ತೆ ಕಣೋ...ನಿನಗೆ ನಿನ್ನ ಮನದಾಳಕ್ಕೆ ನಮ್ಮೆಲ್ಲರ ಮನದಾಳದ ಶುಭಕಾಮನೆಗಳು....ಆದ್ರೆ ನಿನ್ನ ಬ್ಲಾಗ್ ಗೆ ಬರೋಕೆ ಭಯ ಆಗುತ್ತಪ್ಪಾ...ಕಾಡಲ್ಲಿ ಕಳೆದುಹೋಗ್ತೀನಾ ಅನ್ಸುತ್ತೆ....ಹಹಹಹ

    ReplyDelete
  15. ಸೊಗಸಾಗಿ ಹೇಳಿದ್ದೀರಿ, ವರ್ಷ ಪೂರೈಸಿದ ನಿಮ್ಮ ಬ್ಲಾಗಿಗೆ ಬರಹಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

    ReplyDelete
  16. ಅಭಿನಂದನೆ ಪ್ರವೀಣ್, ನಿಮ್ಮ ಬ್ಲಾಗ್ ಗೆ ವರ್ಷ ತು೦ಬಿದ್ದು ಖುಷಿ ಆಯ್ತು, ನಿಮ್ಮ ಮದುವೆ ಸುದ್ದಿ ಕೇಳಿದ್ರೆ ಇನ್ನಷ್ಟು ಖುಷಿ ಆಗುತ್ತೆ.

    ReplyDelete
  17. Happy birthday to your blog...

    http://chithrapata.blogspot.com/

    ReplyDelete
  18. praviN sir,
    huTTuhabbada subhaashaya....

    namma bhandha hIge irali...

    ReplyDelete
  19. ವರ್ಷ ತುಂಬಿದ ಶುಭಾಶಯಗಳು

    ReplyDelete
  20. ಪ್ರವೀಣ್ ವರುಷ ತುಂಭಿದ ಮನದಾಳಕ್ಕೆ ಶುಭಾಶಯಗಳು ... ಹೀಗೆ ಸಾಗಲಿ ..
    ಚೆನ್ನಾಗಿ ಬರ್ದಿದಿರ ಪ್ರವೀಣ್ ಮನಸು ಕಲಕಿ ಹೋಯ್ತು

    ReplyDelete
  21. ಪ್ರವೀಣ್,
    ಬ್ಲಾಗಿನ ಮೊದಲ ವಾರ್ಷಿಕೋತ್ಸವದ ಶುಭಾಶಯಗಳು !
    ಇನ್ನೂ ಹೆಚ್ಚು ಲೇಖನಗಳು ನಿಮ್ಮಿಂದ ಬರಲಿ..

    ReplyDelete
  22. ಹಾಯ್ ಪ್ರವೀಣ್,

    ಕಾರಣಾಂತರಗಳಿಂದ ಕೆಲವು ಸಮಯದಿಂದ ಬ್ಲಾಗ್ ಕಡೆ ಬರಲಾಗಲಿಲ್ಲ...ನಿಮ್ಮ ಬ್ಲಾಗ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು....ನಿಮ್ಮ ಬ್ಲಾಗ್ ನಲ್ಲಿ ಹೆಚ್ಚು ಹೆಚ್ಚು ಸುಂದರ ಬರಹಗಳು ಬರಲಿ....

    ReplyDelete
  23. Praveen,

    Happy Birthday To you blog...

    ===
    nimma first article odirlilla.. odi feel aytu sir.. ide tara irutta bikshukara jeevana ??

    ReplyDelete
  24. ಪ್ರವೀಣ್,
    ನಿಮ್ಮ ಬ್ಲಾಗಿಗೆ ಒಂದು ವರ್ರ್ಷವಾಗಿದೆ. ಅಭಿನಂದನೆಗಳು ಹೀಗೆ ಅದು ಮನದಾಳದ ನೂರಾಗಲಿ...ಮೊದಲ ಕತೆ ತುಂಬಾ ಚೆನ್ನಾಗಿದೆ..ಮನತಟ್ಟುತ್ತದೆ..

    ReplyDelete
  25. thhayiya novannu sahisalaarade aa hudugana manasthithi hege agittu emba chitrana chennagi mudi bandide gowdre....kathe chennagide..

    ReplyDelete
  26. manadaalada varusha tumbida harushada kuusige haardhika shubhaashayagalu.manamidiyuva lekhana.

    ReplyDelete
  27. ಗೆಳೆಯರೆ,
    ಧನ್ಯವಾದಗಳು....
    ದಯವಿಟ್ಟು ಕ್ಷಮಿಸಿ,
    ನಿಮ್ಮೆಲ್ಲರ ಪ್ರೀತಿಪಾತ್ರ ಅಭಿನಂದನೆಗಳಿಗೆ ಪ್ರತಿಕ್ರಿಯಿಸುವ ಕನಿಷ್ಠ ಸಭ್ಯತೆಯನ್ನೂ ಕೂಡಾ ತೋರಿಸದ ಅನಾಗರೀಕ ನಾನು. ಕ್ಷಮಿಸಿ ಎಂದು ಕೇಳುವ ಯೋಗ್ಯತೆ ಕೂಡಾ ನನಗಿಲ್ಲ.........
    ಮುಂದೆಂದೂ ಹೀಗಾಗದು. ನಿಮ್ಮೆಲ್ಲರ ಬ್ಲಾಗಿಗೂ ನಿಯಮಿತ ಭೇಟಿ ಕೊಡುವ ಭರವಸೆಯನ್ನು ಪಕ್ಕಾ ರಜಕಾರಣಿಯಂತೆ ಕೊಡುತ್ತೆನೆ. (ಇದೆಷ್ಟನೆ ಭಾರಿಯೋ ಗೊತ್ತಿಲ್ಲ!)
    ನಿಮ್ಮೆಲ್ಲರ ಪ್ರೀತಿ ಸದಾ ಹೀಗೆ ಇರಲಿ.......
    ನಿಮ್ಮವ
    ಫ್ರವೀಣ್
    ಮನದಾಳದಿಂದ..........

    ReplyDelete
  28. ಹಾರ್ದಿಕ ಶುಭಾಶಯಗಳು, ಕಥೆ ಹಿಡಿಸಿತು

    ReplyDelete
  29. ವರುಷ ತುಂಬಿದ ಹರುಷದ ಸಂಭ್ರಮಕ್ಕೆ ಅಭಿನಂದನೆಗಳು..kathe tumbaa manasannu kenakitu

    ReplyDelete
  30. ಬ್ಲಾಗ್ ನ ಮೊದಲ ವರ್ಷವನ್ನು ಸಾರ್ಥಕವಾಗಿ ಪೂರೈಸಿದ ಶುಭಾಶಯಗಳು. ಕಥೆ ಮನಮಿಡಿಯುವ೦ತಿದೆ. ಅಭಿನ೦ದನೆಗಳು.

    ReplyDelete