Tuesday, February 15, 2011

ವರ್ಷವೊಂದು ಉರುಳಿತು


ವರ್ಷವೊಂದು ಉರುಳಿತು 
ಬ್ಲಾಗೆಂಬ ಸ್ವರ್ಗದಲಿ
ಸಮಯವ ಅರಿಯದೆ ಹೋದೆ
ನಿಮ್ಮ ಪ್ರೀತಿಯ ಮಡಿಲಲಿ.......... 

ಗೆಳೆಯರೆ, 

ನನ್ನ ಬ್ಲಾಗಿಗೆ ಒಂದು ವರ್ಷ ಆಯ್ತು!
ಹೌದು, ಆಶ್ಚರ್ಯವೇ ಸರಿ............
ಕೆಲಸದ ಒತ್ತಡದಲ್ಲಿ ಬ್ಲಾಗಿನ ಹುಟ್ಟಿದ ದಿನ ಗೊತ್ತೇ ಆಗಲಿಲ್ಲ!
ಬ್ಲಾಗೆಂದರೆ ಏನೆಂದು ಅರಿಯದ ನಾನು ಇಂದು ನಿಮ್ಮೊಂದಿಗಿದ್ದೇನೆ ಎಂದರೆ ಆಶ್ಚರ್ಯವಾಗದೆ ಇನ್ನೇನು ಹೇಳಿ. ಕನ್ನಡದ ಕಂಪಿಗಾಗಿ ಹಪಹಪಿಸುತ್ತಿದ್ದ ನನಗೆ ಬ್ಲಾಗೆಂಬ ಮಾಮರದ ಪರಿಚಯ ಮಾಡಿಕೊಟ್ಟ ವಿಜೇತ ನಾಯಕ್ ಗೆ ನಾನು ಚಿರಋಣಿ. ಕನ್ನಡ ಪುಸ್ತಕಗಳೂ ಸಿಗದ ಈ ದೆಹಲಿಯಲ್ಲಿ ಕನ್ನಡ ಓದಲು ಅನುವು ಮಾಡಿಕೊಟ್ಟಿದ್ದು ಬ್ಲಾಗ್ ಎಂಬ ಸ್ವರ್ಗಲೋಕ. ಮೊಟ್ಟಮೊದಲಾಗಿ ಓದಿದ್ದು ಪ್ರಕಾಶಣ್ಣನ "ಇಟ್ಟಿಗೆ ಸಿಮೆಂಟು..........ಸೆಂಟಿಮೆಂಟು" ಬ್ಲಾಗು. ಆ ಇಟ್ಟಿಗೆ ಸಿಮೆಂಟು  ನನ್ನ ಮತ್ತು ನಿಮ್ಮೆಲ್ಲರ ನಡುವೆ ಭದ್ರ ಬುನಾದಿ ಹಾಕಿ ಈ ಸೆಂಟಿಮೆಂಟು ಬೆಸೆಯಲು ಕಾರಣ ಎಂದರೆ ಅತಿಶಯೋಕ್ತಿಯೇನಲ್ಲ! ನಿಮ್ಮಂತಹ ಗೆಳೆಯರ ಬಳಗವನ್ನು ದೊರಕಿಸಿಕೊಟ್ಟ ಈ ಬ್ಲಾಗ್ ಲೋಕಕ್ಕೆ ನನ್ನ ವಂದನೆಗಳು.
ನನ್ನ ಮನಸ್ಸಿಗೆ ತೋಚಿದ್ದನ್ನು ಗೀಚಿ ನಿಮ್ಮ ಮುಂದಿಟ್ಟರೂ ನೀವೆಲ್ಲರೂ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ತಿದ್ದಿ ತೀಡಿ ಪ್ರೀತಿಯಿಂದ ಗುದ್ದಿ ಬುದ್ಧಿ ಹೇಳಿ ಈ ಹಂತಕ್ಕೆ ತಂದು ನಿಲ್ಲಿಸಿದ್ದೀರಾ. ಯಾರೆಂದು ಅರಿಯದ ಯಾವುದೇ ಸಂಬಧವೂ ಇಲ್ಲದ ನನ್ನನ್ನು ಪ್ರೀತಿಯಿಂದ ಮಮತೆಯಿಂದ ಸ್ನೇಹದಿಂದ ನಿಮ್ಮೊಳಗೊಬ್ಬನನ್ನಾಗಿ ಮಾಡಿಕೊಂಡಿದ್ದೀರಾ. ನನ್ನ ಕಾಟವನ್ನು ಸಹಿಸಿಕೊಂಡಿದ್ದೀರಾ. ನಿಮ್ಮೆಲ್ಲರ ಈ ಪ್ರೀತಿ, ಆದರ, ಸ್ನೇಹ, ವಿಶ್ವಾಸ ಸದಾ ಹೀಗೇ ಇರಲಿ........
ಆಗಾಗ ಬಂದು ಕಷ್ಟ ಕೊಡುವ ನನ್ನನ್ನು ಸಹಿಸಿಕೊಳ್ಳಿ!
ನಾನು ಈ ಬ್ಲಾಗಿಗಾಗಿ ಮೊಟ್ಟಮೊದಲು ಬರೆದ ಕತೆಯನ್ನು ಮತ್ತೆ ಹಾಕಿದ್ದೇನೆ. ಓದಿ................




          "ಅಮ್ಮ, ಅಳಬೇಡಮ್ಮಾ"

ಆಹಾಹಾ! ತುಂಭಾ ಚಳಿ! ದೆಹಲಿಯ ಚಳಿಗಾಲ ಅಂದ್ರೆ ದೇಹ ಮರಗಟ್ಟಿ ಹೋಗುತ್ತದೆ. ಹೀಗೆ ಯೋಚಿಸುತ್ತಾ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯತ್ತ ತೆರಳಿದೆ. ನನ್ನನ್ನು ನೋಡಿದ ಅಂಗಡಿಯಾತ ಬಿಸಿಬಿಸಿ ಟೀ, ಒಂದು ಸಿಗರೇಟನ್ನು ತೆಗೆದು ಕೊಟ್ಟ.ದಿನಾ ಬೆಳಿಗ್ಗೆ ಆಫೀಸ್ಸಿಗೆ ಹೋಗುವಾಗ ದಾರಿಯಲ್ಲಿ ಸಿಗುವ ಈ ಅಂಗಡಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಸಿಗರೇಟು, ಟೀ ಕುಡಿದು ಹೋಗುತ್ತೇನೆ. ಹೊಟ್ಟೆಯೊಳಗೆ ಬಿಸಿ ಸೇರಿದಂತೆ ಒಂದು ರೀತಿಯ ಉಲ್ಲಾಸ!

ಟೀ ಕುಡಿಯುತ್ತಾ ರಸ್ತೆಯ ಆ ಬದಿ ನೋಡುತ್ತಿದ್ದೇನೆ, ಅರೆ! ಅದೇನದು? ಮತ್ತದೇ ದೃಶ್ಯ! ದಿನಂಪ್ರತಿ ನಡೆಯುವಂತೆ ಇಂದು ಕೂಡ ನಡೆಯುತ್ತಿದೆ. ಒಬ್ಬ ಗಂಡಸು, ಬಟ್ಟೆಯಲ್ಲಾ ಕೊಳಕಾಗಿದೆ. ಸ್ನಾನ ಮಾಡದೇ ಅದೆಷ್ಟು ದಿನಗಳಾಗಿವೆಯೋ? ಆತ ಒಂದು ಮಧ್ಯ ವಯಸ್ಕ ಹೆಗಸಿಗೆ ಹೊಡೆಯುತ್ತಿದ್ದಾನೆ. ಬಹುಶಃ ಆಕೆ ಆತನ ಹೆಂಡತಿ ಇರಬೇಕು. ಪಶುವಿಗೆ ಹೊಡೆದಂತೆ ಬಡಿಯುತ್ತಿದ್ದಾನೆ. ಪಾಪ! ಚಿಕ್ಕ ಮಗುವೊಂದು ಆ ದೃಶ್ಯವನ್ನು ನೋಡಲಾರದೆ ಜೋರಾಗಿ ಅಳುತ್ತಿದೆ.ಆಗ ಸ್ವಲ್ಪ ದೊಡ್ಡದಾದ ಹುಡುಗನೊಬ್ಬ ಆ ಮಗುವನ್ನು ಎತ್ತಿಕೊಂಡು ಸಂತಯ್ಸತೊಡಗಿದ. ಆ ಮಗುವಿನ ಅಣ್ಣನಿರಬೇಕು, ಆತನಿಗೆ 9-10 ವರ್ಷವಿರಬಹುದು.

"ಅಪ್ಪ ಬಿಡಪ್ಪ, ಅಮ್ಮನಿಗೆ ಹೊಡೆಯಬೇಡ, ಸಂಜೆ ದುಡ್ಡು ತಂದು ಕೊಡುತ್ತೇನೆ." ಎಂದು ಹೇಳಿ ಅವನಪ್ಪನನ್ನು ಎಳೆದಾಡತೊಡಗಿದ.

ಆತ ಆ ಹುಡುಗನನ್ನು ಕೆಂಗಣ್ಣಿನಿಂದ ದುರುಗುಟ್ಟಿ ನೋಡುತ್ತಾ, ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ. "ಇನ್ನೊಂದು ಘಂಟೆಯಲ್ಲಿ ದುಡ್ಡು ತಂದು ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲ, ಕೊಂದೇ ಹಾಕುತ್ತೇನೆ" ಎಂದು ಜೋರಾಗಿ ಕೂಗುತ್ತಾ ಎತ್ತಲೋ ಹೊರಟು ಹೋದ.

ಆ ಹೆಂಗಸು ತನ್ನಿಬ್ಬರು ಮಕ್ಕಳನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾಳೆ. ಯಾರು ಆಕೆಯನ್ನು ಸಮದಾನಗೊಳಿಸುವವರು? ಎಲ್ಲರಿಗೂ ಅದೊಂದು ಮನರಂಜನೆ ಮಾತ್ರ. ಆಕೆಯ ಬದುಕಿನ ಹೋರಾಟ ಯಾರಿಗೂ ಅರ್ಥವಾಗುವುದಿಲ್ಲ. ನಮಗೇಕೆ ಇಲ್ಲದ ಉಸಾಬರಿ. ಇದು ಈ ಬಿಕ್ಷುಕರ ದಿನನಿತ್ಯದ ಗೋಳು ಎಂಬ ತಾತ್ಸಾರ ಭಾವ ಎಲ್ಲರಲ್ಲೂ ತುಂಬಿದೆ.

ಸಾದಾರಣವಾಗಿ ದೆಹಲಿಯಂತ ನಗರಗಳಲ್ಲಿ ಈ ದೃಶ್ಯ ಸಾಮಾನ್ಯ. ಇವರು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕರು. ಇವರಿಗೆ ವಾಸಕ್ಕೆ ಮನೆಯಿಲ್ಲ. ಹಾಕಲು ಬಟ್ಟೆಬರಿಗಲಿಲ್ಲ, ವಿಧ್ಯೆ-ಬುದ್ಧಿಗಳನ್ನಂತೂ ಕೇಳುವುದೇ ಬೇಡ. ಭಿಕ್ಷೆ ಬೇಡಿ ಬಂದ ಹಣವೆಲ್ಲ ಗಂಡಸರ ಕುಡಿತದಂತ ಚಟಗಳಿಗೆ ಸರಿಯಾಗುತ್ತದೆ. ಯಾರಾದರೂ ಏನಾದರೂ ತಿನ್ನಲು ಕೊಟ್ಟರೆ ಇವರ ಹೊಟ್ಟೆ ತುಂಬುತ್ತದೆ. ಇಲ್ಲದಿದ್ದರೆ ಇಲ್ಲ!

ಕುಡಿದು ಬಂದ ಗಂಡಸರು ಹೆಂಡತಿ-ಮಕ್ಕಳಿಗೆ ಹೊಡೆಯುವ ದೃಶ್ಯ ಇಲ್ಲಿ ಸಾಮಾನ್ಯ. ಯಾಕೋ ಇಂದು ನನ್ನ ಕಣ್ಣ ಮುಂದೆ ಆ ಭಿಕ್ಷುಕಿ ಬಿಕ್ಕಳಿಸುತ್ತಿರುವ ದೃಶ್ಯವೇ ಕಾಣಿಸುತ್ತಿತ್ತು. ಮನಸ್ಸೇಕೋ ಕಸಿವಿಸಿಗೊಂಡಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮುಗಿಸಿ ಮನೆಯತ್ತ ಹೊರಟೆ.

ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ಜಾಗದಲ್ಲಿ ಜನರ ಗುಂಪು ಸೇರಿದೆ. ಬೈಕ್ ನಿಲ್ಲಿಸಿ ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಿ ಅಲ್ಲಿನ ದೃಶ್ಯವನ್ನು ನೋಡಿ ಮೂಕವಿಸ್ಮಿತನಾದೆ!

ಆ ಹೆಂಗಸು ಇಬ್ಬರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕುತ್ತಿದ್ದಾಳೆ. ಹುಡುಗನ ಮೈ ರಕ್ತಸಿಕ್ತವಾಗಿದೆ. ಸ್ವಲ್ಪ ದೂರದಲ್ಲಿ ರಕ್ತದಿಂದ ತೋಯ್ದು ಹೋದ ದೇಹವೊಂದು ಬಿದ್ದಿದೆ. ಅದು ಆ ಕುಡುಕ ಬಿಕ್ಷುಕನದ್ದೆ ಎಂದು ತಿಳಿಯಲು ತಡವಾಗಲಿಲ್ಲ. ಆ ಜಾಗದಲ್ಲಿ ನಿಲ್ಲಲಾರದೆ ಗೂಡಂಗಡಿಗೆ ಹೋಗಿ ಸಿಗರೇಟ್ ಹತ್ತಿಸಿಕೊಂಡು ಅಂಗಡಿಯಾತನತ್ತ ಪ್ರಶ್ನಾರ್ತಕವಾಗಿ ನೋಡಿದೆ. ಅಂಗಡಿಯಾತ ಹೇಳಿದ ಕತೆಯನ್ನು ಕೇಳಿ ನನ್ನಿಂದ ಮಾತುಗಳೇ ಹೊರಡಲಿಲ್ಲ!

ಸ್ವಲ್ಪ ಸಮಯದ ಮೊದಲು ಆತ ಮತ್ತೆ ಅಲ್ಲಿಗೆ ಬಂದಿದ್ದ. ಬಂದವನೇ ಜೋರಾಗಿ ಕೂಗತೊಡಗಿದ. ಎಲ್ಲಿ ದುಡ್ಡು ಕೊಡು ಎಂದು ಹೆಂಡತಿಗೆ ಹೊಡೆಯುತಿದ್ದ.ಅಲ್ಲೇ ಇದ್ದ ಆ ಹುಡುಗ ಇದನ್ನು ನೋಡಿ ಸಹಿಸಿಕೊಳ್ಳಲು ಆಗದೆ ರೋಷದಿಂದ ತಂದೆಯತ್ತ ನುಗ್ಗಿದ. ಪಕ್ಕದಲ್ಲೇ ಇದ್ದ ಚಾಕುವಿನಿಂದ ತನ್ನ ತಂದೆಗೆ ಇರಿದೇ ಬಿಟ್ಟ!
ಆವೇಶಗೊಂಡವನಂತೆ ಎಲ್ಲೆಂದರಲ್ಲಿ ಇರಿಯತೊಡಗಿದ.ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಷ್ಟೆಲ್ಲಾ ನಡೆದು ಹೋಗಿತ್ತು! ತನ್ನ ತಾಯಿಗೆ ಆಗುತ್ತಿರುವ ಹಿಂಸೆಯನ್ನು ನೋಡಲಾರದೆ, ತಾಯಿಯ ಮೇಲಿನ ಪ್ರೀತಿಯಿಂದ ತಂದೆಯನ್ನೇ ಕೊಂದು ಮುಗಿಸಿದ್ದ ಆ ಮಗ!

ಆ ಕ್ಷಣದಲ್ಲಿ ಹುಡುಗನ ಮನಸ್ಸು ಏನು ಯೋಚಿಸಿತ್ತು? ಈಗಲೂ ಆತನ ಮುಖದಲ್ಲಿ ಯಾವುದೇ ಚಿಂತೆ ಕಾಣಿಸುತ್ತಿಲ್ಲ. ಭಾರವಾದ ನಿಟ್ಟುಸಿರು ಚೆಲ್ಲುತ್ತಾ ಮನೆಯ ದಾರಿ ಹಿಡಿದೆ. ನನ್ನ ಕಿವಿಯಲ್ಲಿ ಆ ಹುಡುಗನ ಧ್ವನಿ ಪದೇ ಪದೇ ಕೇಳಿಸುತಿತ್ತು.
"ಅಮ್ಮಾ, ಅಳಬೇಡಮ್ಮಾ!"

Monday, January 3, 2011

ಕವಿಶೈಲ

ಸೊಗಸಾದ ಕುಳಿರ್ಗಾಳಿ
ತರುಲತೆಗಳ ವಯ್ಯಾರ
ಝರಿ ತೊರೆಗಳ ಕಲರವ
ಹಕ್ಕಿ ಪಕ್ಕಿಗಳ ಪಕ್ಕವಾದ್ಯ
ಎಲ್ಲಾ ಒಂದೆಡೆ ಮೇಳೈಸೆ
ಇನ್ನಾವ ಸ್ವರ್ಗದ ಬಯಕೆ ಬಂದೀತು?

ಹೌದು ಗೆಳೆಯರೆ,
ನಾನು ಹೇಳಹೊರಟಿರುವುದು ಮಲೆನಾಡಿನ ಬಗ್ಗೆಯೇ!
ಊರಿನಿಂದ ಬಂದ ನಂತರ ನಿಮ್ಮೊಂದಿಗೆ ಹಂಚಿಕೊಳ್ಳಲು ಹಲವಾರು ವಿಷಯಗಳಿದ್ದವು. ಸಮಯದ ಅಭಾವವೋ ಅಥವಾ ನನ್ನ ಸೋಮಾರಿತನವೋ ಬ್ಲಾಗ್ ಕಡೆ ಬರುವುದು ಅಪರೂಪವಾಗಿತ್ತು. ನಿರಂತರ ಬ್ಲಾಗ್ ಬೇಟಿ ಕೇವಲ ಮನದಲ್ಲೇ ಉಳಿಯಿತೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ. ಆದರೂ ಪರವಾಗಿಲ್ಲ. ನಾನೂ ನಿಮ್ಮೊಳಗೊಬ್ಬನಲ್ಲವೆ, ಕ್ಷಮಿಸಿ ಪೋಷಿಸುತ್ತೀರಾ ಅನ್ನೊ ನಂಬಿಕೆಯಿಂದ ಮತ್ತೆ ನಿಮಗೆಲ್ಲಾ ಕಷ್ಟ ಕೊಡಲು ಬಂದಿದ್ದೇನೆ! ನೀವು ಸಹಿಸಿಕೊಳ್ಳಲೇಬೇಕು, ಇದು ಅನಿವಾರ್ಯ!

ಏನೇನೊ ಹೇಳುತ್ತ ಮುಖ್ಯ ವಿಷಯವನ್ನೇ ಮರೆತೆ. ನಾನು ಇಂದು ಹೇಳಹೊರಟಿದ್ದು ನನ್ನ ಕುಪ್ಪಳ್ಳಿ ಭೇಟಿಯ ಕುರಿತು. ಹೌದು, ಇತ್ತೀಚೆಗೆ ಕುಪ್ಪಳ್ಳಿಗೆ ಹೋಗಿದ್ದೆ. ಕವಿವರ್ಯರ ತಪೋವನ ಕವಿಶೈಲದಲ್ಲಿ ಕಳೆದ ಒಂದೊಂದು ಕ್ಷಣವೂ ಅವಿಸ್ಮರಣೀಯ! ಬಣ್ಣಿಸಲಾಗದ ಆ ಸುಖದ ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಹೊರಟಿದ್ದು ಇಬ್ಬರಾದರೂ ಕವಿಶೈಲವನ್ನು ಮುಟ್ಟುವಾಗ ನಾನೊಬ್ಬನೇ ಇದ್ದಿದ್ದು! ಹ್ನಾಂ! ಇರಿ, ಹೇಳಿ ಮುಗಿಸುವುದರೊಳಗೆ ಆಶ್ಚರ್ಯ ಪಡ್ತೀರಲ್ಲ? ನನ್ನ ಸ್ನೇಹಿತ ಮಹಾಶಯ ಮಧ್ಯದಲ್ಲೇ ಕೈ ಕೊಟ್ಟು ತನ್ನ ಮನದನ್ನೆಯನ್ನು ಭೇಟಿಯಾಗಲು ಹೊರಟು ಹೋದ! ಇನ್ನೇನು ಮಾಡಲಿ, ಒಬ್ಬನೆ ಆದರೆ ಏನಾಯ್ತು ಎಂದು ಹೊರಟೇ ಬಿಟ್ಟೆ. 

ಕವಿಶೈಲ ತಲುಪಿದಾಗಲೇ ಅರಿವಾಗಿದ್ದು, ನಾನೊಬ್ಬನೆ ಬಂದಿದ್ದು ಒಳ್ಳೆಯದೇ ಆಯಿತೆಂದು. 

ನೂರಾರು ಸತ್ಯಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡು ನಿಶ್ಚಿಂತವಾಗಿ ಹರಡಿದ್ದ ಸಹ್ಯಾದ್ರಿಯ ಗಿರಿಶೃಂಗ, ದೂರದಿಂದ ಕೇಳಿಬರುತ್ತಿರುವ ತುಂಗೆಯ ಬೋರ್ಗರೆತ, ಕುಹುಗುಡುವ ಕಾಜಾಣಗಳ ಹಿಂಡು, ಹಕ್ಕಿಯ ಹಾಡಿಗೆ ತಲೆದೂಗುವ ಬಿದಿರು, ಜಿಟಿಪಿಟಿ ಮಳೆಯ ಶೃಂಗಾರ ಕಾವ್ಯ..... ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆತು ಇಹಲೋಕದ ಜಂಜಡಗಳಿಲ್ಲದೇ ಚಿರನಿದ್ರೆಯಲ್ಲಿರುವ ರಾಷ್ಟ್ರಕವಿ ನಮ್ಮೆಲ್ಲರ ಮೆಚ್ಚಿನ ಕುವೆಂಪಜ್ಜ!!!!!

ಹೌದು, ಕವಿಶೈಲದ ಮಹಿಮೆಯೇ ಅಂತಹುದು, ಎಂಥಾ ಅರಸಿಕನಾದರೂ ಕಾವ್ಯದ ರುಚಿ ಸವಿಯಬಲ್ಲ! ಕವಿಯಾಗಬಲ್ಲ,  ರವಿಯನ್ನೇ ಶಾಂತವಾಗಿಸಿ ಚಂದ್ರನಂತೆ ತಣ್ಣಗಾಗಿಸಬಲ್ಲ. ಸಂಗೀತದ ಕಾರಂಜಿ ಹರಿಸಬಲ್ಲ, ತಕದಿಮಿ ಕುಣಿಯಬಲ್ಲ! ಯಾಕೆಂದರೆ ಅಲ್ಲಿ ಕುವೆಂಪಜ್ಜನ ತಪೋಬಲವಿದೆ, ಅವರ ಶಕ್ತಿಯಿದೆ, ಅಲ್ಲಿಯ ಪರಿಸರದಲ್ಲಿ ಪಸರಿಸಿರುವ ಅವರ ನೆನಪು ಈ ಶಕ್ತಿಯನೆಲ್ಲಾ ಕೊಡಬಲ್ಲದು!

ಬೆಳಿಗ್ಗೆಯಿಂದ ಸಂಜೆಯವರೆಗೂ ಒಬ್ಬನೇ ಕುಳಿತೇ ಇದ್ದೆ. ಏನೋ ರೋಮಾಂಚನ, ಮೈಯೆಲ್ಲಾ ಪುಳಕಗೊಂಡ ಅನುಭವ! ಆ ಕ್ಷಣದ ಸುಖ ಯಾವ ಸುಖಕ್ಕೂ ಸಮನಲ್ಲ. ಕೋಟ್ಯಂತರ ಖರ್ಚುಮಾಡಿ ಪಡೆಯುವ ಕೃತಕ ಸುಖಕ್ಕಿಂತ ಕವಿಶೈಲದಲ್ಲಿ ಸಿಗುವ ನೆಮ್ಮದಿ ಸಂತೋಷದ ಕ್ಷಣಗಳು ಎಷ್ಟೋ ಮೇಲು. ಅದಕ್ಕೆ ಸಾಟಿಯೆಂಬುದಿಲ್ಲ!

ಕುಳಿತೆ, ಕುಳಿತೆ ಕುಳಿತೇ ಇದ್ದೆ, ಕಾವಲುಗಾರ ಬಂದು ಎಚ್ಚರಿಸದಿದ್ದರೆ ಅಲ್ಲೇ ಇರುತಿದ್ದೆನೋ ಏನೋ! ನಂತರ ನಿದಾನಕ್ಕೆ ಎದ್ದು ಮಗದೊಮ್ಮೆ ಕವಿವರ್ಯರ ಸಮಾದಿಗೆ ವಂದಿಸಿ ಒಲ್ಲದ ಮನಸ್ಸಿನಿಂದ ಕೆಳಗಿಳಿದು ಬಂದೆ. ಕುವೆಂಪಜ್ಜ ವಾಸಿಸುತ್ತಿದ್ದ ಮನೆಗೆ ಬಂದು ಅವರ ಜೀವನದ ಅವಿಭಾಜ್ಯ ಅಂಗಗಳಾದ ಎಷ್ಟೊ ವಸ್ತುಗಳನ್ನು ನೋಡಿ ಕಣ್ದುಂಬಿಕೊಂಡೆ. ಕತ್ತಲಾವರಿಸತೊಡಗಿದಂತೆ ಅನಿವಾರ್ಯವಾಗಿ ಮನೆಯ ದಾರಿ ಹಿಡಿದೆ. ಕರ್ತವ್ಯದ ಕರೆಗೆ ಓಗೊಡಲೇಬೇಕಾದ ಅನಿವಾರ್ಯತೆ ಮನೆಯತ್ತ ಕೈಬೀಸಿ ಕರೆದಿತ್ತು.

ಕುವೆಂಪಜ್ಜನ ಹಲವಾರು ಕವನಗಳನ್ನು ಕಲ್ಲಿನಲ್ಲಿ ಕೆತ್ತಿ ಅಲ್ಲಿ ಪ್ರತಿಷ್ಟಾಪಿಸಿದ್ದಾರೆ. ಅವುಗಳಲ್ಲೊಂದು ಕವಿಶೈಲದ ಬಗ್ಗೆ ಬರೆದ ಕವನ.


"ಮಿತ್ರರಿರೆ, ಮಾತಿಲ್ಲಿ ಮೈಲಿಗೆ,ಸುಮ್ಮನಿರಿ,
ಮೌನವೇ ಮಹತ್ತಿಲ್ಲಿ, ಈ ಬೈಗು ಹೊತ್ತಿನಲಿ
ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥ ಯೋಗಿಯಾಗಿದೆ ಮಹಾ ಸಹ್ಯಗಿರಿ!

ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ
ಕೊಂಕು ಬಿಂಕವ ಬೀರಿ ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತ ಮತ್ತೆ ಮರೆಯಾಗುತ್ತ ತೇಲುತಿರೆ
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೋ ತರುಲತ ಧರಾತಲದಿ!

ಪಟ್ಟಣದಿ, ಬೀದಿಯಲಿ, ಮನೆಯಲ್ಲಿ ಸರ್ವತ್ರ
ಇದ್ದೇ ಇದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೇ ಮಹಾಸ್ತೊತ್ರ!

ಯೋಚಿಸಿನೋಡಿ, ಇಷ್ಟೊಂದು ಅದ್ಭುತ ಕವನದ ಹುಟ್ಟು ಅವರಿಗೆ ಕವಿಶೈಲದ ಮೇಲಿದ್ದ ಅಘಾದ ಭಕ್ತಿಗೆ ಸಾಕ್ಷಿಯಲ್ಲವೇ? ತನ್ನ ತಾಯಿಯಂತೆ ಪೂಜಿಸಿ ಗೌರವಿಸುತ್ತಿದ್ದ ಕವಿಶೈಲ ಮೈಲಿಗೆಗೊಳಗಾಗುವುದು ಅರಗಿಸಲಾಗದ ಕಷ್ಟ ಅವರಿಗೆ!

ಗೆಳೆಯರೆ, ನೀವೂ ಹೋಗಿಬನ್ನಿ ಕವಿಯ ತಪೋವನ ಕವಿಶೈಲಕೆ, ಅಲ್ಲಿ ಸಿಗುವ ಸಂತೋಷವನ್ನು ನಾ ಹೇಳಲಾರೆ, ಅನುಭವಿಸಿ ಬನ್ನಿ. ನೀವೇ ಹೇಳಿ!


ಮಿತ್ರರಿರೆ,
ಸುಮ್ಮನಿರಿ, ಸದ್ದು ಮಾಡದಿರಿ
ವಿಶ್ವಮಾನವ ಸಂದೇಶ ಸಾರಿದ
ಮಹನೀಯನಿಹರಿಲ್ಲಿ
ಮಲಗಿಹರಿಲ್ಲಿ ಚಿರನಿದ್ರೆಯಲಿ
ಮಹಾಕವ್ಯ ಬರೆದ ದಣಿವಿನಲಿ
ಸಾಹಿತ್ಯ ಕೃಷಿಯ ಹರಿಕಾರ
ಜ್ನಾನಪೀಠ ಪಡೆದ ಸರದಾರ
ಮಲಗಿಹರಿಲ್ಲಿ, ಚಿರನಿದ್ರೆಯಲಿ............
ಸದ್ದು ಮಾಡದಿರಿ...........


ಅಲ್ಲಿ ನಾನು ತೆಗೆದ ಒಂದಿಷ್ಟು ಫೋಟೋಗಳು ನಿಮಗಾಗಿ........





















































































































Thursday, November 18, 2010

ವಿಪರ್ಯಾಸ.........

ಗೆಳತಿ,
ಹೂವಾಗಿ, ಹಣ್ಣಾಗಿ
ಕನಸಾಗಿ, ಕಣ್ಣಾಗಿ
ಹಿತದ ಗೆಳತಿಯಾಗಿ
ನನಗೆಲ್ಲಾ ನೀನಾಗಿ
 ದೇವತೆಯಾಗಿ 
ನನ್ನ ಮನದಲ್ಲಿ ನೀನಿದ್ದೆ............


ಆ ಒಂದು ಕ್ಷಣ
ಬಿಟ್ಟೆ ಎಲ್ಲಾ ಚಿಂತೆ
ಬಾಳ ಗುರಿಯ ಕತೆ
ಭವಿಸಿದ ಎಲ್ಲಾ ವ್ಯಥೆ
ಕೊನೆಗೆ ನನ್ನನ್ನೇ ಮರೆತೆ
ಆದರೂ
ಕೆಡಿಸಿ ಬಿಟ್ಟೆಯಲ್ಲೆ ನೀ ನಿದ್ದೆ.............!



ಸ್ನೇಹಿತರೇ,
ಬ್ಲಾಗ್ ಲೋಕದಿಂದ ದೂರ ಉಳಿದು ತುಂಬಾ ದಿನಗಳಾದವು. ಎಂದೋ ಗೀಚಿದ್ದ ಈ ಸಾಲುಗಳು ಇಂದು ನೆನಪಾಗಿ ನಿಮ್ಮ ಮುಂದಿಟ್ಟಿದ್ದೇನೆ.
ಈ ಮಧ್ಯೆ ದೀಪಾವಳಿ ಬಂದು ಹೋಯಿತು, ಕನ್ನಡ ರಾಜ್ಯೋತ್ಸವ ಆಚರಣೆಯಾಯ್ತು, ಆದರೂ ನನ್ನ ಬ್ಲಾಗ್ ಮನೆಯ ಶೃಂಗಾರವಿಲ್ಲ, ತಳಿರು ತೋರಣಗಳಿಲ್ಲ. ಹಬ್ಬವಿಲ್ಲ, ನಿಮಗೆಲ್ಲ ಶುಭಾಷಯಗಳನ್ನೂ ಹೇಳಲಿಲ್ಲ. ಯಾರ ಮನೆಗೂ ಭೇಟಿಯಿಲ್ಲ, ನಿಮ್ಮ ಬರಹಗಳನ್ನೆಲ್ಲ ಓದಲೂ ಇಲ್ಲ.
ಹೌದು ನಾನು ತಪ್ಪು ಮಾಡಿದ್ದೇನೆ. 
ಆದರೆ ಏನು ಮಾಡುವುದು ಹೇಳಿ, ಕೆಲಸದ ಒತ್ತಡ ಅದೆಷ್ಟಿದೆಯೆಂದರೆ ಊಟ ನಿದ್ದೆಗೂ ಸಮಯವಿಲ್ಲ. ಹೊತ್ತು ಗೊತ್ತೆಂಬುದಿಲ್ಲ. ಹೊಸದಾಗಿ ಆರಂಭಗೊಂಡ 3 ತಾರಾ ಹೋಟೆಲ್ಲಿನ ಸಂಪೂರ್ಣ ಜವಬ್ದಾರಿ ನನಗೆ ಸಿಕ್ಕಿದ್ದರ ಕೊಡುಗೆ ಇದು! ಕೋಟ್ಯಾಂತರ ಖರ್ಚು ಮಾಡಿ ಪ್ರಾರಂಭಿಸಿದ ಈ ಹೋಟೆಲ್ಲನ್ನು ಮಗುವಿನಂತೆ ಜೋಪಾನ ಮಾಡುವುದು ನಮ್ಮ ಕರ್ತವ್ಯ ಅಲ್ಲವಾ? ಮಗು ಬೆಳೆದು ದೊಡ್ಡದಾದ ಮೇಲೆ ಹೊಣೆಗಾರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆ ಇದೂ ಕೂಡ!
ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಇಣುಕಿ ಹೋಗುತ್ತಿದ್ದೇನೆ. ಆದಷ್ಟು ಬೇಗ ಸಮಯ ಮಾಡಿಕೊಂಡು ಎಲ್ಲರ ಮನೆಗೂ ಬಂದು ತರ್ಲೆ ಮಾಡುತ್ತಾ ಇರುತ್ತೇನೆ! ಉದಾಹರಣೆಗೆ 
ತಡವಾಗಿ ಮತ್ತು ಮುಂದಿನ ವರ್ಷಕ್ಕೆ ಮುಂಗಡವಾಗಿ ದೀಪಾವಳಿಯ ಮತ್ತು ಕನ್ನಡ ರಾಜೋತ್ಸವದ ಶುಭಾಷಯಗಳು!

ಅಲ್ಲಿಯವರೆಗೂ ಪ್ರೀತಿ ಮಮತೆ ಇಂದಿನಂತೆಯೇ ಇರಲಿ!
ನಿಮ್ಮವ........
ಮನದಾಳದಿಂದ.....   ಪ್ರವೀಣ್....

Sunday, September 26, 2010

ಭತ್ತದ ನಾಟಿ(ನಟ್ಟಿ)



             ಸಾಸಿರಾರು ನೆನಪುಗಳನ್ನು ಹೊತ್ತು ಊರಿನಿಂದ ಮರಳಿ ಬಂದು ಹಲವು ದಿನಗಳೇ ಕಳೆದು ಹೋದವು. ದುಡಿಮೆಯ ನಿರಂತರ ಓಟದಲ್ಲಿ ಸುಂದರ ಕ್ಷಣಗಳಿಗಾಗಿ ಹುಡುಕಾಟ ನಡೆದೇ ಇದೆ. ಆದರೂ ನೆನಪುಗಳು ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುತ್ತವೆ. ನೆನಪುಗಳ ಹರಿವಿನ ನಡುವೆ ಜೀವನಕ್ಕಾಗಿ ಪರದಾಟ ಇದ್ದೇ ಇದೆ. 
             ಮಲೆನಾಡು ಎಂದರೆ ಸುಂದರ ಪ್ರಕೃತಿಯ ಬೀಡು. ದೇವರು ತನ್ನ ಶಕ್ತಿಯನ್ನೆಲ್ಲಾ ಸೌಂದರ್ಯದ ರೂಪದಲ್ಲಿ ಮಲೆನಾಡಿಗೇ ರವಾನಿಸಿರಬಹುದೇನೊ ಎಂಬ ಅನುಮಾನ ಬರುವುದು ಸಹಜ. ಸದಾ ಕಾಲವೂ ಹಸಿರಾಗಿ ಸುಂದರವಾಗಿ, ತಂಪಾಗಿ, ಸಮಾನ ಉಷ್ಣಾಂಶದಿಂದ ನಳನಳಿಸೊ ಸೌಂದರ್ಯ ರಾಶಿ ನಮ್ಮ ಮಲೆನಾಡು.
             ಮಲೆನಾಡಿನ ರೈತರಿಗೆ ವರ್ಷವಿಡೀ ಕೆಲಸವೇ. ಎಂದಿಗೂ ಕೆಲಸ ಇಲ್ಲ ಎಂಬ ದಿನವೇ ಇಲ್ಲ. ಜೂನ್ ತಿಂಗಳಿನಿಂದ ಶುರು ಆಗುವ ಕೆಲಸಗಳು ಮೇ ಅಂತದ ವರೆಗೂ ಇರುತ್ತವೆ. ಭತ್ತದ ನಾಟಿಯ ಕೆಲಸ, ತೋಟದ ಕಳೆ, ಅಡಕೆಯ ಔಷದಿ, ಗದ್ದೆ ಕೊಯ್ಲು, ಅಡಕೆ ಸುಲಿತ, ಎರಡನೆ ಬೆಳೆಯಾಗಿ ಮತ್ತೆ ಭತ್ತ, ಹುರುಳಿ, ಎಳ್ಳು, ಹೆಸರು, ಉದ್ದಿನಂತ ಬೇಳೆಕಾಳುಗಳು, ಬೇಸಿಗೆಯಲ್ಲಿ ಸೌತೆ, ಬದನೆ, ಕುಂಬಳ, ಮೆಣಸು, ಬೆಂಡೆ ಮುಂತಾದ ತರಕಾರಿಗಳ ಹಿತ್ತಿಲು, ಮಳೆಗಾಲಕ್ಕೆ ಕಟ್ಟಿಗೆಯ ಸಂಗ್ರಹ.............ಹೀಗೆ ನಿರಂತರ ಕೆಲಸಕಾರ್ಯಗಳೇ!
              ಇಂತಹ ಕೆಲಸಗಳಲ್ಲೇ ಭತ್ತದ ನಾಟಿ(ನಟ್ಟಿ) ಮುಖ್ಯವಾದ ಕೆಲಸ. ಮೊದಲೆಲ್ಲಾ ಮಳೆಯ ಕಣ್ಣುಮುಚ್ಚಾಲೆ ಅಷ್ಟಾಗಿ ಇರಲಿಲ್ಲ. ಅದ್ದರಿಂದ ಮೇ ತಿಂಗಳಲ್ಲೇ ಬೀಜ ಹಾಕಿ ಆಗಿರುತ್ತಿತ್ತು. ಜುಲೈ ಅಂತ್ಯದಲ್ಲಿ ನಟ್ಟಿಯ ಕೆಲಸ ಮುಗಿದಿರುತ್ತಿತ್ತು. ಮಳೆಗಾಲದ ಕಾಲಚಕ್ರ ಬದಲಾದಂತೆ, ನಿಯಮಗಳೂ ಬದಲಾದವು. ಈಗ ಮಳೆ ಶುರು ಆದ ನಂತರವೇ ಬೀಜ ಹಾಕುತ್ತಾರೆ. ಹಾಗಾಗಿ ಸೆಪ್ಟೆಂಬರ್ ಬಂದರೂ ನಟ್ಟಿ ಮುಗಿದಿರುವುದಿಲ್ಲ! 
               ಬೀಜ ಹಾಕಿ ತಿಂಗಳು ಕಳೆಯುವಷ್ಟರಲ್ಲಿ ಸಸಿ ಬೆಳೆದು ನಾಟಿಯ ಹಂತಕ್ಕೆ ಬರುತ್ತದೆ. ಅಷ್ಟರಲ್ಲಾಗಲೇ ಗದ್ದೆ ಉಳುಮೆ ಮಾಡಿ ಹದಗೊಳಿಸಿರಲಾಗುತ್ತದೆ. ಮೂರರಿಂದ ನಾಲ್ಕು ಸಾಲು ಹೂಟೆ ಮುಗಿದಿರುತ್ತದೆ. ಆಮೇಲೆ ಶುರು ಆಗುವುದೇ ನಿಜವಾದ ನಟ್ಟಿಯ ಚಿತ್ರಣ! ಗದ್ದೆಯಲ್ಲಿ ಎಲ್ಲಿ ನೋಡಿದರೂ ಗೊರಬು, ಕಂಬಳಿ ಕೊಪ್ಪೆ, ಎತ್ತು ಕೋಣಗಳು.....!ಜನರಲ್ಲಿ ಏನೋ ಉತ್ಸಾಹ, ಇಡೀ ವರ್ಷದ ಅನ್ನಕ್ಕಾಗಿ ಬೆವರಿಳಿಸುವ ತವಕ! 
               ಈಗ ಕೂಲಿಕಾರ್ಮಿಕರ ಸಮಸ್ಯೆ ನಮಗಿಲ್ಲ. ಏಕೆಂದರೆ ನಮ್ಮಲ್ಲಿ ಕೂಲಿಗಳೇ ಇಲ್ಲ! ಅನಿಯಮಿತ ಸಹಕಾರ ಪದ್ಧತಿ ನಮ್ಮ ಮಲೆನಾಡಿನಲ್ಲಿದೆ. ಅದಂರತೆ ಊರಲ್ಲಿ ಕೆಲವಷ್ಟು ಮನೆಯವರೆಲ್ಲಾ ಸೇರಿ ಒಟ್ಟಾಗಿ ಕೆಲಸಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಾವು ಹೋಗುವುದು, ನಮ್ಮ ಕೆಲಸಕ್ಕೆ ಅವರು ಬರುವುದು. ಮಲೆನಾಡಿನಲ್ಲಿ ಪರಸ್ಪರ ಮನೆಗಳ ಅಂತರ ಬಹಳ ದೂರ. ಒಂದು ಕಿಲೋಮೀಟರ್ ಅಂತರದಲ್ಲಿ ಎರಡು ಅಥವಾ ಮೂರು ಮನೆಗಳು ಸಿಗಬಹುದು. ಹಾಗಾಗಿ ಆದಷ್ಟು ಹತ್ತಿರದ ಮನೆಗಳ ಜನರು ಒಂದಾಗಿ ಕೆಲಸ ಮಾಡುತ್ತಾರೆ. ಯಾವುದೇ ಕೆಲಸವಾದರೂ ಸೈ, ಎಲ್ಲರೂ ಒಟ್ಟಾಗಿ ಕೆಲಸ ಮುಗಿಸುತ್ತಾರೆ.
               ಈಗೀಗ ಇನ್ನೊಂದು ಸಮಸ್ಯೆ ಎಲ್ಲಾ ಹಳ್ಳಿ ರೈತರಿಗೂ ತಲೆದೋರುತ್ತಿದೆ. ಅದೇನೆಂದರೆ ನಮ್ಮಂತ ಯುವ ಪೀಳಿಗೆಯ ನಗರ ಪಲಾಯನ ಸೂತ್ರ! ನಾಲ್ಕಕ್ಷರ ಕಲಿತ ಕೋಡು ಮೂಡಿ ನಾವು ನಗರಕ್ಕೆ ಪಲಾಯನ ಮಾಡುತ್ತಿದ್ದೇವೆ. ಕಾರಣ ಹಳ್ಳಿಯಲ್ಲಿ ಭವಿಷ್ಯ ಇಲ್ಲ ಎಂಬ ದೂರು. ರೈತ ಕೆಲಸಕ್ಕೆ ಯಾರೂ ಇಲ್ಲ. ಕೆಲವಷ್ಟು ಕಾರ್ಯಗಳನ್ನು ಯಂತ್ರಗಳು ನಿರ್ವಹಿಸಬಲ್ಲವು. ಆದರೆ ಸಂಪೂರ್ಣ ಕೆಲಸಗಳನಲ್ಲ!
ಇರಲಿ, ವಿಷಯಕ್ಕೆ ಬರೋಣ!
             ನಟ್ಟಿಯ ಮೊದಲ ದಿನ ಸಸಿ ಕೀಳುವ ಕಾರ್ಯ. ಕಿತ್ತ ಸಸಿಯನ್ನು ಕಟ್ಟು ಮಾಡಿ ಇಡುವುದು. ಹೀಗೆ ಒಬ್ಬ ಹೆಂಗಸು ಒಂದು ದಿನದಲ್ಲಿ ಕೀಳುವ ಸಸಿ ಕಟ್ಟಿನ ಸಂಖ್ಯೆ ಸುಮಾರು 9 ರಿಂದ 11 ಮೆದೆ(ಒಂದು ಮೆದೆ ಎಂದರೆ ಇಪ್ಪತ್ತು ಕಟ್ಟು). ಸಾದಾರಣವಾಗಿ ಹೆಂಗಸರೇ ಸಸಿ ಕೀಳುವುದು ಹೆಚ್ಚು! ಕಿತ್ತ ಸಸಿಗಳನ್ನು ನೀರಿಂದ ಮೇಲೆ ಎತ್ತಿಡುವುದು , ಹಾಗೆ ಎತ್ತಿಟ್ಟ ಸಸಿ ಕಟ್ಟಿನ ನೀರು ಇಳಿದ ಮೇಲೆ ಹೆಡಗೆ(ಬುಟ್ಟಿ)ಯಲ್ಲೋ, ಹಗ್ಗ ಕಟ್ಟಿಯೋ ನೆಡುವ ಜಾಗಕ್ಕೆ ಕೊಂಡೊಯ್ದು ಹಾಕುವುದು ಗಂಡಸರ ಕೆಲಸ! ಇದಿಷ್ಟು ಮೊದಲ ದಿನದ ಚಿತ್ರಣ.
             ನಾಟಿಯ ದಿನ ಹೂಟೆ ಮುಂಚಿತವಾಗಿ ಆರಂಭವಾಗುತ್ತದೆ.  ಎತ್ತು/ಕೋಣಗಳ ಜೋಡಿ ಸಾಲು ಹೂಟೆಯಲ್ಲಿ ಕಂಡುಬರುತ್ತವೆ. ನಾಟಿ ಮಾಡಲು ಇರುವ ಜನರ ಸಂಖ್ಯೆಯ ಮೇಲೆ ಎಷ್ಟು ಜೋಡಿ ಎತ್ತುಗಳು ಬೇಕೆಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ೧೨ರಿಂದ ೧೫ ಜನರಿಗೆ ೪ರಿಂದ ೫ ಜೋಡು ಬೇಕಾಗುತ್ತದೆ.(ಹೂಟೆಯ ಜೋಡಿ ಎತ್ತು/ಕೋಣಗಳಿಗೆ ಜೋಡು ಎಂದು ಕರೆಯುತ್ತಾರೆ.) ಹೂಟೆಯು ಮುಂದುವರೆದಂತೆ ನಟ್ಟಿ ಶುರು ಆಗುತ್ತದೆ. ನಳ್ಳಿ ಹೊಡೆದು ಸಮತಟ್ಟಾದ ನಂತರ ಸಸಿ ಕಟ್ಟಿನ ತಲೆಭಾಗ ಸ್ವಲ್ಪ ಕೊಯ್ದು ಗದ್ದೆಗೆ ಎಸೆಯಲಾಗುತ್ತದೆ. ಆ ಕಟ್ಟುಗಳನ್ನು ಬಿಚ್ಚಿ ೩-೫ ಸಸಿಗಳನ್ನು ಒಟ್ಟೊಟ್ಟಿಗೆ ನೆಡುತ್ತಾರೆ. 
ಈಗಲೂ ಕೂಡಾ ನಮ್ಮಲ್ಲಿ ನಟ್ಟಿ, ಗದ್ದೆಕೊಯ್ಲಿನ ಸಂದರ್ಭದಲ್ಲಿ ಹೆಂಗಸರು ಹಾಡು ಹೇಳುತ್ತಾರೆ. ಆದರೆ ವ್ಯತ್ಯಾಸ ಇಷ್ಟೆ. ಹಿಂದೆ ಜನಪದ ಗೀತೆಗಳ ಸೊಗಡು ತುಂಬಿದ್ದರೆ ಈಗ ಚಲನಚಿತ್ರ ಗೀತೆಗಳು. ಆಗೊಮ್ಮೆ ಈಗೊಮ್ಮೆ ಹಳೆಯ ತಲೆಗಳಿಂದ ಜಾನಪದ ಗೀತೆಗಳೂ ಕೇಳಿ ಬರುವುದುಂಟು. ಆದರೆ ತುಂಬಾ ಕಡಿಮೆ. ಈಗಿನ ಹೆಣ್ಣುಮಕ್ಕಳು ಹಳಬರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ಬೆಳೆಸಿಕೊಳ್ಳದೆ ತಿರಸ್ಕಾರ ಮಾಡಿದ್ದು ನಾನು ಕಣ್ಣಾರೆ ಕಂಡ ಸತ್ಯ! ಆದರೂ ಒಂದು ತೃಪ್ತಿ ಎಂದರೆ ಎಲ್ಲವೂ ಕನ್ನಡ ಹಾಡುಗಳೇ ಎಂಬುದು. ಮುಂದೊಂದು ದಿನ ಆ ಸ್ಥಾನವನ್ನು ಹಿಂದಿಯ ಹಾಡುಗಳೋ, ಅಥವಾ ತಮಿಳು ತೆಲುಗಿನ ಹಾಡುಗಳು ಆಕ್ರಮಿಸಿಕೊಂಡರೆ ಆಶ್ಚರ್ಯವೇನಿಲ್ಲ! ಬದಲಾವಣೆ ಪ್ರಕೃತಿಯ ನಿಯಮ.......
            ನಟ್ಟಿಯ ಸಂದರ್ಭದಲ್ಲಿ ಊಟ ತಿಂಡಿಗಳು ಗದ್ದೆಯಲ್ಲಿಯೇ ನದೆಯುತ್ತವೆ. ಸಾಧಾರಣವಾಗಿ ತಿಂಡಿಯೆ ಹೆಚ್ಚು. ಬೆಳಿಗ್ಗೆ ಊಟ ಮಾಡುವ ಪದ್ಧತಿಯನ್ನು ನಮ್ಮೂರಲ್ಲಿ ನೋಡಬಹುದು. ಕುಚ್ಚಲಕ್ಕಿಯ ಗಂಜಿ ಈಗ ಅಲ್ಲಲ್ಲಿ ಮರೆಯಾಗಿದೆ. ಮೊದಲೆಲ್ಲಾ ಬೆಳಿಗ್ಗೆ ಕಂಚಿನ ಬಟ್ಟಲಲ್ಲಿ ಎರಡುಬಟ್ಟಲು ಗಂಜಿ ಉಂಡು ಗದ್ದೆಗೆ ಹೋಗುತ್ತಿದ್ದರು. ಈಗ ಕುಚ್ಚಲಕ್ಕಿ ಊಟ ಕಡಮೆಯಾಗಿದೆ. ಬೆಳಗ್ಗಿನ ಊಟದ ಪದ್ದತಿ ಇದೆ. ಗದ್ದೆಗೆ ಮಧ್ಯಾಹ್ನ ಕಡುಬು ತಿಂಡಿಯ ರೂಪದಲ್ಲಿ ತರಲಾಗುತ್ತದೆ. ಕಡುಬು ಸಕಲರಿಗೂ ಮೆಚ್ಚು, ಮಾಡುವುದೂ ಸುಲಭ. ಏನಾದರೂ ಒಂದು ಸಾರು ಮಾಡಿದರೆ ಆಯ್ತು. ಹೆಚ್ಚು ಕಷ್ಟವೇ ಇಲ್ಲ.
ಬಿಸಿ ಬಿಸಿ ಕಾಫಿಯ ಸೇವೆ ಮಧ್ಯ ಒಂದೆರೆಡು ಬಾರಿ ಇರುತ್ದೆ. ಆಗಾಗ ಎಲೆ ಅಡಿಕೆಯಂತೂ ಇದ್ದೇ ಇರುತ್ತದೆ. ಬಿರುಮಳೆಯಿಂದ ಉಂಟಾದ ಚಳಿಯ ರಕ್ಷಣೆಗೆ ಎಲೆ ಅಡಿಕೆ ಸರ್ವೋಚ್ಛ ಸಾಧನ. ಎಳೆಯರಿಂದ ಮುದುಕರವರೆಗೂ ಎಲ್ಲರೂ ಎಲೆ ಅಡಿಕೆಯ ದಾಸಾನುದಾಸರೇ!  
             ಅದೇ ಮೊದಲ ದಿನದ ನಟ್ಟಿಯಾದರೆ "ದೊಡ್ನಟ್ಟಿ" ಎಂದು ಕರೆಸಿಕೊಳ್ಳುತ್ತದೆ. ಸಂಜೆ ನಟ್ಟಿ ಮುಗಿದ ನಂತರ ಗದ್ದೆ ಮಧ್ಯೆ ಮುಂಡುಗವನ್ನು ನೆಟ್ಟು ಹಲಸಿನ ಹಣ್ಣನ್ನು ಕಡಿದು ಎಲ್ಲರಿಗೂ ಹಂಚಲೇ ಬೇಕು. ಆ ದಿನ ಹಲಸಿನ ಹಣ್ಣಂತೂ ಇರಲೇಬೇಕು!
             ಅಂತೂ ನಟ್ಟಿಯನ್ನು ಮುಗಿಸಿ, ಜೋಪಾನವಾಗಿ ನೋಡಿಕೊಂಡು ಬರಲಾಗುತ್ತದೆ. ಹತ್ತರಿಂದ ಹದಿನೈದು ದಿನಗಳಲ್ಲೆ ಹೊಸ ಚಿಗುರು ಬರಲಾರಂಭಿಸುತ್ತದೆ. ಎರೆಡು ತಿಂಗಳು ಕಳೆಯುವಷ್ಟರಲ್ಲಿ ತನೆಗಳು ಮೂಡಲಾರಂಭಿಸುತ್ತವೆ. 
ಮಧ್ಯದಲ್ಲಿ ಎಲ್ಲಾದರೂ ಮಳೆ ಕೈ ಕೊಟ್ಟು ಹೆಚ್ಚೊ  ಕಡಿಮೆಯೋ ಆದರೆ ಮುಗಿಯಿತು. ರೈತ ರಕ್ತದಂತೆ ಇಳಿಸಿದ ಬೆವರಿಗೆ ಕವಡೆ ಕಿಮ್ಮತ್ತೂ ಇಲ್ಲದಂತಾಗುತ್ತದೆ. ಪಟ್ಟ ಕಷ್ಟಕ್ಕೆ ಬೆಲೆಯೆ ಇಲ್ಲವಾಗುತ್ತದೆ. ಆದರೂ ದೇಶದ ಬೆನ್ನೆಲುಬಾಗಿ ರೈತ ನಾಳೆಯ ಭರವಸೆಯೊಂದಿಗೆ ಬದುಕುತ್ತಾನೆ. ಈ ವರ್ಷ ಏನೂ ತೊಂದರೆ ಆಗಲಾರದು ಎಂಬ ನಂಬಿಕೆ ತುಂಬಿರುತ್ತದೆ. ಚೌಡಿಗೆ ಕೊಡುವ ಹರಕೆಯಲ್ಲಿ ಒಂದು ಸಂಖ್ಯೆ ಹೆಚ್ಚಾಗುತ್ತದೆ. ಕಾಕತಾಳೀಯವೋ ಎಂಬಂತೆ ಅತೀ ಹೆಚ್ಚಲ್ಲದಿದ್ದರೂ ತೊಂದರೆಯಿಲ್ಲದೆ ಈ ವರ್ಷ ಕೆಲಸ ಕಾರ್ಯಗಳು ಮುಗಿದು ಬೆಳೆ ಕೈಗೆ ಸಗುತ್ತದೆ. ಚೌಡಿಗೆ ಒಂದು ಜಾಸ್ತಿ ಕೊಟ್ಟಿದ್ದು ವ್ಯರ್ಥವಾಗಲಿಲ್ಲ ಎಂಬ ಸಂತೋಷ ರೈತನ ಮೊಗದಲ್ಲಿ ನಲಿದಾಡುತ್ತದೆ.


ನಮ್ಮ ಮನೆಯ ನಟ್ಟಿಯ ಸಮಯದ ಕೆಲವು ಚತ್ರಗಳು ಇಲ್ಲಿ ನಿಮಗಾಗಿ, ನೊಡಿ.........



ನಳ್ಳಿ ಹೊಡೆಯುತ್ತಿರುವ ನನ್ನ ತಮ್ಮ (ನಳ್ಳಿ ಎಂದರ ಹೂಟೆ ಮಾಡಿದ ಭೂಮಿಯ ಉಬ್ಬುತಗ್ಗುಗಳನ್ನು ಮುಚ್ಚಲು ಬಳಸುವ ಸಾಧನ)




ಸಸಿ ಕೀಳುತ್ತಿರುವ ನಮ್ಮೂರ ಮಹಿಳೆಯರು



ಕಿತ್ತಿಟ್ಟ ಸಸಿ ಕಟ್ಟುಗಳು.


 
ನೀವು ಕಾಫಿ ಕುಡೀರಿ, ನಾನು ಹಾಗೆ ಸ್ವಲ್ಪ ಹುಲ್ಲು ಮೇಯ್ತೇನೆ. ಆಮೇಲೆ ಬರಲು ಆಗಲ್ಲ!




ಅಬ್ಬ....ಎಷ್ತು ತಣ್ಣಗಾಗ್ತ ಇದೆ ಈ ಕೆಸರಲ್ಲಿ.......
ಎತ್ತು ಮತ್ತು ಕೋಣಗಳು ವಿಶ್ರಾಂತಿಯಲ್ಲಿ.


 
 ನೆಗಿಲ ಯೋಗಿ........
ಸೀನಣ್ಣ ಮತ್ತು ನಮ್ಮ ಚಿಕ್ಕಪ್ಪ ಹೂಟೆಯಲ್ಲಿ ನಿರತ....




  ಹೀಗೆ ನಮ್ಮಲ್ಲಿ ನಾಟಿ ಮಾಡುವುದು......





   ತಲೆ ಕತ್ತರಿಸಿಕೊಂಡ ಭತ್ತದ ಸಸಿ ಕಟ್ಟುಗಳು.





 ನೀವು ಎಲೆ ಅಡಿಕೆ ತಿನ್ನಿ, ನಾವು ಹಾಗೆ ಸ್ವಲ್ಪಹೊತ್ತು ಕೆಸರಲ್ಲಿ ಮಲಗಿ ವಿಶ್ರಮಿಸುತ್ತೇವೆ ಎನ್ನುವ ಕೋಣಗಳು




ಇರಿ ಬಂದೆ, ತಮ್ಮ ಒಬ್ನೆ ಹೂಡ್ತಾ ಇದ್ದಾನೆ, ನಾನು ಸ್ವಲ್ಪ ಹೊತ್ತು ನಳ್ಳಿ ಹೊಡಿತೀನಿ




ನಾನೂ ಕೆಲ್ಸ ಮಾಡ್ತಾ ಇದ್ನಪ್ಪಾ.......















ತಿಂಡಿ, ಎಲೆಅಡಿಕೆ ಎಲ್ಲ ಗದ್ದೆಯಲ್ಲೇ.....!





Thursday, September 16, 2010

ಮರೆಯಲಾಗದ ಅನುಭವ.....

.ಗೆಳೆಯರೇ,
ಸಾವಿರಾರು ನೆನಪುಗಳ ಹೊತ್ತು, ಅನಿವಾರ್ಯದ ಕರೆಗೆ ಓಗೊಟ್ಟು ಊರನ್ನು ಬಿಟ್ಟು ನಗರವನ್ನು ಸೇರಿದ್ದೇನೆ. ಊರಲ್ಲಿ ಇದ್ದ ಒಂದು ತಿಂಗಳಲ್ಲಿ ಎಲ್ಲವೂ ಸಂತೋಷದ ಕ್ಷಣಗಳೇ,  ಬೆಂಗಳೂರಿನಲ್ಲಿ ಶುರುವಾದ ಸಂತೋಷ ಇಂದಿನವರೆಗೂ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಬೆಂಗಳೂರಿನಲ್ಲಿ ಬ್ಲಾಗ್ ಮಿತ್ರರೆಲ್ಲರ ಒಡನಾಟ ಎಂದೂ ಮರೆಯಲಾಗದ ಅನುಭವ. ನಗೆಗಡಲಲ್ಲಿ ತೇಲಿಸುವ ಪಕ್ಕು ಮಾಮ(ಪ್ರಕಾಶಣ್ಣ) ಆಶಾಕ್ಕ, ಸಜ್ಜನ ಸರ್ಜನರು ನಮ್ಮ ಡಾಕ್ಟರ್ ಅವರು, ಮುಗುಳ್ನಗೆಯ ಮಾಂತ್ರಿಕ ಪರಾಂಜಪೆ ಸರ್, ನಾರಾಯಣ ಭಟ್ಟರು, ಜ್ಞಾನ ಸಾಗರ ವಿ ಆರ್ ಭಟ್ಟರು, ಅನಿಲ್ ಬೆಡಗೆ, ನಾಗರಾಜ್, ಶಿವು ಮತ್ತು ಹೇಮಶ್ರೀ ಮೇಡಂ(ಮತ್ತು ಅವರ ಮನೆ ಊಟ!)............ಜೊತೆಗೆ ಸುಗುಣಕ್ಕ ಮಹೇಶ್ ಸರ್ ಮನೆಯ ಹಬ್ಬದ ಊಟ! ಪಕ್ಕು ಮಾಮನ ಜೊತೆ ಸುತ್ತಾಟ, ಸಿನಿಮಾ ನೋಡಾಟ, ಹುಡುಗಿ ನೋಡಾಟ,  ಅದಕ್ಕೂ ಕಿತ್ತಾಟ!
ಇವರೆಲ್ಲರೊಂದಿಗೆ ಕಳೆದ ಆ ಮಧುರ ಕ್ಷಣಗಳು ಮತ್ತೆ ಮರುಕಳಿಸುವುದು ಯಾವಾಗ? ಶಿವು ಮತ್ತು ಅಜಾದ್ ಅವರ ಪುಸ್ತಕ ಬಿಡುಗಡೆಯ ಕಾರ್ಯಕ್ರಮವಂತೂ ನಮ್ಮ ಮನೆಯ ಕಾರ್ಯಕ್ರಮದಂತೆ ನಡೆದು ಹೋಯಿತು. ಅಲ್ಲಿ ಎಲ್ಲರೂ ಅಪರಿಚಿತರೇ, ಆದರೆ ಯಾರಲ್ಲೂ ಆ ಬಾವನೆಯೇ ಇಲ್ಲ! ಒಟ್ಟಿಗೆ ತಿಂದು ಉಂಡು ಬೆಳೆದ ಸ್ನೇಹಿತರಿಗಿಂತಲೂ ಪರಿಚಯಸ್ತರು! ಸೀತಾರಾಂ ಸರ್, ನಮ್ಮೊಳಗೊಬ್ಬ ಬಾಲು ಸರ್, ಹಳ್ಳಿಮೇಷ್ಟ್ರು ನವೀನ್, ಬ್ರಹ್ಮಚಾರಿ ಶಿವಪ್ರಕಾಶ್,  ಚೇತನಾ, ನಂಜುಂಡ ದಂಪತಿಗಳು, ಶಿವಶಂಕರ್ ಯಳವತ್ತಿ, ದಿನಕರ್ ದಂಪತಿಗಳು, ಅಶೋಕ್ ಶೆಟ್ಟಿ, ನಗುಮೊಗದ ಹುಡುಗ ನಮ್ಮವ ರಾಘು, ದಿಲೀಪ್ ಹೆಗ್ಡೆ, ಪ್ರಗತಿ, ದಿವ್ಯ ಹೆಗ್ಡೆ, ಶೋಭಾ, ಶಶಿ ಅಕ್ಕ, ನಿಶಾ ಅಕ್ಕ, ಸುಮನ ವೆಂಕಟ್ ಜೋಡಿ................ಒಬ್ಬರ ಇಬ್ಬರಾ! 
ನಂತರ ನಡೆದ ಬಹುಮಾನ ವಿತರಣೆ! ಈ ಪ್ರೀತಿ, ಅಧರ, ಖುಷಿ, ಬೇರೆಲ್ಲೂ ಸಿಗಲಾರದೇನೋ..........ಎಲ್ಲಾ ಬ್ಲೋಗ್ ಮಿತ್ರರಿಗೂ ನಾನು ಚಿರಋಣಿ.

ಇನ್ನು ಮನೆಯಲ್ಲಿದ್ದ ಕ್ಷಣಗಳೆಲ್ಲವು  'ಆ ಸಮಯ......... ಆನಂದಮಯಾ............!' ಧೋ ಎಂದು ಸುರಿವ ಮಳೆ, ನಾಟಿ ಕೆಲಸ, ತೋಟದ ಕೆಲಸ, ದನ ಮೇಯಿಸುವ ಕೆಲಸ ಜೊತೆಯಲ್ಲೇ ಆಗಾಗ ತಿರುಗಾಟ! ಆಗುಂಬೆ, ಜೋಗ, ಕವಿಶೈಲ, ಶೃಂಗೇರಿ, ಮಾವನ ಮನೆ, ಚಿಕ್ಕಮ್ಮನ ಮನೆ ಎಲ್ಲಾ ಕಡೆ ತಿಂದು ಉಂಡು ತಿರುಗಿದ್ದೇ! ಶ್ರಾವಣ, ಗೌರಿ ಹಬ್ಬ, ಗಣೇಶ ಚತುರ್ಥಿ ಮುಂತಾದ ಹಬ್ಬಗಳ ಸರಮಾಲೆ! ಈಗ ಎಲ್ಲಾ ಬಿಟ್ಟು ನೆನಪುಗಳನ್ನು ಹೊತ್ತು ಮತ್ತೆ ದೆಹಲಿಗೆ ಬಂದಿದ್ದೇನೆ ಹೊಟ್ಟೆಪಾಡಿಗಾಗಿ!



ಹಲವಾರು ದಿನಗಳಿಂದ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಿರಲಿಲ್ಲ. ಈಗ ಒಂದೊಂದಾಗಿ ಓದುತ್ತೇನೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. 





ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ
ನಿಲ್ಲದ ಓಟಕ್ಕೆ 
ದುಡಿಯುವ ಛಲಕ್ಕೆ
ಗಳಿಸುವ ತವಕಕ್ಕೆ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಹಕ್ಕಿ ಪಕ್ಷಿಗಳ ಕಲರವ ಬಿಟ್ಟು
ಜುಳು ಜುಳು ನೀರಿನ ಸದ್ದನು ಮರೆತು
ತಂಗಾಳಿಯ ಸಹವಾಸ ದೂಡಿ
ಕಾರ್ಮುಗಿಲು ಬಿರುಮಳೆಗಂಜಿ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಹಳ್ಳಿಯ ಮುಗ್ಧ  ಮುಖಗಳ
ತಾಯಿಯಂತ ಮನೆಯ ಹಸುಗಳ
ಪ್ರೀತಿ ತೋರುವ ನಾಯಿಗಳ 
ಹಂಚಿನ ಬೆಚ್ಚನೆ ಮನೆಯ 
ಎಲ್ಲವ ಬಿಟ್ಟುಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಮಲೆನಾಡ ಮಣ್ಣಿನ ಸುವಾಸನೆಯಂತ
ಅಮ್ಮನ ಪ್ರೀತಿಯ ಕೈತುತ್ತ ತಿಂದು 
ಅಪ್ಪನ ಕಣ್ಣನಚ ನೀರನು ಕಾಣದೆ
ತಮ್ಮನೊಂದಿಗಿನ ಆಟವ ನೆನೆಯುತ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ,

ಗಡಿಬಿಡಿಯ ಪ್ರಪಂಚದಲ್ಲಿ 
ದುಡಿಮೆಯ ಗುರಿಯ ಬೆನ್ನಟ್ಟಿ
ಎಲ್ಲಾ ನೆನಪನು ಗಳಿಗೆ ಮರೆತು
ಯಂತ್ರದಂತೆ ತಿರುಗಲೆಂದು
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ,
ನಿಲ್ಲದ ಓಟಕ್ಕೆ 
ದುಡಿಯುವ ಛಲಕ್ಕೆ
ಗಳಿಸುವ ತವಕಕ್ಕೆ!

Tuesday, August 10, 2010

"ಗುಟ್ಟು"

ನಲ್ಲೆ,
ನಿನಗೆ ಯಾಕೇ
ಬೇಕು
ಚಂದದ
ಆಭರಣ
                  ಒಡವೆಗಳು...........?

ನಿನ್ನಲ್ಲೇ 
ಇವೆಯಲ್ಲಾ 
ಮುಖದ 
ತುಂಬಾ
ಅಂದದ 

                  ಮೊಡವೆಗಳು........!



ಗೆಳೆಯರೇ,
ಬಹಳ ದಿನಗಳ ಆಸೆಯಂತೆ ನಾನು ಮನೆಗೆ ಹೊರಟಿದ್ದೇನೆ. ಪೂರ್ಣ ಒಂದು ತಿಂಗಳ ರಜೆ ಹಾಕಿ ಮನೆಯತ್ತ ಹೆಜ್ಜೆ ಹಾಕಿದ್ದೇನೆ. ಬೆಂಗಳೂರಲ್ಲಿ ಒಂದು ವಾರ ಇದ್ದು ಆಮೇಲೆ ಮನೆಗೆ ಹೋಗುವ ಆಲೋಚನೆ ನನ್ನದು. ಇಂದಿನಿಂದ ಶ್ರಾವಣ ಮಾಸ ಆರಂಭಗೊಂಡು ಸಂತಸದ ಹಬ್ಬದ ವಾತಾವರಣವನ್ನು ತಂದಿದೆ, ಒಂದೊಂದೇ ಹಬ್ಬಗಳು ಸರತಿ ಸಾಲಿನಲ್ಲಿ ನಿಂತಿವೆ. ಹಬ್ಬದಲ್ಲಿ ಮನೆಯಲ್ಲಿದ್ದರೆ ಮನೆಮಂದಿಯೆಲ್ಲಾ ಅದೆಷ್ಟು ಖುಷಿ ಪಡುತ್ತಾರೆ ಅಲ್ವಾ? ಹಬ್ಬದ ದಿನ ನೀವು ನಿಮ್ಮ ಮನೆಗೆ ಹೋಗಿ ಬನ್ನಿ. ಮನೆಯಲ್ಲಿ ಹಬ್ಬದ ಸಂತೋಷವನ್ನು ಹೆಚ್ಚಿಸಿ.

ನಮಗೆಲ್ಲಾ ತಿಳಿದಿರುವಂತೆ ಅಗಸ್ಟ್ 22ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅಜಾದ್ ಸರ್ ಅವರ "ಜಲನಯನ" ಮತ್ತು ಶಿವು ಸರ್ ಅವರ "ಗುಬ್ಬಿ ಎಂಜಲು" ಪುಸ್ತಕಗಳ ಬಿಡುಗಡೆ ಸಮಾರಂಭ ಇದೆ. ಎಲ್ಲರೂ ಬನ್ನಿ, ಒಟ್ಟಿಗೆ ಸೇರಿ ನಮ್ಮ ಗೆಳೆಯರನ್ನು ಹಾರೈಸೋಣ, ಎಲ್ಲರೂ ಒಂದಾಗಿ ಈ ಸಮಾರಂಭದ ಅಂದ ಹೆಚ್ಚಲು ಕಾರಣರಾಗೋಣ.
ಪ್ರೀತಿ ಇರಲಿ,
ಪ್ರವೀಣ್ ಆರ್ ಗೌಡ 
ಫೋನ್: 09873837353
            09582199937
                      08880348815(ಬೆಂಗಳೂರಿನಲ್ಲಿ ಇರುವಾಗ)

Wednesday, August 4, 2010

ಹೇಳುವೆಯಾ ಕಾರಣಾ.............

ಪ್ರೀತಿಯೇ ನೀನೇಕೆ ಹೀಗೆ?
ಒಂದೂ ಅರಿಯದ ಭಾವದ ಹಾಗೆ...........
ಮುಡಿದ ಹೂ ಬಾಡಿದ ಮೇಲೆ
ಕಸವಾಗಿ ಹೋಯಿತು ಅದಕ್ಕೆಲ್ಲಿ ಬೆಲೆ..........?

 ಅಂದು ನಿನ್ನ ಕಂಡಾಗ ನನಗಾದ ಪರಿಣಾಮ
 ನಿದೆರೆ ಹಸಿವು ಮರೆತ ನಿನ್ನ ಗುಲಾಮ............
 ನೀನೇ ಉಸಿರು, ನೀನೇ ನನ್ನ ಪ್ರಾಣ
ಎಂದುಕೊಂಡು ಮನ ಕಟ್ಟಿತ್ತು ತೋರಣ.............

ಇಂದೇಕೆ ಬೇಡ ನಾ ನಿನಗೆ
ಗೆದ್ದಿತೆ ಆಸೆ ಲೋಭವು ಕೊನೆಗೆ............
 ಇದರ ಕಾರಣ ತಿಳಿಯುವುದೇ ಅನುಮಾನ
ಒಳಗೂ ಹೊರಗೂ ಬರೀ ಮೌನ......

ಮುಳ್ಳಿನ ನಡುವೆ ಹೂ ನಗುವಂತೆ
ನೋವಲ್ಲೂ ನಗುವ ಈ ಮುಖವಾಡದಂತೆ........
ನಾಟಕವಾಡಿದೆ ಬದುಕ ರಂಗದಲಿ
ಕಳೆದುಹೋದ ಪ್ರೀತಿಯ ನೆನಪಿನಲ್ಲಿ...........

ಈ ಪ್ರೀತಿ ನನ್ನ ಸಾಯಿಸಲಿಲ್ಲ
ನೆಮ್ಮದಿಯಲಿ ಬದುಕಲೂ ಬಿಡಲಿಲ್ಲ........
ಆದರೂ ಜೀವಿಸಿದೆ ಜೀವನಕಾಗಿ
ಕಾಣದ ಪ್ರೀತಿಯ ಭರವಸೆಗಾಗಿ...........


Tuesday, July 20, 2010

ರತಿದೇವಿಯ ತಂಗಿಯೇ

ಆರೋಗ್ಯ ಕೈಕೊಟ್ಟು  ಹತ್ತು ದಿನ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಬ್ಲಾಗ್ ಲೋಕದತ್ತ ಬರಲಾಗಿರಲಿಲ್ಲ. ಯಾರ ಬ್ಲಾಗಿಗೂ ಬೇಟಿ ಕೊಡಲಿಲ್ಲ. ದಯವಿಟ್ಟು ಕ್ಷಮಿಸ್ತೀರಲ್ಲ!ಈಗ ಮನೆಯಲ್ಲಿ ಬೆಡ್ ರೆಸ್ಟ್ ತೆಗೆದುಕೊಳ್ತಾ ಇದ್ದೇನೆ. ಜೊತೆಗೇ ನನ್ನ ಲ್ಯಾಪ್ ಕೂಡ ನನ್ನ ಕೈ ಸೇರಿದೆ! ಇನ್ನು ಎಲ್ಲಾ ಗೆಳೆಯರ ಬ್ಲಾಗಿಗೂ ಬರುತ್ತೇನೆ.

ಈ ಕವನ ಸುಮಾರು ಎಂಟು ವರ್ಷಗಳ ಹಿಂದೆ ಅವಳನ್ನು ನೋಡಿದಾಗ ಬರೆದದ್ದು. ಡೈರಿಯ ಯಾವುದೋ ಮೂಲೆಯಲ್ಲಿದ್ದ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ. ಹೇಗಿದೆ ಅಂತ ಹೇಳಿ. 
ಆಕೆಯಿಂದ ಬಂದ ಅಭಿಪ್ರಾಯ ಏನು ಗೊತ್ತಾ?
"ತುಂಬಾ ಕೆಟ್ಟದಾಗಿದೆ"
ನಿಜವಾಗಿಯೂ ಅಷ್ಟು ಕೆಟ್ಟದಾಗಿದೆಯಾ? ನೀವೇ ಹೇಳ್ಬೇಕು.................


ಆಕೆಯ  ಕುಡಿನೋಟಕೆ .....
ಬಳುಕುವ  ವಯ್ಯಾರಕೆ..........
ನಾ ಮರೆತು ಹೋದೆ ಜಗವಾ
ನಾ ಮರೆತು ಹೋದೆ ಜಗವಾ

ಮನ್ಮನ ರಾಣಿಯ ಹೋಲುವ ನೀನು
ರತಿದೇವಿಯ ತಂಗಿಯೇ
ಆಗಸದಿಂದ ಧರೆಗಿಳಿದ ರಂಭೆ
ಊರ್ವಶಿಯ ಪ್ರತಿರೂಪವೇ...........

ನವಿಲ ನಾಟ್ಯದಂತೆ ನಿನ್ನ ನಡಿಗೆ
ಲತೆಯು ಬಳುಕುವಂತೆ ನಿನ್ನ ನಡುಗೆ
ನವಿಲೇ ಸೋತು ನಾಟ್ಯವ ಮರೆತು
ನಿನಗಾರು ಸಾಟಿ ಚಲುವೆ ಎಂದಿತು............

ಮೋಹದ ಆಸೆಯ ಕಂಗಳ ಕಾಂತಿಗೆ 
ನಾ ಸೋತೆ ನಿನ್ನದರಕೆ
ಸೇಬಿನ ಬಣ್ಣದ ಕೆಂಪು ಕೆನ್ನೆಗೆ
ಬೆರಗಾದೆ ಸೌಂದರ್ಯಕೆ..............

ಹೃದಯವು ಹಾಡಿತು ಮೋಹದಿಂದಲಿ
ಪ್ರೀತಿ ತುಂಬಿದ ಬಯಕೆಯಿಂದಲಿ
ಸಹಿಸಲಾರೆ ನಾ ಈ ತವಕ 
ನೀ ಒಲಿದರೆ ಜನುಮ ಸಾರ್ಥಕ................

 ಚಲುವೆ ಮೋಹದೀ ನುಡಿಸು ನೀ 
ನನ್ನ ಹೃದಯದ ವೀಣೆಯಾ 
 ಹೊಸಹೊಸ ರಾಗವ ಹಾಡುತ ಗೆಳತಿ
ಈ ಜೀವ ಉಳಿಸುವೆಯಾ............

ಒಲಿದು ಬಾರೆ ರತಿಯ ತಂಗಿಯೇ
ಪ್ರೀತಿ ತಾರೆ ಈ ಬರಡು ಜೀವಕೆ
ದೀಪವಾಗಿ ಬಾಳ ಬೆಳಗಿಸು 
ಬೇಡವಾದರೆ ಈ ಉಸಿರ ನಿಲ್ಲಿಸು................

Tuesday, July 6, 2010

ಸವಿನೆನಪು





ನಾವೂ ಅಲ್ಪಸ್ವಲ್ಪ ಪುಣ್ಯವಂತರು ಅಂತ ಸಾಬೀತಾಯಿತು. ಬೆಂಕಿಯಂತೆ ಸುಡುತ್ತಿದ್ದ ದೆಹಲಿ ಈಗ ಧೋ ಎಂದು ಸುರಿವ ಮಳೆಗೆ ತಣ್ಣಗಾಗಿದೆ. ಮೋರಿಯಿಂದ ಹರಿದ ನೀರಿನಿಂದ ತುಂಬಿರುತ್ತಿದ್ದ ಯಮುನೆ ಮಳೆನೀರಿನಿಂದ ಶುದ್ಧವಾಗುತ್ತಿದೆ! ರಸ್ತೆಗಳೇ ನಡಿಯಾಗುತ್ತಿವೆ. ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲುವಂತಾಗಿದೆ.




ಇಂದು ಯಾಕೋ ಮನೆಯ ನೆನಪು ತುಂಬಾ ಕಾಡ್ತಾ ಇದೆ. ಮಲೆನಾಡಿನ ಮಳೆಗಾಲದ ಸುಂದರ ದೃಶ್ಯಗಳು ಅತಿಯಾಗಿ ನೆನಪಾಗುತ್ತಿವೆ. ಎಡೆಬಿಡದೆ ಧೋ ಎಂದು ಸುರಿವ ಬಿರುಮಳೆ, ಕುಳಿರ್ಗಾಳಿ ಮಿಂಚು ಗುಡುಗು ಸಿಡಿಲು, ತುಂಬಿಹರಿವ ಹಳ್ಳ ಕೊಳ್ಳ ಹೊಳೆ ನದಿಗಳು, ಕಂಬಳಿ ಕೊಪ್ಪೆ ಹೊದ್ದು ಹೊಲ ಉಳುವ ರೈತ, ನಾಟಿ ಮಾಡುವ ಹೆಂಗಸರು, ಅಡಿಕೆ ತೋಟದ ಔಷಧಿ ಹೊಡೆಯುವ ಕಾರ್ಯದಲ್ಲಿ ನಿರತ ಗಂಡಸರು, ಹೆಮ್ಮೆಯಿಂದ ಹಸಿರು ಹುಲ್ಲು ಮೇಯುವ ದನಕರುಗಳು..............ಒಂದಾ ಎರೆಡಾ?
ಹೀಗೆ ಮಲೆನಾಡಿನ ಸೌಂದರ್ಯಗಳನ್ನು ವರ್ಣಿಸುತ್ತಾ ಹೋದರೆ ಮುಗಿಯುವುದೇ ಇಲ್ಲ!



ಸದಾ ಬೆಳ್ಮುಗಿಲು ಮುಚ್ಚಿಕೊಂಡಿರುವ ಕುಂದಾದ್ರಿ ಬೆಟ್ಟ, ಬರೆ ಬೆಟ್ಟ, ಕೆಂಪಗೆ ಬಣ್ಣದೋಕುಳಿ ಹರಿದಂತೆ ಕಾಣುವ ಮಾಲತಿ ನದಿ, ತಾ ಸಾಗುವ ದಾರಿಯಲ್ಲಿ ನೂರಾರು ಜಲಪಾತಗಳನ್ನು ಸೃಷ್ಟಿಸಿಕೊಂಡು ಕಣ್ಮನ ತಣಿಸುವ ನಮ್ಮೂರ ಹೊಳೆ, ಬರೆ ಬೆಟ್ಟದ ಹೆಬ್ಬಂಡೆಯ ಮೇಲಿಂದ ನೀರಿಳಿಯುವಾಗ ಆಗಸದಿಂದ ಹಾಲಿನ ಹೊಳೆ ಹರಿದಂತೆ ಕಾಣುವ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆ ಪ್ರಾಕೃತಿಕ ಸೌಂದರ್ಯ ಕಾಂಕ್ರೀಟ್ ಕಾಡಿನಲ್ಲಿ ಎಲ್ಲಿಂದ ಬರಲು ಸಾಧ್ಯ!



ನಾವು ಚಿಕ್ಕವರಿದ್ದಾಗ ನಮ್ಮ ಆಟ ಪಾಠಗಳೇನು. ತಿನ್ನುವ ಯಂತ್ರಗಳು ನಾವು! ಈಗಿನ ಹಾಗೆ ತಿಂದಿದ್ದು ಸ್ವಲ್ಪ ಹೆಚ್ಚು ಕಡಿಮೆಯಾದರೆ  ಅಜೀರ್ಣ ಆಗ್ತಾ ಇರ್ಲಿಲ್ಲ. ತಣ್ಣಗೆ ಕೊರೆವ ಚಳಿಗೆ ಬೇಯಿಸಿದ ಬಿಸಿಬಿಸಿ ಗೆಣಸು ತಿನ್ನುವಾಗ ಎಷ್ಟು ಸುಖ! ಸಂಗ್ರಹಿಸಿಟ್ಟ ಹಲಸಿನ ಬೀಜಗಳನ್ನು ಸುಟ್ಟೋ, ಬೇಯಿಸಿಯೋ ತಿನ್ನುವಾಗ ಸ್ವರ್ಗ ಯಾಕೆ ಬೇಕು? ಜಾಯಮಾನವೆಲ್ಲ ಹೀಗೆ ಕಳೆಯುವ ಆಸೆ ಯಾರಿಗೆ ಆಗುವುದಿಲ್ಲ ಹೇಳಿ? ಏನಾದರೂ ತಿನ್ನುವ ಮನಸಾದಾಗ ಕುಚ್ಚಲಕ್ಕಿ ಹುರಿದು ಬೆಲ್ಲದೊಂದಿಗೆ ಕಲಸಿ ಬಿಸಿಬಿಸಿ ಉಂಡೆ ಮಾಡಿ ತಿಂದರೆ ಆಹಾ! ಓಹೋ! ಈಗಿನ ಡೈರಿ ಮಿಲ್ಕು, ಫೈ ಸ್ಟಾರೂ, ಕ್ರಂಚು, ಮಂಚುಗಳೆಲ್ಲ ನಮಗೆಲ್ಲಿತ್ತು ಸ್ವಾಮಿ, ಇವುಗಳೇ ನಮಗೆ ಸರ್ವಸ್ವ ಅಲ್ವಾ? ದೊಡ್ಡವರೆಲ್ಲ ಗದ್ದೆ ತೋಟಕ್ಕೆಂದು ಕೆಲಸಕ್ಕೆ ಹೋಗಿ ಸಂಜೆ ಬರುವುದರೊಳಗೆ ನಮ್ಮ ಲೂಟಿಗಳೇನು ಕಡಿಮೆ ಅಗ್ತಿತ್ತೆ? ಹರವೆ, ಬುಟ್ಟಿ ಸಂದು ಗೊಂದುಗಳಲ್ಲಿ ಮುಚ್ಚಿಟ್ಟ ಹಲಸಿನಕಾಯಿ ಹಪ್ಪಳ, ಅಕ್ಕಿ ಹಪ್ಪಳಗಳು ಕೆಮು ಕೆಂಡದಲ್ಲಿ ಬೆಚ್ಚಗಾಗಿ ನಮ್ಮ ಬಾಯಿ ಸೇರುತ್ತಿದ್ದವು.ಅಮ್ಮ ಹಬ್ಬದಲ್ಲಿ ಮಾಡಿ ತುಂಬಿಟ್ಟ ಅತ್ರಸ, ಕಜ್ಜಾಯ ಚಕ್ಕುಲಿಗಳು ಸದ್ದಿಲ್ಲದೇ ಹೊಟ್ಟೆ ಸೇರುತ್ತಿದ್ದವು. ಮಳೆಯ ತಣ್ಣಗಿನ ಚಳಿಗೆ ಇಂತಹ ತಿಂಡಿಗಳೇ ನಮ್ಮ ಬೆಚ್ಚಗಿನ ಜೊತೆಗಾರ! ತಿಂಗಳಿಗೊಮ್ಮೆ ಅಪ್ಪ ತರುತ್ತಿದ್ದ ಶುಂಟಿ ಪೆಪ್ಪರಮೆಂಟು ಮಾತ್ರ ಆಗಿನ ನಮ್ಮ ಕ್ರಂಚು ಮಂಚು ಎಲ್ಲಾ!

ಅಪ್ಪ ಬುದ್ಧಿವಂತರು! ಸುಮಾರು ಎಂಟತ್ತು ಮಕ್ಕಳು ತುಂಬಿದ್ದ ಅವಿಭಕ್ತ ಕುಟುಂಬ ನಮ್ಮದು(ಈಗ ಇಲ್ಲ ಬಿಡಿ). ಅದಕ್ಕೆಂದೇ ಅಪ್ಪ ಶುಂಟಿ ಪೆಪ್ಪರಮೆಂಟು ತರ್ತಾ ಇದ್ದಿದ್ದು. (ಆಗ ಒಂದು ರುಪಾಯಿಗೆ ೨೦ ಪೆಪ್ಪರಮೆಂಟುಗಳು ಬರ್ತಾ ಇದ್ದವು!)  ಎಲ್ಲರಿಗೂ ಒಂದೊಂದು ಕೊಡ್ತಾ ಇದ್ದರು!



ಮಳೆಗಾಲವೆಂದರೆ ನನಗಂತೂ ಬಹಳ ಅಚ್ಚುಮೆಚ್ಚು. ನೀರಿನಲ್ಲಿ ಕುಣಿದು ಕುಪ್ಪಳಿಸಿ ಆಡಿದ ದಿನಗಳೇನು, ಬಿರುಮಳೆಯಲ್ಲಿ ಗಾಳಿಗೆ ಛತ್ರಿ ಹಾರಿ ಹೋದರೆ ಅಪ್ಪನ ಬೆತ್ತದ ಪೆಟ್ಟು ಬೀಳುವುದೆಂಬ ಭಯದಿಂದ ಶಾಲೆಯಿಂದ ಮನೆಯವರೆಗೂ ಎಂಟು ಕಿ. ಮೀ. ನಡೆದು ಬರುವಾಗ ದಿನಾ ನೆನೆದೇ ಸಾಗುವ ಕ್ಷಣಗಳೇನು? ಯಾವ ಶೀತ ಜ್ವರಗಳೂ ನಮ್ಮ ಹತ್ತಿರ ಸುಳಿಯುತ್ತಿರಲಿಲ್ಲ. ದಿನಾ ಶಾಲೆಗೇ ಹೋಗುವಾಗ ಹಲವಾರು ಹಳ್ಳ ಹೊಳೆಗಳನ್ನು ದಾಟಿ ಹೋಗುವ ಸಂದರ್ಭ ಅದೇನು ಖುಶಿ! ಒಮ್ಮೊಮ್ಮೆ ಎದೆಯವರೆಗೂ ತುಂಬಿ ರಭಸದಿಂದ ಹರಿವ ನೀರಿನಲ್ಲಿ ದಾಟಿ ಬರುತ್ತಿರಲಿಲ್ಲವೇ? ಮರದ ದಿಮ್ಮಿಯ ಸಾರವೋ ಅಥವಾ ಎರಡು ಮೂರು ಅಡಿಕೆ ಮರದಿಂದ ಮಾಡಿದ ಸಾರ(ಸಂಕ)ವೋ ಸುಲಲಿತವಾಗಿ ದಾಟುತ್ತಿರಲಿಲ್ಲವೇ? ಯಾವ ಮಕ್ಕಲಾದರೂ  ಹಳ್ಳ ಹೊಳೆಯಲ್ಲಿ ತೇಲಿ ಹೋದ ಪ್ರಸಂಗಗಳಿವೆಯೇ? ಯಾರೋ ಕೊಚ್ಚಿಹೋದ ಕತೆ ಇದೆಯೇ? ಇಡೀ ನಮ್ಮೂರಿನ ಇತಿಹಾಸದಲ್ಲಿ ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ!



 ನಾವು ಆಗಾಗ ಕೇಳುತ್ತಿರುತ್ತೇವೆ. ಈಜಲು ಹೋದ ಬಾಲಕರು ನೀರುಪಾಲು, ಮಳೆಯ ರಭಸಕ್ಕೆ ಕೊಚ್ಚಿಹೋದ ಬಾಲಕ, ನದಿ ವಿಹಾರಕ್ಕೆ ಹೋದ ದಂಪತಿಗಳು ನೀರಿನಲ್ಲಿ ಕಾಲು ಜಾರಿ ಬಿದ್ದು ದುರ್ಮರಣ! ಇದೆಲ್ಲಾ ನಗರ ಪೇಟೆಗಳಲ್ಲಿ ಹುಟ್ಟಿ ಬೆಳೆದವರ ದುರಾದೃಷ್ಟ! ಅರ್ಧ ಜಾಯಮಾನವನ್ನು ನೀರಿನಲ್ಲೇ ಕಳೆಯುವ ಒಬ್ಬ ಮಲೆನಾಡಿಗ ನೀರಿನಲ್ಲಿ ಆಕಸ್ಮಿಕ ಅಂತ್ಯಕಂಡ ಉದಾಹರಣೆ ಒಂದಾದರು ಇವೆಯಾ?  ನಾನು ಇದುವರೆಗೆ ಕೇಳಿಲ್ಲ!

ಕಂಪ್ಯೂಟರ್, ಟ್ಯುಶನ್, ಸ್ಕೂಲು, ಹೋಂ ವರ್ಕು ಅಂತ ಸದಾ ನಿರತರಾಗುವ ಪೇಟೆಯ ಮಕ್ಕಳಿಗೆ ಮಲೆನಾಡಿನ ಹಳ್ಳಿಯ ಸುಖದ ಕಲ್ಪನೆ ಇದೆಯಾ? ಒಮ್ಮೆ ಆ ರುಚಿ ಹತ್ತಿದರೆ ಎಂದೆಂದೂ ಬಿಡಲಾರರು. ಏನಂತೀರಾ?

ಅದಕ್ಕೆ ಆದಷ್ಟು ಬೇಗ ಊರಿಗೆ ಹೊರಡಲು ಯೋಚಿಸುತ್ತಿದ್ದೇನೆ. ಅಮ್ಮ ಒಂದಿಷ್ಟು ಹಲಸಿನ ಬೀಜಗಳನ್ನು ಸಂಗ್ರಹಿಸಿ ಇಟ್ಟಿದ್ದಾಳೆ. ತಮ್ಮ ಮುರುಗನ ಹುಳಿಯನ್ನು ಒಟ್ಟು ಮಾಡಿದ್ದಾನೆ. ಹುಳಿ  ಸಿಪ್ಪೆ ಅವನಿಗೆ ಮಾರಲು, ಅದರ ಬೀಜ ಎಣ್ಣೆ ತೆಗೆಯಲು! ಮನೆ ಖರ್ಚಿಗೆ ಇದೇ ಎಣ್ಣೆ ನಾವು ಉಪಯೋಗಿಸುವುದು! ನನ್ನ ಮುದ್ದಿನ ಬಂಗಾರಿ (ನಾನು ಹಾಲುಂಡು ಬೆಳೆದ ಗೌರಿಯ ಮರಿಮಗಳು!) ಕರು ಹಾಕಿದೆ. ಅದರ ಜೊತೆಗೇ ಮಂಗಳಾ ಕೂಡಾ ಮುದ್ದಾದ ಹೆಣ್ಣು ಕರುವಿನ ತಾಯಿಯಾಗಿದ್ದಾಳಂತೆ! ಅಮ್ಮ ಈಗಿಂದಲೇ ನನಗಾಗಿ ತುಪ್ಪ ಸಂಗ್ರಹಿಸುತ್ತಿದ್ದಾರಂತೆ.

ನನ್ನದೊಂದು ಅಭ್ಯಾಸ ಇದೆ ಗೊತ್ತಾ?

ಅದೇನಪ್ಪಾ ಅಂದ್ರೆ................

ನಗಬಾರದು ಮತ್ತೆ............!

ನಾನು ಸಣ್ಣವನಿದ್ದಾಗ ನನ್ನ ಅಜ್ಜಿ ಕಲಿಸಿದ್ದು!



ಅಜ್ಜಿ ಹಾಲು ಕರೆಯುವಾಗ ನನ್ನನ್ನು ಕೊಟ್ಟಿಗೆಗೆ ಕರೆದು ಆಗಷ್ಟೇ ಕರೆದ  ಬಿಸಿ ಬಿಸಿ ನೊರೆ ಹಾಲನ್ನು ಕುಡಿಸುತ್ತಿದ್ದಳು! ಮಾವ ನೋಡಿದರೆ ಬಯ್ಯುವ ಭಯದಿಂದ!  ಆ ಬೆಚ್ಚಗಿನ ನೊರೆಹಾಲ ರುಚಿ ಕಂಡುಕೊಂಡ ನಾನು ಮುಂದೇ ನಾನೇ ಹಾಲು ಕರೆಯುವ ನೆಪವೊಡ್ಡಿ ನೇರವಾಗಿ ಗೌರಿಯ ಕೆಚ್ಚಲಿಗೆ ಬಾಯಿ ಹಾಕುತ್ತಿದ್ದೆ! ಎಷ್ಟಾದರೂ ಅವಳು ನನ್ನ ತಾಯಿ ಅಲ್ವಾ? ಆ ಅಭ್ಯಾಸ ಈಗಲೂ ಮುಂದುವರೆದಿದೆ. ಮನೆಗೆ ಹೋದರೆ ದನದ ಹಾಲು ಕರೆಯುವುದು ನಾನೇ, ನಾನು ಹಾಲು ಕರೆದರೆ ಅಮ್ಮ ಏನಂತಾರೆ ಗೊತ್ತಾ? "ಪವಿ, ಯಾಕೋ ನೀನು ಹಾಲು ಕರೆದರೆ ಕಡಿಮೆ ಹಾಲು ಕೊಡ್ತಾವೆ ದನಗಳು. ಪರಿಚಯ ಆಗದೆ ಹೀಗೆ ಮಾಡ್ತಾವಾ?" ಅಂತ!  ಮುಂದಿನದ್ದು ನಿಮಗೆ ಅರ್ಥ ಆಯ್ತಲ್ವಾ? ಪಾಪ ಅಮ್ಮನಿಗೆಲ್ಲಿ ಗೊತ್ತು ಮಗನ ಕಲ್ಯಾಣ ಗುಣ!
ಈ ಗುಟ್ಟನ್ನು ಎಲ್ಲಾದರು ಅಮ್ಮನಿಗೆ ಹೇಳೀರಾ  ಕೊನೆಗೆ, ಆಮೇಲೆ ಕೊಟ್ಟಿಗೆಗೆ ಪ್ರವೇಶ ನಿಷೇಧವಾಗುತ್ತದೆ!

Sunday, June 13, 2010

ಮಲ್ಲಣ್ಣನ ಮಹಾ ಮಾನವೀಯತೆ!....

ನಮ್ಮ ಮಲ್ಲಣ್ಣ ಒಂತರಾ ವಿಚಿತ್ರ ಮನುಷ್ಯ. ಅವನಿಗೆ ಯಾವಾಗ ಏನೇನು ವಿಚಾರಗಳು ಹೊಳೆಯುತ್ತವೆಯೋ 
ಅವನಿಗೂ ಗೊತ್ತಿಲ್ಲ. ಸದಾ ಒಂದಲ್ಲ ಒಂದು ಪಜೀತಿಯಲ್ಲಿ ಸಿಕ್ಕಿಹಾಕಿಕೊಳ್ತಾ ಇರ್ತಾನೆ....

ಇಂತಿರಲೊಂದು ದಿನ  ಮೂರ್ಖ ಪೆಟ್ಟಿಗೆಯಲ್ಲಿ ಯಾವುದೋ ಕಣ್ಣೀರು ತುಂಬಿದ ದಾರವಾಹಿ ನೋಡಿ ನಗುತ್ತಾ 
ಕುಳಿತಿದ್ದ(?) ನಮ್ಮ ಮಲ್ಲರ ಮಲ್ಲ!
ಇದ್ದಕ್ಕಿದ್ದಂತೆ ಜಾಹಿರಾತು ಶುರು! ಎಷ್ಟಾದರೂ ದಾರಾವಾಹಿಗಳು ಜಾಹಿರಾತಿನ ಒಂದು ಭಾಗ ತಾನೇ? ಅದ್ಯಾವುದೋ
ಧ್ವಿಚಕ್ರ ವಾಹನದ ಪ್ರಚಾರ! ಟ್ರಾಫಿಕ್ ಸಿಗ್ನಲ್ ನಲ್ಲಿ ಒಂದು ಹುಡುಗ ಹುಡುಗಿ ನಳನಳಿಸುವ ಚಂದದ ದ್ವಿಚಕ್ರ ವಾಹನದಲ್ಲಿ
ಕುಳಿತಿದ್ದಾರೆ. ಅವರ ಪಕ್ಕದಲ್ಲಿದ್ದ ಕಾರಿನಿಂದ ನೀರು ಕುಡಿದು ಖಾಲಿ ಬಾಟಲಿ ಹೊರಗೆಸೆದು ಕಾರು ಮುಂದೆ ಹೋಗುತ್ತದೆ. 
ಖಾಲಿ ಬಾಟಲಿ ಎತ್ತಿಕೊಂಡು ಅವರಿಬ್ಬರೂ ಕಾರನ್ನು ಹಿಂಬಾಲಿಸುತ್ತಾರೆ. ಹೊಂಡ  ಗುಂಡಿ ಮೆಟ್ಟಿಲು ಚರಂಡಿ ಎಲ್ಲೆಲ್ಲೂ 
ಸಲೀಸಾಗಿ ಓಡುವ  ಬಂಡಿ! ಅಂತೂ ಕೊನೆಗೆ ಇನ್ನೊಂದು ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರು ನಿಂತಿರುತ್ತದೆ. ಆ ಹುಡುಗಿ ಖಾಲಿ
ಬಾಟಲಿಯನ್ನು ಅದೆ ಕಾರಿನೊಳಗೆ ಹಾಕಿ ಟಾಟ ಮಾಡಿ ಹೋಗುತ್ತಾರೆ!

ಇದಿಷ್ಟು ಆ ಜಾಹಿರಾತು! ಈ ಜಾಹಿರಾತಿನಿಂದ ಮಲ್ಲಣ್ಣ ಬಹಳ ಪ್ರೇರಿತನಾಗುತ್ತಾನೆ. ಏನಾದರೂ ಸಮಾಜ ಕಲ್ಯಾಣ
ಕಾರ್ಯ ಮಾಡಬೇಕೆಂಬ ಮಹದಾಸೆ ಮಲ್ಲಣ್ಣನ ಮನದಲ್ಲಿ ಮೂಡುತ್ತದೆ.

ಎಂದಿನಂತೆ ಮಲ್ಲಣ್ಣ ಆಫೀಸಿಗೆ ಬೈಕಿನಲ್ಲಿ ಹೋಗ್ತಾ ಇದ್ದ. ಸಿಗ್ನಲ್ಲಿನಲ್ಲಿ ನಿಂತಿದ್ದ ಅವನ ಪಕ್ಕ ಒಂದು ಕಾರು ಬಂದು ನಿಂತಿತು.
ಅದರಲ್ಲಿ ಮೂರ್ನಾಲ್ಕು ಹುಡುಗರು ಜೋರಾಗಿ ಮ್ಯುಸಿಕ್ ಹಾಕಿಕೊಂಡು ತಾವೂ ಹಾಡುತ್ತಾ ಕೇಕೆ ಹಾಕುತ್ತಿದ್ದರು. ಕುಡಿದ ನೀರಿನ
 ಖಾಲಿ ಬಾಟಲಿಯೊಂದನ್ನು ಹೊರಗೆಸೆದ ಹುಡುಗರು ಕಾರನ್ನು ರೊಯ್ಯನೆ ಮುಂದಕ್ಕೆ ಓಡಿಸಿದರು.

ಈ ದೃಶ್ಯವನ್ನು ಕಂಡ ನಮ್ಮ ಮಲ್ಲಣ್ಣನ ಮಾನವೀಯತೆ ಜಾಗೃತಗೊಳ್ಳುತ್ತದೆ. ಜಾಹಿರಾತು ಸ್ಮೃತಿ ಪಟಲದ ಮೇಲೆ ಮೂಡಿ
ಮರೆಯಾಗುತ್ತದೆ. ಬಾಟಲಿ ಎತ್ತಿಕೊಂಡು ಕಾರಿನ ಹಿಂದೆ ಓಡುವ ಮನಸ್ಸು ಮಾಡುತ್ತಾನೆ. ಆದರೆ ಆ ಬಾಟಲಿಯೇ ಬಿದ್ದ ಸ್ಥಳದಲ್ಲಿ
ಇರಲಿಲ್ಲ! ಎಲ್ಲಾ ವಾಹನಗಳ ಚಕ್ರದಡಿ ಸಿಕ್ಕಿ ರಸ್ತೆಯ ಯಾವ ಮೂಲೆ ಸೇರಿತ್ತೋ ಬಲ್ಲವರಾರು?

ಆ ಬಾಟಲಿ ಇಲ್ಲದಿದ್ದರೇನಂತೆ? ಖಾಲಿ ಬಾಟಲಿಗಳಿಗೆ ಬರವೇ......! ರಸ್ತೆಬದಿಯಲ್ಲಿ ಬಿದ್ದಿದ್ದ ಹಳೆ ಬಾಟಲಿಯನ್ನೇ ಎತ್ತಿಕೊಂಡು
ಹೊರಟ ಮಲ್ಲಣ್ಣ.

ಬೈಕ್ ವೇಗವಾಗಿ ಓಡಿಸುತ್ತಾ ಕಾರನ್ನು ಹಿಂಬಾಲಿಸಿದ. ಹೊಂಡ ಗುಂಡಿ ಮೆಟ್ಟಿಲುಗಳ ಮೇಲೆ ಬೈಕ್ ಓಡಿಸುವ ಸಾಹಸ ಮಾತ್ರ 
ಮಾಡಲಿಲ್ಲ!
ಅಂತೂ ಕೊನೆಗೆ ಆ ಕಾರನ್ನು ಹಿಡಿದೇ ಬಿಟ್ಟ. ನಿಂತ ಕಾರಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾರಿನ ಗಾಜು ತಟ್ಟಿದ ಥೇಟ್ ಜಾಹಿರಾತಿನ 
ಶೈಲಿಯಲ್ಲಿ! ಕಿಟಕಿ ಗಾಜು ಕೆಳಗಿಳಿಯುತ್ತಿದ್ದಂತೆ ಬಾಟಲಿಯನ್ನು ಕಾರೊಳಗೆ ಎಸೆದು ಟಾಟಾ ಮಾಡಿ  ಬೈಕ್ ಮುಂದಕ್ಕೆ ಓಡಿಸಿದ 
ಮಲ್ಲಣ್ಣ!

ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಪಜೀತಿ ಶುರು ಆಗಿದ್ದೇ ಆಗ!

ಕಾರಿನೊಳಗೆ ಇದ್ದ ಹುಡುಗರ ಪಿತ್ತ ನೆತ್ತಿಗೇರಿತು. ಜೊತೆಗೇ ಬೀರಿನ ಕುಮ್ಮಕ್ಕು ಇತ್ತೆನ್ನಿ! ಮಲ್ಲಣ್ಣನ ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿದ
ಹುಡುಗರು ಕಾರಿನಿಂದ ಕೆಳಗಿಳಿದರು. ಬಲವಾದ ಹಸ್ತವೊಂದು ಮುಖಕ್ಕೆ ಅಪ್ಪಳಿಸಿದ್ದಷ್ಟೇ ಗೊತ್ತು. ಮುಂದೇ ಮಲ್ಲಣ್ಣ ಆಸ್ಪತ್ರೆಯ
ಹಾಸಿಗೆಯಲ್ಲೇ ಕಣ್ ತೆರೆದಿದ್ದು! ಆಸ್ಪತ್ರೆಯಿಂದ ಮೂರು ದಿನದ ನಂತರ ಮನೆಗೆ ಬಂದ ಮಲ್ಲಣ್ಣ ಮತ್ತೆ ಆ ಜಾಹಿರಾತನ್ನು ನೋಡಲೇ ಇಲ್ಲ! 

ಒಂದು ವಿಷಯ ಅವನಿಗೆ ಅರ್ಥವಾಗದೆ ಉಳಿದಿತ್ತು. ಅದೇನೆಂದರೆ ಜಾಹಿರಾತಿನಲ್ಲಿ ಈ ಭಾಗವನ್ನು ಯಾಕೆ ತೋರಿಸಲಿಲ್ಲ?
ನಿಮಗೇನಾದರೂ ಕಾರಣ ಗೊತ್ತಿದ್ದರೆ ಪಾಪ ನಮ್ಮ ಮಲ್ಲಣ್ಣನಿಗೆ ಸ್ವಲ್ಪ ತಿಳಿಸ್ತೀರಾ? ಬಾರೀ ತಲೆ ಕೆಡಿಸಿಕೊಂಡು ಯೋಚಿಸ್ತಿದ್ದಾನೆ!

Sunday, June 6, 2010

ಪರಿಣಾಮ.........?





 ನನ್ನೆದೆಯ ಮೇಲೆ 
ಒರಗಿದ್ದ ನನ್ನಾಕೆ
ಮುಂಗುರುಳ ತೀಡಿ 
ಸಿಹಿಮುತ್ತನಿತ್ತಳು...........!

ಪರಿಣಾಮ...........?
 ಅತಿ ಮಧುರ 
ಸುಖದಲ್ಲಿ
ಮೈಮರೆತಿದ್ದಾಗ
ತಣ್ಣೀರ ತಂದು 
ತಲೆಮೇಲೆ ಸುರಿದಿದ್ದಳು........!

ಸುಂದರ ಸವಿಗನಸು
ಕಂಡು ಕಣ್ ಬಿಟ್ಟರಲ್ಲಿ
ಕೆಂಗಣ್ಣ ಮೀನಾಕ್ಷಿಯ
 ದುರುಗುಟ್ಟುತ್ತಿದ್ದಳು..........!
 ಖಾಲಿ ಬಿಂದಿಗೆ 
ಹಿಡಿದ ನನ್ನಾಕೆ
ಕನಸಿಗೂ ವಾಸ್ತವಕೂ
ಹೋಲಿಕೆಯೇ ಇಲ್ಲದಂತೆ...........!




Sunday, May 30, 2010

"ಹೀಗೊಬ್ಬಳು ಮದುಮಗಳು"


ಹುಡು ಹುಡುಕಿ ದಣಿದ ಮೇಲೆ 
ಸಿಕ್ಕಳಾಕೆ ಕಡು ಕಷ್ಟದಲ್ಲಿ......!
ಜೊತೆ ಹಿಡಿದೇ ನಡೆದೆ
ಬಿಡಲಾರದ ಪ್ರೀತಿಯಿಂದಲಿ......!

ಆಕೆಯೋ ಮದುಮಗಳು 
ವರಕವಿಯ ಪ್ರೀತಿಯ ಮಗಳು.......!
ಅವಳೆಂದರೆ ನನಗೆ ಬಹಳ ಪ್ರೀತಿ 
ಬಿಡಿಸಲಾಗದ ನಂಟು ಯಾಕೋ ಆ ರೀತಿ.......!

ಕುಂತಲ್ಲಿ ನಿಂತಲ್ಲಿ ಅವಳದೇ ಧ್ಯಾನ
ಮಲಗಿದರೂ ನಾ ಬಿಡಲಾರೆ ಅವಳನ್ನ....!
ಕೆಲಸದಲ್ಲೂ ಕಾಡುವಳು ನೆನಪಾಗಿ 
ಮಲಗಿದರೂ ಕಚಗುಳಿಯಿಡುವಳು ತುಂಟಿಯಾಗಿ......!

ಮದುಮಗಳ ಸ್ನೇಹ ನಾ ಬಿಡಲಾರೆ
ಉಸಿರಿರುವವರೆಗೂ ನಾ ಮರೆಯಲಾರೆ......
ಅವಳೇ ರಾಷ್ಟ್ರಕವಿಯ ನಲ್ಮೆಯ ಮಗಳು
ಜ್ಞಾನಪೀಠ ತಂದಿತ್ತ  "ಮಲೆಗಳಲ್ಲಿ ಮದುಮಗಳು!"